ಚಪ್ಪಾಳೆ ತಟ್ಟಿಯಾಯಿತು, ಈಗ ದೀಪ ಹಚ್ಚಬೇಕಾ? ಪ್ರಧಾನಿಗಳೇ ಯಾಕೋ ಇದು ಜಾಸ್ತಿ ಅನಿಸ್ತಾ ಇಲ್ವಾ?
ಮಂಗಳೂರು, ಏಪ್ರಿಲ್ 3: ದೇಶವನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾಡಿದ ಇಂದಿನ ವಿಡಿಯೋ ಭಾಷಣದಲ್ಲಿ ಲಾಕ್ ಡೌನ್ ಬಗ್ಗೆ ಏನಾದರೂ ಹೇಳಬಹುದು ಎನ್ನುವುದೇ ಬಹುಜನರ ನಿರೀಕ್ಷೆಯಾಗಿತ್ತು, ಅಪೇಕ್ಷೆ ಕೂಡಾ.
ಲಾಕ್ ಡೌನ್ ಬಗ್ಗೆ ಚಕಾರವೆತ್ತದೆ, ಭಾನುವಾರ (ಏ 5) ರಾತ್ರಿ ಒಂಬತ್ತು ಗಂಟೆಗೆ ದೀಪ ಹಚ್ಚಿ ಎನ್ನುವ ಪ್ರಧಾನಿಗಳ ಕರೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಾಜಿ ಸಚಿವ, ಕಾಂಗ್ರೆಸ್ ಶಾಸಕ ಯು.ಟಿ.ಖಾದರ್, ಪ್ರಧಾನಿ ಕರೆಗೆ ಆಕ್ಷೇಪ ವ್ಯಕ್ತ ಪಡಿಸಿ, ಟ್ವೀಟ್ ಮಾಡಿದ್ದಾರೆ. ಅದು ಹೀಗಿದೆ:
ಇಂಡಿಯಾ ಫೈಟ್ಸ್ ಕರೋನಾ ಎನ್ನುವ ಹ್ಯಾಷ್ ಟ್ಯಾಗ್ ಬಳಸಿ, "ಚಪ್ಪಾಳೆ ತಟ್ಟಾಯ್ತು, ಪಾತ್ರೆ ಬಡಿದಾಯ್ತು.ಈಗ ಕ್ಯಾಂಡಲ್ ಹಚ್ಚ ಬೇಕೇ? ಪ್ರಧಾನಿಗಳೇ @narendramodi, ಇದು ಯಾಕೋ ಸ್ವಲ್ಪ ಜಾಸ್ತಿ ಅನಿಸ್ತಾ ಇಲ್ವಾ? ಇದರ ಬದಲು ನಿಜವಾದ ಸಮಸ್ಯೆ ಬಗ್ಗೆ ಗಮನ ಹರಿಸಿ ಸರ್...ಜನಸಾಮಾನ್ಯರ ಹಸಿದ ಹೊಟ್ಟೆಗೆ ಅನ್ನ ನೀಡಿ" ಎಂದು ಖಾದರ್ ಆಗ್ರಹಿಸಿದ್ದಾರೆ.

"ಜನರನ್ನು ನೋವಿನಿಂದ ಹೊರತನ್ನಿ, ಆರ್ಥಿಕ ತಲ್ಲಣ ಸರಿಪಡಿಸಿ, ಕೋವಿಡ್ ಹೋರಾಟದಲ್ಲಿ ನಾವು ನಿಮ್ಮ ಜೊತೆ ಇದ್ದೀವಿ, ಎಲ್ಲವೂ ಸರಿ ಹೋದ ಮೇಲೆ ಒಟ್ಟಾಗಿ ದೀಪ ಹಚ್ಚೋದಲ್ಲ, ದೀಪಾವಳಿಯನ್ನೇ ಮಾಡೋಣ.. ಮೊದಲು ಸಮಸ್ಯೆ ಬಗ್ಗೆ ಗಮನಹರಿಸೊಣ ಸರ್....ಏನಂತೀರಿ? Be Practical Please" ಎಂದು ಖಾದರ್ ಟ್ವೀಟ್ ನಲ್ಲಿ ಹೇಳಿದ್ದಾರೆ.
ಇದಕ್ಕೂ ಮೊದಲು ಟ್ವೀಟ್ ಮಾಡಿ, "ನಿರಾಶ್ರಿತರ ವಸತಿ ಕೇಂದ್ರಕ್ಕೆ ನಾನೂ ಹಾಗೂ ಐವನ್ ಡಿಸೋಜ ಭೇಟಿ ನೀಡಿ ಕೇಂದ್ರದಲ್ಲಿ ನೀಡಲಾಗುವ ಆಹಾರ ಹಾಗೂ ಇತರ ಮೂಲಭೂತ ಸೌಕರ್ಯಗಳ ಬಗ್ಗೆ ಪರಿಶೀಲನೆ ನಡೆಸಿದೆ" ಎಂದು ಖಾದರ್ ಟ್ವೀಟ್ ಮಾಡಿದ್ದರು.
"ಕೆಪಿಸಿಸಿ ನಿರ್ದೇಶನದಂತೆ ರಚನೆಯಾದ ಕೋವಿಡ್ 19 ಟಾಸ್ಕ್ ಫೋರ್ಸ್ ನ ಮೊದಲ ಸಭೆಯು, ಟಾಸ್ಕ್ ಫೋರ್ಸ್ ನ ಅಧ್ಯಕ್ಷರಾದ ಮಾಜಿ ಶಾಸಕ ಜೆ.ಆರ್.ಲೋಬೊ ರವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ನಡೆಯಿತು" ಎಂದೂ ಖಾದರ್ ಟ್ವೀಟ್ ಮಾಡಿದ್ದಾರೆ.












Click it and Unblock the Notifications