ದಕ್ಷಿಣ ಕನ್ನಡದಲ್ಲಿ ಈದ್, ಜಾಥಾ ವೇಳೆ ಹೃದಯಾಘಾತ
ಮಂಗಳೂರು, ಡಿಸೆಂಬರ್ 13 : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರ ಸಡಗರ, ಸಂಭ್ರಮದಿಂದ ಈದ್ ಮೀಲಾದ್ ಆಚರಿಸಲಾಯಿತು. ಆದರೆ ಜಾಥಾ ವೇಳೆ ಉಪ್ಪಿನಂಗಡಿಯ ವ್ಯಕ್ತಿಯೊಬ್ಬರು ಮೃತರಾಗಿದ್ದಾರೆ.
ಮಂಗಳೂರು, ಬಂಟ್ವಾಳ, ಪುತ್ತೂರು, ಬೆಳ್ತಂಗಡಿ, ಸುಳ್ಯ, ಮೂಡಬಿದ್ರೆ ತಾಲೂಕುಗಳಲ್ಲಿ ಮುಸ್ಲಿಮ್ ಬಾಂಧವರು ಪ್ರವಾದಿ ಮುಹಮ್ಮದ್ ( ಸ.ಅ.) ರ ಜನ್ಮದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಿದರು. ಮಸೀದಿ, ದರ್ಗಾಗಳಲ್ಲಿ ವಿಶೇಷ ಪ್ರಾರ್ಥನೆ ಮಾಡಲಾಯಿತು. ಸಾವಿರಾರು ಮಕ್ಕಳು ಮೀಲಾದ್ ರ್ಯಾಲಿಯಲ್ಲಿ ಬಣ್ಣ- ಬಣ್ಣದ ಉಡುಗೆಗಳನ್ನು ತೊಟ್ಟು ಮಿಂಚಿದರು. ದಫ್ ಪ್ರದರ್ಶನ ಎಲ್ಲರ ಮನ ಸೆಳೆಯಿತು. ಇನ್ನು ಕೆಲವೆಡೆ ವಾಹನ ಸವಾರರಿಗೆ ಜ್ಯೂಸ್ ನೀಡಿ ಸತ್ಕಾರಿಸಲಾಯಿತು.[ಈದ್ ಮಿಲಾದ್ ಪ್ರಯುಕ್ತ ಮದ್ಯ ಮಾರಾಟ ನಿಷೇಧ]

ಜಾಥಾದ ವೇಳೆ ಹೃದಯಾಘಾತ..!
ಎಸ್ ವೈಎಸ್ ಉಪ್ಪಿನಂಗಡಿ ಬ್ರಾಂಚ್ ಕಾರ್ಯದರ್ಶಿ ಅಬ್ದುಲ್ ಕರೀಮ್ ಹಾಜಿ ಎಂಬುವವರು ಹೃದಯಾಘಾತಗೊಂಡು ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ನಡೆಯಿತು.

ಮೃತರು ಉಪ್ಪಿನಂಗಡಿ ರಾಮನಗರ ನಿವಾಸಿ, ಎಂ.ಎಚ್.ಬೆಡ್ ಸೆಂಟರ್ ಮಾಲೀಕರು. ಉಪ್ಪಿನಂಗಡಿ ಮಸೀದಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮೀಲಾದ್ ಜಾಥಾದಲ್ಲಿ ಪಾಲ್ಗೊಂಡಿದ್ದರು. ಕೂಟೇಲ್ ದರ್ಗಾದಿಂದ ಆರಂಭವಾದ ಮೆರವಣಿಗೆ ಉಪ್ಪಿನಂಗಡಿಯ ಆದಿತ್ಯ ಹೋಟೆಲ್ ಬಳಿ ಬರುವಾಗ ಕರೀಂಗೆ ಹೃದಯಾಘಾತವಾಗಿದೆ. ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಮೃತರು ಪತ್ನಿ, ಪುತ್ರಿಯನ್ನ ಅಗಲಿದ್ದಾರೆ.












Click it and Unblock the Notifications