ಈ ಮೂವರಿಗೂ ಅಧಿಕಾರವೇ ಮುಖ್ಯ:ಕರಾವಳಿಯ ಬಿಜೆಪಿ ಸಂಸದರ ವಿರುದ್ಧ ಡಿಕೆಶಿ ವಾಗ್ದಾಳಿ
Recommended Video

ಮಂಗಳೂರು, ಏಪ್ರಿಲ್ 01: ನಿಮ್ಮ ತಾಯಿಯಂತಿದ್ದ ವಿಜಯಾ ಬ್ಯಾಂಕ್ ಅನ್ನು ನಿಮ್ಮ ಕೈಯ್ಯಲ್ಲಿ ಉಳಿಸಲು ಸಾಧ್ಯವಾಗಿಲ್ಲ ಅಂದ್ರೆ ಇನ್ಯಾರನ್ನು ಉಳಿಸಲು ನಿಮ್ಮಿಂದ ಸಾಧ್ಯ? ಎಂದು ಕರಾವಳಿಯ ಬಿಜೆಪಿ ಸಂಸದರ ವಿರುದ್ಧ ಸಚಿವ ಡಿಕೆ ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಬೆಳ್ತಂಗಡಿಯಲ್ಲಿ ಆಯೋಜಿಸಲಾಗಿದ್ದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರ ವಿಜಯಾ ಬ್ಯಾಂಕನ್ನು, ಬ್ಯಾಂಕ್ ಆಫ್ ಬರೋಡಾದೊಂದಿಗೆ ವಿಲೀನಗೊಳಿಸಿರುವುದನ್ನು ವಿರೋಧಿಸಿದರು.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಈ ಜಿಲ್ಲೆಯಲ್ಲಿ ಹುಟ್ಟಿದವ್ರು ಸ್ವಾಭಿಮಾನವಿದ್ದಿದ್ರೆ ರಾಜೀನಾಮೆ ಕೊಟ್ಟು ಹೊರಬರಬೇಕಿತ್ತು. ಜಿಲ್ಲೆಯಲ್ಲಿ ಹುಟ್ಟಿದ ವಿಜಯಾಬ್ಯಾಂಕ್ ಕೊನೆ ಕಂಡಿದೆ. ಆದರೆ, ಸದಾನಂದ ಗೌಡ, ಶೋಭಾ ಕರಂದ್ಲಾಜೆ, ನಳಿನ್ ಕುಮಾರ್ ಈ ಮೂವರಿಗೂ ಅಧಿಕಾರವೇ ಮುಖ್ಯವಾಗಿದೆ ಎಂದು ಕಿಡಿಕಾರಿದರು .
ರಾಜ್ಯದ ಸಂಸದರಲ್ಲಿ ಯಾರ ವಿರುದ್ಧ ಎಷ್ಟು ಕ್ರಿಮಿನಲ್ ಪ್ರಕರಣಗಳಿವೆ?
ವಿಜಯಾ ಬ್ಯಾಂಕ್ ಅನ್ನು ವಿಲೀನ ಮಾಡುವ ಬದಲು ಬರೋಡಾ ಬ್ಯಾಂಕನ್ನು ವಿಲೀನ ಮಾಡಬಹುದಿತ್ತಲ್ವೇ? ಎಂದು ಪ್ರಶ್ನಿಸಿದ ಡಿಕೆಶಿ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈಯನ್ನು ಗೆಲ್ಲಿಸಿ ಎಂದು ಹೇಳಲು ನಾನು ಬಂದಿಲ್ಲ. ಜಿಲ್ಲೆಯ ಜನರ ಸ್ವಾಭಿಮಾನ ಉಳಿಸಿ, ಜನರು ಗೆಲ್ಲಬೇಕೆಂದು ಹೇಳಲು ಜಿಲ್ಲೆಗೆ ಬಂದಿದ್ದೇನೆ. 28 ವರ್ಷ ಬಿಜೆಪಿ ಸಂಸದರನ್ನು ನೋಡಿದ್ದಿರಿ, ಈಗ ಕಾಂಗ್ರೆಸ್ ಸಂಸದನನ್ನು ಜಿಲ್ಲೆಗೆ ಕೊಡಿ ಎಂದು ಕೇಳಲು ಬಂದಿದ್ದೇನೆ ಎಂದು ಹೇಳಿದರು.
ಮಿಥುನ್ ರೈ ನಾಯಕನಾಗಿ ಬೇಡ, ಜನರ ಸೇವಕನಾಗಿರಬೇಕು. ಅದಕ್ಕೆ ಜನರ ಬೆಂಬಲ ಕೋರಿ ಬಂದಿದ್ದೇನೆ. ದಕ್ಷಿಣ ಕನ್ನಡ ಜಿಲ್ಲೆಯ ಮಹಾ ಜನತೆಯ ಮೇಲೆ ನಂಬಿಕೆಯಿಟ್ಟಿದ್ದೇನೆ. ಬದಲಾವಣೆ ತರುವ ನಂಬಿಕೆಯಿಂದ ಜಿಲ್ಲೆಗೆ ಬಂದಿದ್ದೇನೆ. ನನ್ನ ನಂಬಿಕೆಯನ್ನು ಜಿಲ್ಲೆಯ ಜನರು ಹುಸಿಮಾಡಬೇಡಿ. ಸದಾನಂದ ಗೌಡ, ಶೋಭಾ, ನಳಿನ್ ಅವರ ಸಂಸತ್ ಸದಸ್ಯ ಸ್ಥಾನಕ್ಕೆ 23 ನೇ ತಾರೀಖು ಕೊನೆದಿನ ಎಂದು ಶಿವಕುಮಾರ್ ಹೇಳಿದರು.

ಮಿಥುನ್ ರೈ ಅವರನ್ನು ಆರಿಸಿ
ಕಾಂಗ್ರೆಸ್ ದೇಶದ ಶಕ್ತಿ, ಪಕ್ಷದ ಇತಿಹಾಸವೇ ದೇಶದ ಇತಿಹಾಸ. ಪ್ರಧಾನಿಯಾಗುವ ಅವಕಾಶ ಬಂದಾಗ ಸೋನಿಯಾ ಗಾಂಧಿಯವ್ರು ಮನಮೋಹನ್ ಸಿಂಗ್ ಅವ್ರನ್ನು ನಿಲ್ಲಿಸಿದ್ರು. ದೇಶದ ಪ್ರಧಾನ ಮಂತ್ರಿ ಸ್ಥಾನ ಬಿಟ್ಟ ಹೆಣ್ಣು ಮಗಳ ನಾಯಕತ್ವದಲ್ಲಿ ನಾವಿದ್ದೇವೆ. ಮೋದಿ ಅಚ್ಛೇ ದಿನ್ ಆಯೇಗಾ ಎಂದು ಹೇಳ್ತಿದ್ರು. ಬಿಜೆಪಿಯ ಸ್ನೇಹಿತರಲ್ಲಿ ಕೇಳ್ತೇನೆ, ಅಚ್ಚೇ ದಿನ್ ಯಾವುದು ಬಂತು? ಬಿಜೆಪಿಯ ಕಾರ್ಯಕರ್ತರು ಕೂಡ ಸ್ವಾಭಿಮಾನದ ಹಿನ್ನೆಲೆಯಲ್ಲಿ ಮಿಥುನ್ ರೈಯನ್ನು ಆರಿಸಬೇಕು. ಬಿಜೆಪಿ ಕಾರ್ಯಕರ್ತರು ಕೂಡ ಕಾಂಗ್ರೆಸ್ಸಿಗೆ ಬರಲು ಸ್ವಾಗತವಿದೆ ಎಂದು ಡಿಕೆ ಶಿವಕುಮಾರ್ ಸಮಾವೇಶದಲ್ಲಿ ಕರೆ ನೀಡಿದರು.

ನಳಿನ್ ಕೇಂದ್ರದಲ್ಲಿ ಧ್ವನಿ ಎತ್ತಿಲ್ಲ
ಈ ಸಂದರ್ಭದಲ್ಲಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಸಚಿವ ಯು.ಟಿ.ಖಾದರ್, ಕೇಂದ್ರದಲ್ಲಿ ಬಿಜೆಪಿ ಆಡಳಿತ ಸಮಯದಲ್ಲೇ ಸೈನಿಕರ ಮೇಲೆ ದಾಳಿ ನಡೆದಿದೆ. ಸೈನಿಕರ ವಿಚಾರ ಹಿಡಿದುಕೊಂಡೇ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಕೂಡ ಹೊರಬಂದು ಅಸಹಾಯಕತೆ ತೋಡಿಕೊಂಡಿದ್ದರು. ತಮಗೆ ಉಸಿರುಗಟ್ಟುವ ವಾತಾವರಣವಿದೆ ಎಂದು ನ್ಯಾಯಮೂರ್ತಿಗಳು ಖುದ್ದಾಗಿ ತಿಳಿಸಿದ್ದಾರೆ. ಜನಾರ್ದನ ಪೂಜಾರಿ ವಿರುದ್ಧ ತುಚ್ಛವಾಗಿ ಮಾತನಾಡಿದವರೇ ಅವರ ಕಾಲಿಗೆ ಬಿದ್ದಿದ್ದಾರೆ. ಆದರೆ, ಜನಾರ್ದನ ಪೂಜಾರಿ ಮಾತ್ರ ಮಿಥುನ್ ರೈ ಗೆಲ್ಲುತ್ತಾರೆಂದು ಸ್ಪಷ್ಟವಾಗಿ ತಿಳಿಸಿದ್ದಾರೆ. ಜಿಲ್ಲೆಯ ಯಾವುದೇ ಸಮಸ್ಯೆಗಳ ಬಗ್ಗೆ ನಳಿನ್ ಕೇಂದ್ರದಲ್ಲಿ ಧ್ವನಿ ಎತ್ತಿಲ್ಲ. ಜಿಲ್ಲೆಯ ಜನರ ಸಮಸ್ಯೆಗಳಿಗೆ ಸ್ಪಂದನೆ ನೀಡದ ನಳಿನ್ ಸೋಲಿಸಬೇಕಿದೆ ಎಂದು ಹೇಳಿದರು.

ಭಾರತೀಯ ಜೂಟ್ ಪಾರ್ಟಿ
ಇದೇ ಸಂದರ್ಭದಲ್ಲಿ ಮಾಜಿ ಸಚಿವ ರಮಾನಾಥ್ ರೈ ಮಾತನಾಡಿ, ಬಿಜೆಪಿ ಎಂದರೆ ಭಾರತೀಯ ಜೂಟ್ ಪಾರ್ಟಿ. ಸುಳ್ಳುಗಳನ್ನೇ ಹೇಳುವ ಪಕ್ಷ ಬಿಜೆಪಿ. ಧರ್ಮ, ಜಾತಿಗಳಲ್ಲಿ ದ್ವೇಷ ಹುಟ್ಟಿಸಿ ಜನರನ್ನು ವಂಚಿಸುವ ಕೆಲಸ ಮಾಡಿದೆ. ಸ್ವಿಸ್ ಬ್ಯಾಂಕ್ನಲ್ಲಿ ನೆಹರೂ ಕುಟುಂಬದ ಹಣವಿದೆ ಎಂದು ಬಿಜೆಪಿಯವರು ಅಪ ಪ್ರಚಾರ ಮಾಡಿದರು. ಕಪ್ಪು ಹಣ ತಂದು ಜನರಿಗೆ 15 ಲಕ್ಷ ರೂಪಾಯಿ ನೀಡುತ್ತೇವೆಂದು ಭರವಸೆ ನೀಡಿದರು. ಆದರೆ, ಅಧಿಕಾರಕ್ಕೆ ಬಂದ ಮೇಲೆ ಅವರಿಗೆ ಸ್ವಿಟ್ಜರ್ ಲ್ಯಾಂಡ್ ಮರೆತುಹೋಗಿದೆ ಎಂದು ವಾಗ್ದಾಳಿ ನಡೆಸಿದರು. ನೋಟ್ ಬ್ಯಾನ್ ಮಾಡಿ ನೂರಾರು ಜನರ ಸಾವಿಗೆ ಕಾರಣವಾದ್ರು, ಬಿಜೆಪಿ ಆಡಳಿತದಲ್ಲೇ ರಿಸರ್ವ್ ಬ್ಯಾಂಕ್ ಗವರ್ನರ್ ಕೂಡಾ ರಾಜೀನಾಮೆ ನೀಡಿದ್ದಾರೆ. ಐಟಿ, ಇಡಿಗಳನ್ನು ರಾಜಕೀಯ ವಿರೋಧಿಗಳನ್ನು ಧಮನಿಸಲು ಬಿಜೆಪಿಯವರು ಬಳಕೆ ಮಾಡುತ್ತಿದ್ದಾರೆ. ಬಿಜೆಪಿಯವರ ಆಪ್ತರ ಮನೆಗೆ ಐಟಿ, ಇಡಿ ಯಾವತ್ತೂ ರೈಡ್ ಮಾಡಿಲ್ಲ ಎಂದು ಕಿಡಿಕಾರಿದರು.

ಕಾಂಗ್ರೆಸ್ ಭದ್ರಕೋಟೆಯಾಗಿಸುವ ಸಂಕಲ್ಪ
ಸಮಾವೇಶ ವನ್ನು ಉದ್ದೇಶಿಸಿ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಮಾತನಾಡಿ, ಮೊದಲು ಹನುಮಾನ್ ಚಾಲೀಸ ಪಠಿಸಿದರು. ನಂತರ ಮಾತು ಆರಂಭಿಸಿದ ಅವರು ಸಾಕಷ್ಟು ಕಾರ್ಯಕ್ರಮದಲ್ಲಿ ಭಾಷಣ ಮಾಡಿದ್ರೂ, ನನ್ನ ರಾಜಕೀಯ ಗುರುವಿನ ಮುಂದೆ ಮೊದಲ ಭಾಷಣವಿದು. ಬೆಳ್ತಂಗಡಿ ಬಿಜೆಪಿಯ ಭದ್ರಕೋಟೆ ಎಂದು ಹಲವರು ಹೇಳ್ತಿದ್ರು. ಆದರೆ, ಮುಂದಿನ ದಿನಗಳಲ್ಲಿ ಬಿಜೆಪಿಯ ಕೋಟೆ ಕಾಂಗ್ರೆಸ್ ಕೈ ಸೇರಲಿದೆ. ಬೆಳ್ತಂಗಡಿಯಿಂದಲೇ ನನ್ನ ಚುನಾವಣೆಯ ಪ್ರಚಾರ ಪ್ರಾರಂಭಿಸಿದ್ದೇನೆ. ಇದು ನನ್ನ ಚುನಾವಣೆಯಲ್ಲ, ಕಾಂಗ್ರೆಸ್ ಪಕ್ಷದ ನಿಷ್ಠಾವಂತರ ಚುನಾವಣೆ ಎಂದು ಹೇಳಿದರು. ಏಪ್ರಿಲ್ 18 ರಂದು ಬಿಜೆಪಿ ಭದ್ರಕೋಟೆಯನ್ನು ಕಾಂಗ್ರೆಸ್ ಭದ್ರಕೋಟೆಯಾಗಿ ಪರಿವರ್ತಿಸುವ ಬಗ್ಗೆ ಸಂಕಲ್ಪ ಮಾಡಿದ್ದೇನೆ. ಜಿಲ್ಲೆಯ ಜನರಿಗೆ ದಾರಿದೀಪವಾಗಿದ್ದ ವಿಜಯಾ ಬ್ಯಾಂಕ್ ಇಂದು ವಿಲೀನವಾಗಿ ತನ್ನ ಅಸ್ತತ್ವ ಕಳೆದು ಕೊಂಡಿದೆ.ವಿಜಯಾಬ್ಯಾಂಕ್ ಉಳಿಸುವ ಸಂಕಲ್ಪವನ್ನು ನಾವು ಕೈಗೊಳ್ಳುತ್ತೇವೆ. ಅವಕಾಶ ಸಿಕ್ಕಿದ ಮೇಲೆ ನನ್ನ ಸಂಸದೀಯ ಪಟ್ಟ ಹೋದರೂ ಪರ್ವಾಗಿಲ್ಲ, ಶತಾಯಗತಾಯ ಹೋರಾಟ ನಡೆಸಿ ವಿಜಯಾ ಬ್ಯಾಂಕ್ ಲಾಂಛನ ಮತ್ತೆ ತರುತ್ತೇನೆ ಎಂದು ಹೇಳಿದರು.












Click it and Unblock the Notifications