ಸೌಹಾರ್ದ ರ್ಯಾಲಿ, ಮಂಗ್ಳೂರು ಬಂದ್ ಎಫೆಕ್ಟ್ ರೌಂಡಪ್
ಮಂಗಳೂರು, ಫೆಬ್ರವರಿ. 27 : ಕೇರಳ ಸಿಎಂ ಪಿಣರಾಯಿ ವಿಜಯನ್ ಆಗಮನವನ್ನು ವಿರೋಧಿಸಿ ಹಿಂದೂ ಸಂಘಟನೆಗಳು ಶನಿವಾರ ಬಂದ್ಗೆ ಕರೆ ಹಾಗೂ ಸಿಪಿಐಎಂ ಸಂಘಟನೆಯಿಂದ ಕೋಮು ಸೌಹಾರ್ದ ಸಮಾವೇಶದಿಂದಾಗಿ ಜನಸಾಮಾನ್ಯರ ಮೇಲಾದ ಪರಿಣಾಮದ ಒಂದು ರೌಂಡಪ್ ಇಲ್ಲಿದೆ.
ಶನಿವಾರ ಬಂದ್ ನಡೆದ ಹಿನ್ನಲೆಯಲ್ಲಿ ಕಚೇರಿ, ಕೂಲಿ ಕಾರ್ಮಿಕರು ಕೆಲಸಕ್ಕೆ ಹೋಗಲಾರದೆ ತೊಂದರೆ ಅನುಭವಿಸಿದ್ದಾರೆ. ಇದಲ್ಲದೆ ಅಂಗಡಿ ಮುಂಗಟ್ಟುಗಳು, ಮಾರುಕಟ್ಟೆ ವ್ಯಾಪಾರಿಗಳು ತೊಂದರೆ ಅನುಭವಿಸಿದ್ದಾರೆ.[ಮಂಗಳೂರು ಬಂದ್: ಪಿಯು ಪರೀಕ್ಷೆ ಬರೆಯಲು ವಿದ್ಯಾರ್ಥಿಗಳ ಒದ್ದಾಟ]
ಆರ್ಥಿಕ ತಜ್ಞರ ಪ್ರಕಾರ ಶನಿವಾರ ನಡೆದ ಬಂದ್ನಿಂದ ಜಿಲ್ಲೆಗೆ ಸುಮಾರು 150 ಕೋಟಿ ರು ಅಧಿಕ ನಷ್ಟವಾಗಿದೆ. ವಾರಾಂತ್ಯವಾಗಿದ್ದರಿಂದ ಸಾಮಾನ್ಯವಾಗಿ ನಗರದ ವಹಿವಾಟು ಒತ್ತಡದಲ್ಲಿರುತ್ತದೆ. ಒಟ್ಟಿನಲ್ಲಿ ಜಿಲ್ಲೆಯ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿತ್ತು.[ಪಿಣರಾಯಿ ಭೇಟಿ: ಕರ್ನಾಟಕ-ಕೇರಳ ಪೊಲೀಸರ ಎಸ್ಕಾರ್ಟ್ ಗಲಾಟೆ]

ನಷ್ಟವನ್ನು ಬಂದ್ ಕರೆಕೊಟ್ಟವರಿಂದಲೇ ವಸೂಲಿ
ಕೇರಳ ರಾಜ್ಯದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕರ್ನಾಟಕ ಭೇಟಿ ವಿರೋಧಿಸಿ ಮಂಗಳೂರಿನಲ್ಲಿ ನಡೆಸಿದ ಬಂದ್ ವೇಳೆ ಆಗಿರುವ ಸಾರ್ವಜನಿಕ ಆಸ್ತಿ ಹಾನಿಯ ನಷ್ಟವನ್ನು ಬಂದ್ ಗೆ ಕರೆ ನೀಡಿದ ಸಂಘಟನೆಗಳಿಂದಲೇ ವಸೂಲಿ ಮಾಡಲು ಕ್ರಮ ಕೈಗೊಳ್ಳುವುದಾಗಿ ಅರಣ್ಯ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.

ಪಿಯುಸಿ ಪರೀಕ್ಷೆ ಮೇಲೆ ಎಫೆಕ್ಟ್
ಬಂದ್ ನ ಹಿನ್ನಲೆಯಲ್ಲಿ ಶನಿವಾರ ಪ್ರಥಮ ಪಿಯುಸಿ ಗಣಿತ ಹಾಗೂ ಜಿಯೋಗ್ರಫಿ ಪರೀಕ್ಷೆಗೆ ಜಿಲ್ಲೆಯಲ್ಲಿ ಒಟ್ಟು 46 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ಒಟ್ಟು 17431 ವಿದ್ಯಾರ್ಥಿಗಳ ಪೈಕಿ 17385 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ವಿದ್ಯಾರ್ಥಿಗಳ ಗೈರಿಗೆ ನಿಖರವಾದ ಕಾರಣವನ್ನು ಹುಡುಕಿ ಪಿಯು ಮಂಡಳಿ ನಿರ್ದೇಶಕಿ, ಜಿಲ್ಲಾಧಿಕಾರಿ ಜತೆ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.

ನಗರದಾದ್ಯಂತ ಹೇಗಿತ್ತು ಬಿಗಿ ಬಂದೋಬಸ್ತ್
ನಗರ ಪೊಲೀಸ್ ಕಮಿಷನರ್ ಚಂದ್ರಶೇಖರ್ ಮತ್ತು ಜಿಲ್ಲಾ ಎಸ್ಪಿ ಭೂಷಣ್ ರಾವ್ ಬೋರಸೆ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ನಿಟ್ಟಿನಲ್ಲಿ ಗುರುವಾರದಿಂದಲೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿತ್ತು. ಚಿಕ್ಕಮಗಳೂರು ಎಸ್ಪಿ ಅಣ್ಣಾಮಲೈ ಮತ್ತು ಕಮಿಷನರ್ ಚಂದ್ರಶೇಖರ್ ಜತೆಯಾಗಿ ನಗರದಲ್ಲಿ ಸಂಚರಿಸಿ ಭದ್ರತೆಯನ್ನು ವೀಕ್ಷಿಸುತ್ತಿದ್ದರು. ಶನಿವಾರ ಬೆಳಗ್ಗೆಯಿಂದಲೇ ನಗರದಾದ್ಯಂತ ಹಲವೆಡೆ ದುಷ್ಕರ್ಮಿಗಳು ಬಸ್ಗೆ ಕಲ್ಲು ತೂರಾಟ ನಡೆಸಿ ಅಶಾಂತಿ ಸೃಷ್ಟಿಸುವ ಪ್ರಯತ್ನ ನಡೆದರು. ದುಷ್ಕೃತ್ಯ ನಡೆಸಿದ ಹಲವು ಮಂದಿಯನ್ನು ಪೊಲೀಸರು ಬಂಧಿಸುವ ಮೂಲಕ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಿದರು.

ಪೊಲೀಸ್ ಸಿಬ್ಬಂದಿಯ ಗೋಳು
ಈ ಬಂದ್ ಹಿನ್ನಲೆಯಲ್ಲಿ ನಮ್ಮ ಗೋಳನ್ನು ಕೇಳೋರು ಯಾರು? 3 ದಿನವಾಯಿತು, ಊಟ ನಿದ್ದೆ ಮಾಡದೆ, ನಗರದಲ್ಲಿ ಏನೇ ಸಮಸ್ಯೆಯಾದರೂ ಪೊಲೀಸ್ ವೈಫಲ್ಯ ಎಂದು ಹೇಳುತ್ತಾರೆ. ಪೊಲೀಸ್ ಸಿಬ್ಬಂದಿ ಕೊರತೆ ಮಧ್ಯೆ ಕಣ್ಣಿಗೆ ಎಣ್ಣೆ ಹಚ್ಚಿಕೊಂಡು ಪೊಲೀಸರು ಕೆಲಸ ಮಾಡಬೇಕಾಗಿದೆ ಎಂದು ನಗರದ ಇನ್ಸ್ ಪೆಕ್ಟರ್ ಒಬ್ಬರು ಮಾಧ್ಯಮ ಜತೆ ಹೇಳಿಕೊಂಡರು.












Click it and Unblock the Notifications