ರಾಜ್ಯಪಾಲ ಪಿ.ಬಿ.ಆಚಾರ್ಯರಿಗೆ ನಾಗರೀಕ ಸನ್ಮಾನ
ಮಂಗಳೂರು, ಜು. 24 : ನಾಗಲ್ಯಾಂಡ್ ರಾಜ್ಯಾಪಾಲರಾಗಿರುವ ಉಡುಪಿ ಮೂಲದ ಪದ್ಮನಾಭ ಬಾಲಕೃಷ್ಣ ಆಚಾರ್ಯ ಅವರಿಗೆ ಮಂಗಳೂರಿನಲ್ಲಿ ನಾಗರೀಕ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪದ್ಮಾನಾಭ ಆಚಾರ್ಯ ನಾಗರೀಕ ಸನ್ಮಾನ ಸಮಿತಿ ಜು.28ರ ಸೋಮವಾರ ಈ ಕಾರ್ಯಕ್ರಮ ಆಯೋಜಿಸಿದೆ.
ಪಿ.ಬಿ.ಆಚಾರ್ಯರೆಂದು ಪ್ರಸಿದ್ಧರಾದ ಪದ್ಮನಾಭ ಬಾಲಕೃಷ್ಣ ಆಚಾರ್ಯ ಅವರು ನಾಗಾಲ್ಯಾಂಡ್ ರಾಜ್ಯಪಾಲರಾಗಿ ಆಯ್ಕೆಯಾಗಿರುವ ಹಿನ್ನಲೆಯಲ್ಲಿ ಅವರನ್ನು ಸನ್ಮಾನಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಮಂಗಳೂರಿನ ಪ್ರತಾಪನಗರದಲ್ಲಿರುವ ಸಂಘ ನಿಕೇತನದಲ್ಲಿ ಜು.28ರ ಸೋಮವಾರ ಸಂಜೆ 5 ಗಂಟೆಗೆ ಈ ಸನ್ಮಾನ ಕಾರ್ಯಕ್ರಮ ನಡೆಯಲಿದೆ.

ನಿಟ್ಟೆ ವಿದ್ಯಾಸಂಸ್ಥೆಯ ಕುಲಪತಿಗಳಾದ ವಿನಯ್ ಹೆಗ್ಡೆ ಸಮಾರಂಭದ ಅಧ್ಯಕ್ಷೆ ವಹಿಸಲಿದ್ದು ಜಿಲ್ಲೆಯ ಹಿತೈಷಿಗಳು, ಸಮಸ್ತ ನಾಗರೀಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದು ಸನ್ಮಾನ ಸಮಿತಿ ಅಧ್ಯಕ್ಷ ಮತ್ತು ಮಂಗಳೂರು ಸಂಸದ ನಳೀನ್ ಕುಮಾರ್ ಕಟೀಲ್ ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
ಆಚಾರ್ಯರ ಕಿರು ಪರಿಚಯ : ಉಡುಪಿ ಮೂಲದ ಪದ್ಮನಾಭ ಬಾಲಕೃಷ್ಣ ಆಚಾರ್ಯ ಅವರು ಪಿ.ಬಿ.ಆಚಾರ್ಯರೆಂದು ಪ್ರಸಿದ್ಧಿ ಪಡೆದಿದ್ದಾರೆ. ಕೆಲವು ದಿನಗಳ ಹಿಂದೆ ಕೇಂದ್ರ ಸರ್ಕಾರ ಆಚಾರ್ಯರನ್ನು ನಾಗಾಲ್ಯಾಂಡ್ ರಾಜ್ಯಪಾಲರಾಗಿ ನೇಮಕಗೊಳಿಸಿ ಆದೇಶ ಹೊರಡಿಸಿದ್ದು, ನಾಲ್ಕು ದಿನಗಳ ಹಿಂದೆ ಅವರು ಅಧಿಕಾರ ಸ್ವೀಕರಿಸಿದ್ದಾರೆ.
ರಾಷ್ಟ್ರೀಯ ಸ್ವಯಂ ಸೇವಕ ಸಂಘ, ಎಬಿವಿಪಿ, ಬಿಜೆಪಿ ಪಕ್ಷದಲ್ಲಿ ಕೆಲಸ ಮಾಡಿರುವ ಆಚಾರ್ಯರು, ಮಾರ್ಗರೆಟ್ ಆಳ್ವರ ನಂತರ ರಾಜ್ಯಪಾಲರಾಗುತ್ತಿರು ಕರಾವಳಿ ಮೂಲದ ವ್ಯಕ್ತಿಯಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಪದ್ಮನಾಭ ಆಚಾರ್ಯ ಅವರು ಈಶಾನ್ಯ ರಾಜ್ಯಗಳ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು.












Click it and Unblock the Notifications