ಮಂಗಳೂರು: ಮಾಸ್ಕ್ ಹಾಕಲ್ಲವೆಂದು ಹಠ ಹಿಡಿದ ಮತ್ತೊಬ್ಬ ವೈದ್ಯ; ನಡೆದಿದ್ದೇನು?
ಮಂಗಳೂರು, ಮೇ 19: ಕೊರೊನಾ ವಿರುದ್ಧದ ಹೋರಾಟಕ್ಕೆ ಮಾಸ್ಕ್ ಒಂದೇ ಅಸ್ತ್ರವೆಂದು ಸರ್ಕಾರ ನಿಯಮ ಮಾಡಿದೆ. ಮಾಸ್ಕ್ ಧರಿಸುವುದರಿಂದ ಉಂಟಾಗುವ ಪ್ರಯೋಜನವನ್ನು ವೈದ್ಯ ವಿಜ್ಞಾನಿಗಳು ಸಾರಿ ಸಾರಿ ಹೇಳಿದ್ದಾರೆ.
ಆದರೆ, ಕೆಲವು ವೈದ್ಯರು ಇದಕ್ಕೆ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಿರುವುದು ಸಾಲುಸಾಲಾಗಿ ಬೆಳಕಿಗೆ ಬರುತ್ತಿವೆ. ಎರಡು ದಿನಗಳ ಹಿಂದಷ್ಟೆ ಬೆಂಗಳೂರಿನ ಸಾಗರ್ ಕ್ಲಿನಿಕ್ ನ ವೈದ್ಯ ಡಾ.ರಾಜು ಕೃಷ್ಣಮೂರ್ತಿ ಅವರು ಕೊರೊನಾ ಸೋಂಕಿತರಿಗೆ ಮಾಸ್ಕ್ ಬೇಕಿಲ್ಲ. ಸ್ಯಾನಿಟೈಸರ್ ಹಾಕಬೇಕಿಲ್ಲ ಎಂದು ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದರು.
ವೈದ್ಯ ವೃತ್ತಿಗೆ ಕುತ್ತು
ಸ್ಥಳೀಯ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದ ವೈದ್ಯ ಡಾ.ರಾಜು ಕೃಷ್ಣಮೂರ್ತಿ ಅವರ ವೈದ್ಯ ವೃತ್ತಿಗೆ ಕುತ್ತು ಬಂದಿದ್ದು, ಬೆಂಗಳೂರಿನ ಮೂಡಲಪಾಳ್ಯದಲ್ಲಿರುವ ಸಾಗರ್ ಕ್ಲಿನಿಕ್ ನ ವೈದ್ಯ ಡಾ.ರಾಜು ಕೃಷ್ಣಮೂರ್ತಿ ಅವರನ್ನು ವೈದ್ಯ ವೃತ್ತಿಯಿಂದ ನಿಷೇಧಗೊಳಿಸುವಂತೆ ಕರ್ನಾಟಕ ಮೆಡಿಕಲ್ ಕೌನ್ಸಿಲ್ ಶಿಫಾರಸು ಮಾಡಿದೆ.
ಕೊರೊನಾ ಸೋಂಕಿಗೆ ಮಾಸ್ಕ್ ಬೇಕಿಲ್ಲ ಎಂದ ವೈದ್ಯನ ವಿರುದ್ಧ ವಿಚಾರಣೆ
ಅದರ ಬೆನ್ನಲ್ಲೇ ಈಗ ಮಂಗಳೂರಿನ ವೈದ್ಯರೊಬ್ಬರು ನಾನು ಮಾಸ್ಕ್ ಧರಿಸೋದೇ ಇಲ್ಲ. ಸರ್ಕಾರದ ದಡ್ಡ ನಿಯಮಗಳನ್ನು ಪಾಲಿಸುವುದಿಲ್ಲ ಅಂತಾ ಹೇಳಿ ಸೂಪರ್ ಮಾರುಕಟ್ಟೆಯಲ್ಲಿ ಅವಾಂತರ ಮಾಡಿರುವ ಘಟನೆ ಮಂಗಳವಾರ (ಮೇ 18)ದಂದು ನಡೆದಿದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕೊರೊನಾ ಎನ್ನುವುದೇ ಸುಳ್ಳು
ಇದೀಗ ಕೆಲವು ವೈದ್ಯರ ಗುಂಪು ಕೊರೊನಾ ಎನ್ನುವುದೇ ಸುಳ್ಳು ಎಂದು ವಾದಿಸುತ್ತಿದ್ದರೆ, ಇನ್ನು ಕೆಲವರು ಕೊರೊನಾ ವೈರಸ್ ಹೆಸರಿನಲ್ಲಿ ಸರ್ಕಾರಗಳು ರಾಜ್ಯ ಬೊಕ್ಕಸದಿಂದ ಮತ್ತು ಜನರಿಂದ ಹಣ ಸುಲಿಗೆ ಮಾಡುತ್ತಿವೆ ಎಂದು ಹೇಳುತ್ತಿದ್ದಾರೆ. ಕೊರೊನಾಗೆ ಮಾಸ್ಕ್ ಅವಶ್ಯಕತೆ ಇಲ್ಲ ಮತ್ತು ಸ್ಯಾನಿಟೈಸರ್ ಕೂಡ ಬಳಸಬಾರದು ಎಂದು ಹೇಳಿಕೆ ನೀಡುತ್ತಿರುವುದು ಆಶ್ಚರ್ಯಕರ ಸಂಗತಿಯಾಗಿದೆ.
ಮಂಗಳೂರಿನಲ್ಲಿ ನಡೆದಿದ್ದೇನು?
ಮಂಗಳೂರಿನ ಕದ್ರಿಯಲ್ಲಿರುವ ಜಿಮ್ಮೀಸ್ ಸೂಪರ್ ಮಾರ್ಕೆಟ್ ನಲ್ಲಿ ಮಂಗಳವಾರ ಮಂಗಳೂರಿನ ಪ್ರಸಿದ್ಧ ವೈದ್ಯ ಡಾ.ಶ್ರೀನಿವಾಸ ಕಕ್ಕಿಲ್ಲಾಯ ಅವಾಂತರ ಮೆರೆದಿದ್ದಾರೆ. ಸೂಪರ್ ಮಾರ್ಕೆಟ್ ಗೆ ಮಾಸ್ಕ್ ಧರಿಸದೆ ಬಂದ ಡಾ.ಕಕ್ಕಿಲ್ಲಾಯರನ್ನು ತಡೆದ ಸೂಪರ್ ಮಾರ್ಕೆಟ್ ಸಿಬ್ಬಂದಿ ಮಾಸ್ಕ್ ಧರಿಸುವಂತೆ ಮನವಿ ಮಾಡಿದ್ದಾರೆ. ಇಷ್ಟಕ್ಕೇ ಸಿಬ್ಬಂದಿ ಜೊತೆ ಉಡಾಫೆ ವರ್ತನೆ ತೋರಿದ ಡಾಕ್ಟರ್, ಸಿಬ್ಬಂದಿ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ.
"ನಾನು ಮಾಸ್ಕ್ ಧರಿಸೋದೇ ಇಲ್ಲ. ಮಾಸ್ಕ್ ಧರಿಸುವುದರಿಂದ ಕೊರೊನಾ ವೈರಸ್ ಬರೋದಿಲ್ಲ ಅನ್ನೋದು ತಪ್ಪು ಕಲ್ಪನೆ. ಸರ್ಕಾರದ ದಡ್ಡ ನಿರ್ಧಾರಗಳನ್ನು ನಾನು ಪಾಲಿಸೋದಿಲ್ಲ'' ಅಂತಾ ಹೇಳಿ ಬೇಜಾಬ್ದಾರಿ ವರ್ತನೆ ತೋರಿದ್ದಾರೆ. ಆಗ ಸೂಪರ್ ಮಾರ್ಕೆಟ್ ಸಿಬ್ಬಂದಿ ಮಾಸ್ಕ್ ಧರಿಸದೆ ನಮ್ಮಲ್ಲಿ ಬರಬೇಡಿ, ಸಿಬ್ಬಂದಿ ಮತ್ತು ಗ್ರಾಹಕರಿಗೆ ತೊಂದರೆಯಾಗುತ್ತದೆ ಅಂತಾ ಮನವಿ ಮಾಡಿದರೂ, ಡಾ.ಕಕ್ಕಿಲ್ಲಾಯ ಮಾತ್ರ ಸೂಪರ್ ಮಾರ್ಕೆಟ್ ನಲ್ಲಿ ರೇಗಾಡಿ, ಕಿರುಚಾಡಿ ಶಾಪಿಂಗ್ ಮಾಡಿ ಹೋಗಿದ್ದಾರೆ.
ಯಾರು ಈ ವೈದ್ಯ ಶ್ರೀನಿವಾಸ್?
ಡಾ.ಶ್ರೀನಿವಾಸ ಕಕ್ಕಿಲ್ಲಾಯ ಕೊರೊನಾ ಸೋಂಕು ಆರಂಭದ ಕಾಲದಿಂದಲೂ, ಕೊರೊನಾ ವೈರಸ್ ಅನ್ನೋದು ಬೋಗಸ್, ಕೊರೊನಾದಿಂದ ಸಾವು ಬರಲ್ಲ, ಸರ್ಕಾರಗಳು ಕೊರೊನಾವನ್ನು ದಂಧೆಗೆ ಬಳಸಿಕೊಂಡಿದೆ ಎಂದು ಆರೋಪಿಸಿದ್ದರು.
ಮಾರುಕಟ್ಟೆಗಳಲ್ಲಿ ಸಾಮಾಜಿಕ ಅಂತರ ಕಾಪಾಡೋದು, ಮಾಸ್ಕ್ ಧರಿಸೋದಕ್ಕೂ ಬಹಿರಂಗವಾಗಿಯೇ ಡಾ.ಶ್ರೀನಿವಾಸ್ ವಿರೋಧ ವ್ಯಕ್ತಪಡಿಸಿದ್ದರು. ಇದೀಗ ಈ ವೈದ್ಯ ಸಾರ್ವಜನಿಕವಾಗಿ ಬೇಜವಾಬ್ದಾರಿ ತೋರಿಸಿದ್ದು, ಮಾಸ್ಕ್ ಹಾಕದ ವೈದ್ಯನ ವಿರುದ್ಧ ಕೇಸ್ ದಾಖಲಿಸುವಂತೆ ಜನರಿಂದ ಒತ್ತಾಯ ಕೇಳಿಬಂದಿದೆ.
ಸೂಪರ್ ಮಾರುಕಟ್ಟೆಗೆ ಬಂದ ಗ್ರಾಹಕರಿಗೆ ಡಾಕ್ಟರ್ ವರ್ತನೆಯಿಂದ ಆಶ್ಚರ್ಯವಾಗಿದ್ದು, ಜನರ ಆರೋಗ್ಯ ಕಾಪಾಡಬೇಕಾದ ವೈದ್ಯರೇ ಈ ರೀತಿ ವರ್ತಿಸುವುದೇ ಅಂತಾ ಮಾತಾಡಿಕೊಂಡಿದ್ದಾರೆ.