ಇಲ್ಲಿನ ಸುರ್ಯದ ದೇವರಿಗೆ ಬೆಳ್ಳಿ-ಬಂಗಾರ, ಹಣದ ಹರಕೆಯ ಅಗತ್ಯವಿಲ್ಲ
ಮಂಗಳೂರು ಅಕ್ಟೋಬರ್ 06: ಪ್ರಕೃತಿಯನ್ನೇ ದೇವರೆಂದು ಪೂಜಿಸುವವರು ತುಳುನಾಡಿಗರು. ತುಳುನಾಡಿನ ಪ್ರಕೃತಿ ಹಾಗೂ ಭೌಗೋಳಿಕ ಸನ್ನಿವೇಶಗಳು ಇಲ್ಲಿನ ಆಚರಣೆಗಳಿಗೆ ಪ್ರೇರಣದಾಯಿ ಶಕ್ತಿಗಳಾಗಿವೆ.
ಪಡುವಣ ಕಡಲಿನಿಂದ ಹಾಗೆ ಮೂಡಣ ಪಶ್ಚಿಮ ಘಟ್ಟಗಳಿಂದ ಆವೃತವಾದ ತಂಪು ತಂಪಾದ ದಟ್ಟ ಕಾಡುಗಳಿಂದ ಕೂಡಿದ ಭೂಮಿ ತುಳುನಾಡು. ಇಲ್ಲಿನ ಕ್ರೂರ ಮೃಗಗಳು, ಹುಲಿ, ಹಂದಿ, ವಿಷ ಸರ್ಪಗಳು ಇಲ್ಲಿನ ಮೂಲ ನಿವಾಸಿಗಳಿಗೆ ಅಲೌಕಿಕ ಶಕ್ತಿಗಳಾಗಿ ಕಂಡವು. ಇವುಗಳೆಲ್ಲದರಿಂದ ತಮ್ಮ ಬದುಕಿಗೆ ಬಂದೊದಗಬಹುದಾದ ಕೇಡುಗಳನ್ನು ತಡೆಯಲು ಇವುಗಳನ್ನು ಆರಾಧಿಸಲಾರಂಭಿಸಿದರು.
ತುಳುನಾಡಿನ ಜನ ಪ್ರಕೃತಿಯಲ್ಲೇ ದೇವರನ್ನು ಕಂಡ ಕಾರಣಕ್ಕಾಗಿಯೋ ಏನೋ ಇಲ್ಲಿನ ಜನ ತನ್ನ ನೆಚ್ಚಿನ ದೇವರುಗಳಿಗೆ ಪ್ರಕೃತಿಯಲ್ಲಿ ಸಿಗುವ ವಸ್ತುಗಳನ್ನೇ ಹರಕೆಯ ರೂಪದಲ್ಲಿ ನೀಡಿಕೊಂಡು ಬರುತ್ತಿದ್ದಾರೆ. ಇಂಥಹುದೇ ಒಂದು ಕ್ಷೇತ್ರ ದಕ್ಷಿಣಕನ್ನಡ ಜಿಲ್ಲೆಯಲ್ಲಿದೆ.
ಭಕ್ತರು ಯಾವುದೇ ಇಷ್ಟಾರ್ಥ ಪೂರೈಕೆಗೆ ದೇವರಿಗೆ ಚಿನ್ನ, ಬೆಳ್ಳಿ ಇಲ್ಲವೇ ಹಣದ ವಾಗ್ದಾನ ನೀಡುವುದು ಸರ್ವೇ ಸಾಮಾನ್ಯ. ಆದರೆ ತಳುನಾಡಿನ ಈ ಕ್ಷೇತ್ರದ ವೈಶಿಷ್ಟ್ಯವೇ ಬೇರೆ. ಮಣ್ಣಿನ ಮೂರ್ತಿಯೇ ಇಲ್ಲಿನ ಹರಕೆ. ಭಕ್ತರ ಪ್ರಾರ್ಥನೆಗೆ ಸ್ಪಂದಿಸುವ ರುದ್ರ ಪ್ರತಿಫಲವಾಗಿ ಮಣ್ಣಿನ ಮೂರ್ತಿಯನ್ನಷ್ಟೇ ಬಯಸುತ್ತಾನೆ ಎಂಬುದು ಆರಾಧಕರ ನಂಬಿಕೆ ಇದು ಇರುವುದು ದಕ್ಷಿಣ ಕನ್ನಡದ ನಾಡಗ್ರಾಮದಲ್ಲಿರುವ ಸದಾಶಿವರುದ್ರ ಸುರ್ಯ ದೇವಸ್ಥಾನ.

ವಜ್ರ, ವೈಡೂರ್ಯ ಹರಕೆ ಅಗತ್ಯವಿಲ್ಲ
ಇಲ್ಲಿ ಬೆಳ್ಳಿ-ಬಂಗಾರದ, ಹಣ, ವಜ್ರ ವೈಡೂರ್ಯದ ಹರಕೆಯ ಅಗತ್ಯವಿಲ್ಲ. ಇಲ್ಲಿ ಏನಿದ್ದರೂ ಮಣ್ಣಿನದೇ ಹರಕೆ. ತಾವು ಬೇಡಿದ ಹರಕೆ ಈಡೇರಿದ್ದಲ್ಲಿ ಯಾವ ಕಾರ್ಯಕ್ಕಾಗಿ ಹರಕೆ ಮಾಡಲಾಗಿದೆಯೋ ಅದೇ ಆಕಾರದ ಮಣ್ಣಿನ ಪ್ರತಿರೂಪವನ್ನು ನೀಡಿದ್ದಲ್ಲಿ ಇಲ್ಲಿ ರುದ್ರನಿಗೆ ಎಲ್ಲಿಲ್ಲದ ಸಂತೋಷ. ಮಣ್ಣನ್ನೇ ಹೊನ್ನೆಂದು ತಿಳಿಯುವ ಈ ಬಡವನ ಮನಗೆದ್ದ ದೇವರಾದರೂ ಯಾರು ಎನ್ನುವ ಕೂತೂಹಲ ನಿಮ್ಮಲ್ಲೀಗ ಮೂಡಿದ್ದಲ್ಲಿ ಇಲ್ಲಿದೆ ಕ್ಷೇತ್ರದ ವಿವರ .

ಸೂರ್ಯ ಉಜಿರೆ ಬಳಿ ಇದೆ
ಈ ದೇವಸ್ಥಾನವು ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯ ಬಳಿಯಿರುವ ನಾಡಗ್ರಾಮದ ಸುರ್ಯ ಎಂಬ ಸ್ಥಳದಲ್ಲಿದೆ. ಧರ್ಮಸ್ಥಳದ ಉತ್ತರಕ್ಕೆ ಕೇವಲ 13 ಕಿ.ಮೀ ದೂರದಲ್ಲಿ ಉಜಿರೆಯಿದ್ದು ಇಲ್ಲಿಂದ ಈ ದೇವಸ್ಥಾನ ಕೇವಲ 5 ಕಿ.ಮೀ ದೂರದಲ್ಲಿದೆ. ಬೆಳ್ತಂಗಡಿಯಿಂದ ಉಜಿರೆಗೆ ಹೋಗುವ ಮಾರ್ಗದಲ್ಲಿ ಎಡ ತಿರುವು ಪಡೆದು ನಾಡಗ್ರಾಮ ತಲುಪಿ ಅಲ್ಲಿಂದ ಈ ದೇವಸ್ಥಾನಕ್ಕೆ ತಲುಪಬಹುದು. ದೇವಸ್ಥಾನವು ಚೊಕ್ಕವಾಗಿ ನಿರ್ಮಾಣವಾಗಿದ್ದು ಹಚ್ಚ ಹಸಿರಿನ ಮಧ್ಯೆ ನೆಲೆಸಿದ್ದು ಕಣ್ಣಿಗೆ ತಂಪನ್ನೆರೆಯುತ್ತದೆ. ಸುತ್ತಲಿನ ರಮಣೀಯ ಪ್ರಕೃತಿ ಸೌಂದರ್ಯ ಎಂಥವರನ್ನೂ ಮೂಕವಿಸ್ಮಿತರನ್ನಾಗುವಂತೆ ಮಾಡುತ್ತದೆ.

ಸುರ್ಯ ಕ್ಷೇತ್ರ ಎಂದು ಹೆಸರು ಬರಲು ಕಾರಣ
ಸುರ್ಯ ಕ್ಷೇತ್ರವು ಹಸಿರು ಪ್ರಕೃತಿಯ ಅಂಚಿನಲ್ಲಿರುವಂತಹ ಕ್ಷೇತ್ರವಾಗಿದ್ದು, ಈ ಕ್ಷೇತ್ರಕ್ಕೆ ಸುರ್ಯ ಎಂಬ ಹೆಸರು ಬರಲು ಕಾರಣವಾದಂತಹ ಒಂದು ದಂತಕಥೆಯೂ ಇಲ್ಲಿದೆ. ಹಿಂದೆ ಒಬ್ಬಾಕೆ ತನ್ನ ಮಗ ಸುರೆಯನ ಜೊತೆ ಈ ಪ್ರದೇಶದಲ್ಲಿದ್ದ ಕಾಡಿಗೆ ಸೊಪ್ಪು ಕಡಿಯಲೆಂದು ಹೋಗಿದ್ದಳಂತೆ. ಸೊಪ್ಪು ಕಡಿಯುವಾಗ ಸೊಪ್ಪಿನೆಡೆಯಲ್ಲಿ ಮರೆಯಾಗಿದ್ದ ಲಿಂಗರೂಪಿ ಶಿಲೆಗೆ ಕತ್ತಿ ತಾಗಿ ರಕ್ತ ಚಿಮ್ಮಿತಂತೆ. ಈಗ ಗಾಬರಿಗೊಂಡಂತಹ ಆಕೆ ತನ್ನ ಮಗನನ್ನು ಸುರೆಯ ಎಂದು ಕರೆದಿದ್ದು, ಬಳಿಕ ಇಲ್ಲಿಗೆ ಸುರಿಯ, ಸುರ್ಯ ಎಂದು ಹೆಸರು ಬಂತು. ಈ ಬಳಿಕ ಆ ಲಿಂಗ-ರೂಪಿ ಶಿಲೆಗೆ ಪೂಜೆ ನಡೆಸಿ ದೇವಾಲಯ ನಿರ್ಮಾಣ ಮಾಡಲಾಯಿತು ಎನ್ನುವ ಇತಿಹಾಸ ಈ ಕ್ಷೇತ್ರದ್ದಾಗಿದೆ.

ಶಿವ-ಪಾರ್ವತಿ ಲಿಂಗ ರೂಪದಲ್ಲಿ ನೆಲೆಯಾಗಿದ್ದು
ಈಗಿರುವ ದೇವಸ್ಥಾನದ ಉತ್ತರಕ್ಕೆ ಸುಮಾರು 100 ಮೀಟರ್ ದೂರದ ಪ್ರಶಾಂತವಾದ ವನರಾಶಿಯ ಮಧ್ಯೆ ಈ ಘಟನೆ ನಡೆದಿತ್ತು ಎಂದು ಹೇಳಲಾಗುತ್ತಿದ್ದು, ಇದೇ ಜಾಗದಲ್ಲಿ ಇದೀಗ ಭಕ್ತರು ದೇವಸ್ಥಾನಕ್ಕೆ ಸಲ್ಲಿಸಿದಂತಹ ಮಣ್ಣಿನ ಹರಕೆಗಳನ್ನು ಇಡಲಾಗುತ್ತಿದ್ದು, ಹರಕೆ ಬನ ಎನ್ನುವ ಹೆಸರಿನಲ್ಲಿ ಪ್ರಸಿದ್ಧವಾಗಿದೆ. ಇದೇ ಜಾಗದಲ್ಲಿ ಹಿಂದೆ ಬೃಗು ಮಹರ್ಷಿಯ ಶಿಷ್ಯರೊಬ್ಬರು ತಪಸ್ಸು ಮಾಡುತ್ತಿದ್ದು, ಅವರ ತಪಸ್ಸಿಗೊಲಿದ ಶಿವ ಪಾರ್ವತಿಯರು ಪ್ರತ್ಯಕ್ಷರಾಗಿ ಲಿಂಗರೂಪದಲ್ಲಿ ಇಲ್ಲಿ ನೆಲೆಯಾದರು ಎನ್ನಲಾಗುತ್ತಿದ್ದು, ಇದರ ಕುರುಹು ಎಂಬಂತೆ ಈ ಪ್ರದೇಶದಲ್ಲಿ ಎರಡು ಲಿಂಗರೂಪಿ ಶಿಲೆಗಳು ಇಂದಿಗೂ ಇಲ್ಲಿವೆ. ಇಂದಿಗೂ ಈ ಲಿಂಗರೂಪಿ ಶಿಲೆಗಳಿಗೆ ನಿತ್ಯ ಪೂಜೆಯನ್ನು ಸಲ್ಲಿಸಲಾಗುತ್ತಿದ್ದು, ಭಕ್ತರಿಂದ ಸಮರ್ಪಿತವಾದಂತಹ ಹರಕೆ ಗೊಂಬೆಗಳನ್ನು ಇಲ್ಲಿಯೇ ಇಡಲಾಗುತ್ತಿದೆ.

ನಾಗಬನ, ಮಹಾಗಣಪತಿ ಸಾನಿಧ್ಯವಿದೆ
ಕ್ಷೇತ್ರದಲ್ಲಿ ಸದಾಶಿವರುದ್ರ ದೇವರ ಜೊತೆಗೆ ಮಹಾಗಣಪತಿ, ನಾಗಬನ, ದೈವ ಸಾನಿಧ್ಯಗಳೂ ಇದ್ದು, ಪ್ರತಿವರ್ಷವೂ ಇಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ನಿರಂತರವಾಗಿ ನಡೆದುಕೊಂಡು ಬರುತ್ತದೆ. ಈ ದೇವಸ್ಥಾನವನ್ನು ಯಾವಾಗ ನಿರ್ಮಾ ಮಾಡಲಾಯಿತು ಎನ್ನುವುದಕ್ಕೆ ನಿಖರ ಮಾಹಿತಿ ಪುರಾವೆಗಳು ಇಂದಿಗೂ ದೊರಕಿಲ್ಲ. ದೇವಸ್ಥಾನದ ಒಳಾಂಗಣದಲ್ಲಿರುವ ಮಂಟಪದಲ್ಲಿರುವ ನಂದಿಯ ವಿಗ್ರಹದ ಪೀಠದಲ್ಲಿ ಮಾಹಿತಿಯ ಪ್ರಕಾರ ಇದು ಬಂಗರಾಜ ಒಡೆಯರ ಕಾಲದಲ್ಲಿ ನೂಜಿಯ ಸಂಕು ಅಧಿಕಾರಿಯ ಮಗ ನಾರಾಯಣ ಸೇನ ಭೋವನು ಸುರಾಯದ ದೇವರ ಸನ್ನಿಧಿಯಲ್ಲಿ ಪ್ರತಿಷ್ಟೆ ಮಾಡಿದ ಎಂದಿದೆ.
ಆನುವಂಶಿಕವಾಗಿ ಸೂರ್ಯಗುತ್ತು ಮನೆತನದ ಆಡಳಿತಕ್ಕೆ ಈ ದೇವಸ್ಥಾನವು ಇದೀಗ ಒಳಪಟ್ಟಿದ್ದು, ದೇವಸ್ಥಾನಕ್ಕೆ ಬರುವ ಭಕ್ತಾಧಿಗಳಿಗೆ ಎಲ್ಲಾ ರೀತಿಯ ಸೌಕರ್ಯಗಳನ್ನೂ ಇಲ್ಲಿ ಕಲ್ಪಿಸಲಾಗಿದೆ. ಬಡವರ ಕ್ಷೇತ್ರವೆಂದೇ ಬಿಂಬಿಸಲ್ಪಡುವ ಈ ದೇವಸ್ಥಾನಕ್ಕೆ ಊರು ಹಾಗೂ ದೂರದೂರುಗಳಿಂದಲೂ ಭಕ್ತಾಧಿಗಳು ಬರುತ್ತಿದ್ದು, ಶಿವ ಇಲ್ಲಿ ಬಂದವರೆಲ್ಲರನ್ನೂ ಹರಸುತ್ತಿದ್ದಾನೆ.

ಮಣ್ಣಿನ ಬೊಂಬೆಗಳೇ ವಿಶೇಷ
ಇಲ್ಲಿನ ವಿಶೇಷವೆಂದರೆ ಮಣ್ಣಿನ ಬೊಂಬೆಗಳು. ಭಕ್ತರ ಇಚ್ಛೆ ಈಡೇರಿದರೆ ವ್ಯಯಕ್ತಿಕವಾಗಿ ಇಲ್ಲಿಗೆ ಭೇಟಿ ನೀಡಿ ಇಚ್ಛೆಗೆ ಸಂಬಂಧಿಸಿದಂತೆ ನಿರ್ದಿಷ್ಟ ಮಣ್ಣಿನ ಬೊಂಬೆಯನ್ನು ಕೊಂಡು ದೇವಸ್ಥಾನದಲ್ಲಿ ನಿರ್ದಿಷ್ಟ ಸ್ಥಳದಲ್ಲಿ ಅದನ್ನು ದೇವರಿಗೆಂದು ಅರ್ಪಿಸುತ್ತಾರೆ. ಮೇಜು, ಕುರ್ಚಿಗಳಿಂದ ಹಿಡಿದು ಮನುಷ್ಯನ ವಿವಿಧ ಅಂಗಾಂಗಗಳು, ದೇಹ, ಗಣಕಯಂತ್ರ, ವಾಹನಗಳು, ವೈದ್ಯಕೀಯ ಉಪಕರಣಗಳು ಹೀಗೆ ಹಲವಾರು ವೈವಿಧ್ಯಮಯ ಮಣ್ಣಿನ ರಚನೆಗಳು ದೇವರಿಗೆ ಸಮರ್ಪಿಸಲು ದೊರೆಯುತ್ತವೆ. ಉದಾಹರಣೆಗೆ, ಯಾರಿಗಾದರು ಆರೋಗ್ಯ ಕೆಟ್ಟು, ಆ ಕುರಿತು ದೇವರಲ್ಲಿ ಪ್ರಾರ್ಥಿಸಿ ನಂತರ ಗುಣಮುಖ ಹೊಂದಿದರೆ ಅವರು ದೇಹದ ಮಣ್ಣಿನ ಬೊಂಬೆಯನ್ನು ಸಮರ್ಪಿಸಬೇಕು.
ಹೀಗೆ ಕೈ, ಕಾಲು, ಮಕ್ಕಳು, ಹೃದಯ, ಕಿವಿಗಳು, ಕಣ್ಣುಗಳು, ಇಲಿ, ಕೋಳಿ, ನಾಯಿ, ಪುಸ್ತಕ, ಪೆನ್ನು, ನೋಟು, ದ್ವಿಚಕ್ರ ವಾಹನ ಹಾಗೂ ಇನ್ನೂ ಅನೇಕ ಬಗೆಯ ಮಣ್ಣಿನ ರಚನೆಗಳು ಹರಕೆಯ ಉಡುಗೊರೆಗಳಾಗಿ ದೊರೆಯುತ್ತವೆ. ನೆನಪಿಡಬೇಕಾದ ಇನ್ನೊಂದು ವಿಷಯವೆಂದರೆ ನಿಮ್ಮ ಬಯಕೆ ಈಡೇರಿದ್ದಲ್ಲಿ ಮಾತ್ರವೆ ನೀವು ಉಡುಗೊರೆಗಳನ್ನು ಒಪ್ಪಿಸಲು ಅರ್ಹತೆ ಇರುತ್ತದೆ.

ದೇವರಿಗೆ ಸಮರ್ಪಿತ ಉಡುಗೊರೆಗಾಗಿಯೇ ಕೋಣೆ
ದೇವರಿಗೆ ಸಮರ್ಪಣೆಗೊಂಡ ಈ ಉಡುಗೊರೆಗಳನ್ನು ಒಂದು ಕೊಣೆಯಲ್ಲಿ ಇಡಲಾಗುತ್ತದೆ. ಇದನ್ನು ಪ್ರಾರ್ಥನಾ ಮಂದಿರವೆಂದು ಕರೆಯುತ್ತಾರೆ. ಪ್ರರ್ಥನಾ ಮಂದಿರದಲ್ಲಿ ದೇವರನ್ನು ಪ್ರಾರ್ಥಿಸಿ ಕೃತಜ್ಞತೆಗಳನ್ನು ಅರ್ಪಿಸಬಹುದು ಹಾಗೂ ಬೇಕಿದ್ದರೆ ಮತ್ತೆ ಏನಾದರೂ ಹರಕೆ ಹೊತ್ತುಕೊಳ್ಳಬಹುದು. ಇಲ್ಲಿರುವ ಅಪಾರ ಸಂಖ್ಯೆಯ ವೈವಿಧ್ಯಮಯ ಮಣ್ಣಿನ ಬೊಂಬೆಗಳು ಇಟ್ಟಿರುವುದನ್ನು ನೋಡಿದಾಗ ಈ ಕ್ಷೇತ್ರದ ಮಹಿಮೆಯನ್ನು ಊಹಿಸಿಕೊಳ್ಳಬಹುದಾಗಿದೆ. ಈ ಕ್ಷೇತ್ರದಲ್ಲಿ ಕೇವಲ ಭೋಗ್ಯ ವಸ್ತುಗಳ ಬೇಡಿಕೆ ಮಾತ್ರವಲ್ಲದೆ , ಕೃಷಿ, ವಿಧ್ಯೆ ಸೇರಿದಂತೆ ಎಲ್ಲಾ ರೀತಿಯ ಬೇಡಿಕೆಗೂ ಕ್ಷೇತ್ರದ ಅಧಿದೇವನಾದ ಸದಾಶಿವನು ಸ್ಪಂದಿಸುತ್ತಿದ್ದು, ಇದೇ ಕಾರಣಕ್ಕಾಗಿ ಈ ಕ್ಷೇತ್ರಕ್ಕೆ ದೇಶದೆಲ್ಲೆಡೆಯಿಂದ ಭಕ್ತಾಧಿಗಳ ದಂಡೇ ಹರಿದುಬರುತ್ತಿದೆ.
-
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ












Click it and Unblock the Notifications