ಬೆಳ್ತಂಗಡಿಯಲ್ಲಿ ವಿಷಕಾರಿ ಅಣಬೆ ಸೇವಿಸಿದ ತಂದೆ-ಮಗ ದಾರುಣ ಸಾವು
ಮಂಗಳೂರು ನವೆಂಬರ್ 22: ವಿಷಕಾರಿ ಅಣಬೆ ಪದಾರ್ಥ ಸೇವಿಸಿ ತಂದೆ ಹಾಗೂ ಮಗ ಮೃತಪಟ್ಟ ದಾರುಣ ಘಟನೆ ಬೆಳ್ತಂಗಡಿ ತಾಲೂಕಿನ ಪುದುವೆಟ್ಟು ಗ್ರಾಮದ ಕೇರಿಮಾರು ಎಂಬಲ್ಲಿ ನಡೆದಿದೆ.
ಪುದುವೆಟ್ಟು ಗ್ರಾಮದ ಕೇರಿಮಾರು ನಿವಾಸಿಗಳಾದ ಗುರುವ ಮೇರ (80) ಹಾಗೂ ಅವರ ಪುತ್ರ ಓಡಿಯಪ್ಪ (41) ಮೃತ ದುರ್ದೈವಿಗಳು ಎಂದುಗುರುತಿಸಲಾಗಿದೆ.
ನವೆಂಬರ್ 21ರಂದು ಮಧ್ಯಾಹ್ನ 3 ಗಂಟೆಗೆ ಮೃತ ಓಡಿಯಪ್ಪ ಕಾಡಿನಿಂದ ಅಣಬೆ ತಂದು ಸಾಂಬಾರು ಮಾಡಿದ್ದರು. ಅದನ್ನು ಅವರ ತಂದೆ ಗುರುವ ಮೇರ ಹಾಗೂ ಓಡಿಯಪ್ಪ ರಾತ್ರಿ ಊಟಕ್ಕೆ ತಿಂದಿದ್ದರು. ಆ ಬಳಿಕ ಇಬ್ಬರೂ ವಾಂತಿ ಮಾಡಿಕೊಂಡಿದ್ದು, ಮನೆಯ ಮುಂದೆ ಶವವಾಗಿ ಪತ್ತೆಯಾಗಿದ್ದಾರೆ. ಗುರುವ ಮೇರ ಅವರ ಶವ ಮನೆಯ ಮುಂಭಾಗದ ಅಂಗಳದಲ್ಲಿ ಪತ್ತೆಯಾದರೆ, ಅವರ ಪುತ್ರ ಓಡಿಯಪ್ಪ ಅವರ ಮೃತದೇಹ ಸ್ವಲ್ಪ ದೂರದಲ್ಲಿ ಕಂಡುಬಂದಿದೆ.

ಗುರುವ ಮೇರ ಮತ್ತೋರ್ವ ಪುತ್ರ ಮರುದಿನ ಬೆಳಗ್ಗೆ 6.30 ಗಂಟೆಗೆ ಮನೆಗೆ ಬಂದಾಗ ತಂದೆ ಗುರುವ ಮತ್ತು ತಮ್ಮ ಓಡಿಯಪ್ಪ ಅಂಗಳದಲ್ಲಿ ಬಿದ್ದಿರುವುದು ಕಂಡುಬಂದಿದೆ. ಈ ವೇಳೆ ಗಾಬರಿಗೊಂಡ ಅವರು ತಕ್ಷಣವೇ ಆರೈಕೆ ಮಾಡಿದ್ದಾರೆ. ಆದರೆ ಅವರಿಬ್ಬರಿಗೂ ಪ್ರಜ್ಞೆ ಇರಲಿಲ್ಲ. ಕೂಡಲೇ ಈ ವಿಚಾರವನ್ನು ಸಂಬಂಧಿಕರಿಗೆ ಹಾಗೂ ಅಕ್ಕಪಕ್ಕದ ಮನೆಯವರಿಗೆ ತಿಳಿಸಿದ್ದಾರೆ. ಕೂಡಲೇ ಅನೇಕರು ಬಂದಿದ್ದು, ಪರಿಶೀಲಿಸಿದಾಗ ಇಬ್ಬರು ಸಾವನ್ನಪ್ಪಿರುವುದು ಧೃಡಪಟ್ಟಿದೆ.
ಘಟನೆ ಸಂಬಂಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗುರುವ ಮೇರ ಹಾಗೂ ಓಡಿಯಪ್ಪ ವಿಷಕಾರಿ ಅಣಬೆ ಸೇವಿಸಿ ಮೃತಪಟ್ಟಿದ್ದಾರೆ ಎಂದು ಗುರುವ ಅವರ ಮಗ ಕರ್ತ ಪೊಲೀಸ್ ವರದಿಯಲ್ಲಿ ಉಲ್ಲೇಖ ಮಾಡಿದ್ದಾರೆ.












Click it and Unblock the Notifications