ಉಗ್ರ ಶಾರೀಕ್ನ ಟಾರ್ಗೆಟ್ನಲ್ಲಿತ್ತು ಮಂಗಳೂರಿನ ಪ್ರಸಿದ್ಧ ದೇವಾಲಯಗಳು; ಸ್ಫೋಟಕ ಮಾಹಿತಿ ಇಲ್ಲಿದೆ
ಮಂಗಳೂರು, ನವೆಂಬರ್, 24: ಮಂಗಳೂರು ಬಾಂಬ್ ಸ್ಫೋಟದ ಟಾರ್ಗೆಟ್ಗಳು ಇದೀಗ ಒಂದೊಂದಾಗಿಯೇ ಬೆಳಕಿಗೆ ಬರುತ್ತಿವೆ. ಉಗ್ರ ಶಾರೀಕ್ ಹಿಂದೂ ದೇವಾಲಯಗಳನ್ನೇ ಸ್ಫೋಟಿಸಲು ಸಂಚು ರೂಪಿಸಿದ್ದ ಅನ್ನುವ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಒಟ್ಟು ಆರು ಟಾರ್ಗೆಟ್ಗಳನ್ನು ಮಾಡಿದ್ದ ಶಂಕಿತ ಉಗ್ರ ಶಾರೀಕ್ ಭಾರಿ ಪ್ರಮಾಣದ ವಿಧ್ವಂಸಕ ಕೃತ್ಯಕ್ಕೆ ಯೋಜನೆ ರೂಪಿಸಿದ್ದ ಎನ್ನುವುದು ತಿಳಿದುಬಂದಿದೆ.
ಮಂಗಳೂರು ಸ್ಫೋಟದ ರೂವಾರಿ ಶಂಕಿತ ಉಗ್ರ ಶಾರೀಕ್ನ ಒಂದೊಂದೇ ಆಘಾತಕಾರಿ ಸಂಗತಿಗಳು ಹೊರಬರುತ್ತಲೇ ಇವೆ. ಆತ ಮಂಗಳೂರಿನ ಹಿಂದೂ ದೇಗುಲಗಳನ್ನು, ಅದರಲ್ಲೂ ಶಿವ ದೇವಾಲಯಗಳನ್ನೇ ಸ್ಫೋಟಿಸಲು ಸಂಚು ರೂಪಿಸಿದ್ದ ಎನ್ನುವ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ.
ಇದೀಗ ಇಸ್ಲಾಮಿಕ್ ರೆಸಿಸ್ಸೆಂಟ್ ಕೌನ್ಸಿಲ್ ಎಂಬ ಹೆಸರಿನಲ್ಲಿ ಪೋಸ್ಟರ್ ಒಂದು ಹರಿದಾಡುತ್ತಿದ್ದು, ಅದರಲ್ಲಿ ಈತನ ಸಂಘಟನೆ ಸ್ಪೋಟದ ಹೊಣೆ ಹೊತ್ತಿದೆ. ಕದ್ರಿ ಶ್ರೀಮಂಜುನಾಥ ದೇವಾಲಯವನ್ನು ಸ್ಫೋಟಿಸಲು ಶಾರೀಕ್ ಬಂದಿರುವುದಾಗಿ ತಿಳಿಸಲಾಗಿದೆ. ಜೊತೆಗೆ ದಾಳಿ ಸ್ವಲ್ಪದರಲ್ಲೇ ತಪ್ಪಿದ್ದು, ಮುಂದಿನ ದಿನದಲ್ಲಿ ಖಂಡಿತ ಸ್ಫೋಟ ಮಾಡುತ್ತೇವೆ ಎಂದಿದ್ದಾರೆ. ಹೀಗಾಗಿ ಕದ್ರಿ ದೇವಸ್ಥಾನಕ್ಕೆ ಬಾಂಬ್ ಪತ್ತೆ ಹಾಗೂ ನಿಷ್ಕ್ರಿಯದಳ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

ದುಷ್ಟಶಕ್ತಿಗಳ ಅಟ್ಟಹಾಸಕ್ಕೆ ಬ್ರೇಕ್
ಕದ್ರಿ ಮಂಜುನಾಥ ದೇವಸ್ಥಾನದಲ್ಲಿ ಶನಿವಾರ ಸಂಜೆ ಸಮಯದಲ್ಲಿ ಹೆಚ್ಚಿನ ಭಕ್ತರು ಆಗಮಿಸುತ್ತಾರೆ. ಜೊತೆಗೆ ಈ ಕ್ಷೇತ್ರಕ್ಕೆ ಹೊರ ರಾಷ್ಟ್ರ, ರಾಜ್ಯದ ಜನರೂ ಭೇಟಿ ನೀಡುತ್ತಾರೆ. ಇದನ್ನೆಲ್ಲ ಗಮನಿಸಿಕೊಂಡೇ ಈ ದೇವಸ್ಥಾನದ ದಾಳಿಗೆ ಸಂಚು ರೂಪಿಸಿದ್ದಾನೆ. ಆದರೆ ದಾರಿ ಮಧ್ಯೆಯೇ ಸ್ಫೋಟ ನಡೆದಿರುವುದರಿಂದ ದೊಡ್ಡ ಅನಾಹುತವೇ ತಪ್ಪಿದೆ. ಮಂಜುನಾಥ ದೇವರ ಶಕ್ತಿಯ ಎದುರು ದುಷ್ಟಶಕ್ತಿಗಳ ಅಟ್ಟಹಾಸ ನಡೆಯುವುದಿಲ್ಲ. ಉಗ್ರನ ಶಕ್ತಿ ನಡೆಯದೆ ದೇವರು ಅವನಿಗೆ ತಕ್ಕಮಟ್ಟಿನ ಶಿಕ್ಷೆ ನೀಡಿದ್ದಾರೆ. ಮಂಜುನಾಥನ ಸನ್ನಿಧಿ ದಕ್ಷಿಣ ಭಾರತದಲ್ಲೇ ವಿಶಿಷ್ಟ ಶಕ್ತಿ ಇರುವ ಕ್ಷೇತ್ರವಾಗಿದೆ. ಅದೇ ಶಕ್ತಿ ನಮ್ಮನ್ನು ಸಂರಕ್ಷಣೆ ಮಾಡುತ್ತಿದೆ. ದೈವತಾ ಶಕ್ತಿಯ ಮುಂದೆ ಯಾವುದೇ ಒಂದು ಶಕ್ತಿಗಳು ನಡೆಯುವುದಿಲ್ಲ ಎಂದು ಕ್ಷೇತ್ರದ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಹೇಳಿದ್ದಾರೆ.

ಉಗ್ರನ ಮುಖವಾಡಗಳ ಬಯಲು
ಉಗ್ರರ ಟಾರ್ಗೆಟ್ ಕದ್ರಿ ದೇವಸ್ಥಾನ ಎಂದು ಅವರು ಹೇಳಿಕೊಂಡಿದ್ದರೂ, ಪೊಲೀಸರ ತನಿಖೆ ವೇಳೆ ಇನ್ನೂ ಕೆಲವು ಟಾರ್ಗೆಟ್ಗಳು ಬೆಳಕಿಗೆ ಬಂದಿದೆ. ಕುದ್ರೋಳಿ ಶ್ರೀಗೋಕರ್ಣನಾಥ ಕ್ಷೇತ್ರ, ಮಂಗಳಾದೇವಿ ದೇವಸ್ಥಾನ, ರೈಲ್ವೆ ಹಾಗೂ ಬಸ್ ನಿಲ್ದಾಣದ ಜೊತೆಗೆ ಆರ್ಎಸ್ಎಸ್ ಕಚೇರಿ ಸಂಘನಿಕೇತನವೂ ಇವರ ಟಾರ್ಗೆಟ್ ಲಿಸ್ಟ್ನಲ್ಲಿತ್ತು ಅನ್ನುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಒಟ್ಟಿನಲ್ಲಿ ಶಾರೀಕ್ ತಂದ ಕುಕ್ಕರ್ ಬಾಂಬ್ ದಾರಿ ಮಧ್ಯೆಯೇ ಸ್ಫೋಟಗೊಂಡಿರುವುದರಿಂದ ಆತನ ಎಲ್ಲಾ ಟಾರ್ಗೆಟ್ ತಪ್ಪಿದ್ದು, ಮಂಗಳೂರಿಗರು ನಿಟ್ಟುಸಿರು ಬಿಡುವಂತಾಗಿದೆ.












Click it and Unblock the Notifications