Election 2023: ಮಕ್ಕಳ ಸಂತೆಯಲ್ಲಿ ತರಕಾರಿ ಖರೀದಿಸಿದ ಗುಬ್ಬಿ ಶ್ರೀನಿವಾಸ್!
ಕಡಬ ಏಪ್ರಿಲ್ 1: ಮಕ್ಕಳೇ ದೇಶದ ಆಸ್ತಿ ಎಂದು ನಂಬಿರುವ ಮಾಜಿ ಸಚಿವ ಎಸ್.ಆರ್ ಶ್ರೀನಿವಾಸ್ ಅವರಿಗೆ, ಮಕ್ಕಳ ಮೇಲೆ ಅಪಾರ ಕಾಳಜಿ ಮತ್ತು ಒಲವು. ಅದಕ್ಕಾಗಿಯೇ, ಇದೇ ಮಾರ್ಚ್ ತಿಂಗಳಲ್ಲಿ ನಡೆದ ತುಮಕೂರು ಜಿಲ್ಲೆಯ ಕಡಬದಲ್ಲಿ ಅಂಗನವಾಡಿ ಮಕ್ಕಳ ಸಂತೆಯಲ್ಲಿ ಭಾಗವಹಿಸಿ, ಮಕ್ಕಳಿಂದ ತರಕಾರಿ ಖರೀದಿಸುವ ಮೂಲಕ ಅವರ ವ್ಯವಹಾರ ಜ್ಞಾನ ವೃದ್ಧಿಗೆ ಬೆನ್ನು ತಟ್ಟಿದರು.
ತರಕಾರಿ ಬೇಕಾ ತರಕಾರಿ.. ಟೊಮ್ಯಾಟೋ 10 ರೂಪಾಯಿ, ಈರುಳ್ಳಿ ಬರೀ 15 ರೂಪಾಯಿ, ಬೀನ್ಸ್, ಕ್ಯಾರೆಟ್ ಕೇವಲ 40 ರೂಪಾಯಿಗೆ ಕೆಜಿ ಎಂದೆಲ್ಲ ಕೂಗಿ ಸಾರ್ವಜನಿಕರನ್ನು ಸೆಳೆಯುತ್ತಿದ್ದ ಮಕ್ಕಳ ಬಳಿ ತೆರಳಿದ ವಾಸು ಅವರು, ಸಂತೆ ತುಂಬ ಸುತ್ತಾಡಿ, ಮಕ್ಕಳಿಂದ ವಿವಿಧ ಬಗೆಯ ಸೊಪ್ಪು, ತರಕಾರಿ, ದಿನಸಿ ವಸ್ತುಗಳನ್ನು ಖರೀದಿಸಿ ಸರಳತೆ ಮೆರೆದರು.

ಆಟ-ಪಾಠದ ನಡುವೆ ಒಂದು ವ್ಯವಹಾರಿಕ ನೋಟಕ್ಕೆ ಸಾಕ್ಷಿಯಾಗಿದ್ದ ಈ ವಿಶೇಷ ಮಕ್ಕಳ ಸಂತೆಯಲ್ಲಿ, ಚಿಣ್ಣರು ಹೆಚ್ಚು ಲವಲವಿಕೆಯಿಂದ ಭಾಗವಹಿಸಿದ್ದನ್ನು ಗಮನಿಸಿದ ಎಸ್ ಆರ್ ಶ್ರೀನಿವಾಸ್, ಮಕ್ಕಳ ವ್ಯವಹಾರಿಕ ಜ್ಞಾನ ಮತ್ತು ಆಸಕ್ತಿಯನ್ನು ಕಂಡು ಸಂತಸ ವ್ಯಕ್ತಪಡಿಸಿದರು.
ಮಕ್ಕಳ ಸಂತೆಯಲ್ಲಿ ತರಕಾರಿ ಮಾರಾಟ
ನೈಜ ವ್ಯಾಪಾರಸ್ಥರನ್ನು ನಾಚಿಸುವಂತಿದ್ದ ಮಕ್ಕಳು, ಸಾರ್ವಜನಿಕರಿಗೆ ಮಾರುತ್ತಿದ್ದ ವಸ್ತುಗಳ ವ್ಯಾಪಾರವನ್ನು ಕಂಡು, ಗುಬ್ಬಿ ಶ್ರೀನಿವಾಸ್ ಶಹಬ್ಬಾಷ್ ಗಿರಿ ನೀಡಿದರು. "ಮಕ್ಕಳನ್ನು ಪಠ್ಯಕ್ಕೆ ಸೀಮಿತಗೊಳಿಸದೇ, ಪೋಷಕರು ಅವರನ್ನು ಅಂಗಡಿಗೆ ಕಳುಹಿಸಿದರೆ, ವ್ಯವಹಾರಿಕ ಜ್ಞಾನ ವೃದ್ಧಿಸಿಕೊಳ್ಳುತ್ತಾರೆ. ಅವರಲ್ಲಿ ಪ್ರಾಯೋಗಿಕ ವ್ಯವಹಾರ ಜ್ಞಾನ ಬೆಳೆಯಲು ಮತ್ತು ಶೈಕ್ಷಣಿಕ ಪ್ರಗತಿಗೆ ಇಂತಹ ಸಂತೆಗಳು ಪೂರಕ" ಎಂದು ಗುಬ್ಬಿ ಶ್ರೀನಿವಾಸ್ ಅಭಿಪ್ರಾಯಪಟ್ಟರು.

ಕಲಿಕೆಯ ಹಂತದಲ್ಲಿಯೇ ಮಕ್ಕಳು ಲೋಕಜ್ಞಾನ ಸಂಪಾದಿಸಿಕೊಳ್ಳುವುದು ಅವಶ್ಯಕ. ಈ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಮಕ್ಕಳ ಸಂತೆಯಲ್ಲಿ, ಮಕ್ಕಳೊಂದಿಗೆ ಮಕ್ಕಳಂತೆ ಬೆರೆತು, ಅವರ ಜ್ಞಾನ ವೃದ್ಧಿಗೆ ಸಹಕರಿಸಿದ್ದು, ವಾಸು ಅವರ ಸರಳತೆ ಮತ್ತು ಮಕ್ಕಳ ಬಗ್ಗೆ ಅವರಿಗಿರುವ ಕಾಳಜಿಗೆ ಹಿಡಿದ ಕನ್ನಡಿಯಂತಿತ್ತು.
ತೆರೆ ತೊರೆದು 'ಕೈ' ಹಿಡಿದ ಶ್ರೀನಿವಾಸ್
ತುಮಕೂರು ಜಿಲ್ಲೆಯ ಗುಬ್ಬಿ ಕ್ಷೇತ್ರದ ಮಾಜಿ ಶಾಸಕ ಎಸ್. ಆರ್. ಶ್ರೀನಿವಾಸ್ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದರು. ಗುರುವಾರ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ಪಾಲ್ಗೊಂಡಿದ್ದರು. ಗುಬ್ಬಿಯ ಮಾಜಿ ಶಾಸಕ ಎಸ್. ಆರ್. ಶ್ರೀನಿವಾಸ್ ಕಾಂಗ್ರೆಸ್ ಸೇರ್ಪಡೆ ಬಳಿಕ ಡಿ. ಕೆ. ಶಿವಕುಮಾರ್ ಪತ್ರಿಕಾಗೋಷ್ಠಿ ನಡೆಸಿದರು.

ಮಂಗಳವಾರ ಗುಬ್ಬಿಯ ಶಾಸಕ ಎಸ್. ಆರ್. ಶ್ರೀನಿವಾಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಸ್ಪೀಕರ್ ರಾಜೀನಾಮೆಯನ್ನು ಸಹ ಅಂಗೀಕರಿಸಿತ್ತು. 2018ರಲ್ಲಿ ಗುಬ್ಬಿಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಎಸ್. ಆರ್. ಶ್ರೀನಿವಾಸ್ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದಾರೆ.
ಮೇ 10ಕ್ಕೆ ವಿಧಾನಸಭಾ ಚುನಾವಣೆ
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆ ಕೂಡ ಇದೆ. ರಾಜ್ಯದ 224 ಕ್ಷೇತ್ರಗಳಿಗೆ ಒಂದೇ ಹಂತದ ಚುನಾವಣೆ ನಡೆಯಲಿದ್ದು, ಏಪ್ರಿಲ್ 13 ರಂದು ಚುನಾವಣೆಗೆ ಅಧಿಕೃತ ಅಧಿಸೂಚನೆ ಪ್ರಕಟವಾಗಲಿದೆ. ಏಪ್ರಿಲ್ 20ಕ್ಕೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಏಪ್ರಿಲ್ 21ಕ್ಕೆ ನಾಮ ಪತ್ರ ಪರಿಶೀಲನೆ ನಡೆಯಲಿದ್ದು, ಏಪ್ರಿಲ್ 24 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿರುತ್ತದೆ. ಇನ್ನೂ ಮೇ 10 ರಂದು ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13ರಂದು ಶನಿವಾರ ಚುನಾವಣಾ ಫಲಿತಾಂಶ ಪ್ರಕಟಗೊಳ್ಳಲಿದೆ. ಮೇ 15 ರೊಳಗೆ ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ ಎಂದು ರಾಜೀವ್ ಕುಮಾರ್ ತಿಳಿಸಿದ್ದರು.












Click it and Unblock the Notifications