ಕಟೀಲು ದೇವಿಯ ದರ್ಶನ ಪಡೆದ ರಚಿತಾ ರಾಮ್: ಭ್ರಮರ ಇಂಚರ ನುಡಿಹಬ್ಬದಲ್ಲಿ ಡಿಂಪಲ್ ಕ್ವೀನ್
ಮಂಗಳೂರು, ಡಿಸೆಂಬರ್ 04: ಕನ್ನಡ ಚಿತ್ರರಂಗದ ಡಿಂಪಲ್ ಕ್ವೀನ್ ರಚಿತಾ ರಾಮ್ ಕರಾವಳಿಯ ಪುಣ್ಯಕ್ಷೇತ್ರ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಮೊದಲ ಬಾರಿಗೆ ಕ್ಷೇತ್ರಕ್ಕೆ ಆಗಮಿಸಿದ ರಚಿತಾ ರಾಮ್ ಕಟೀಲು ಶ್ರೀ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ದೇಗುಲದ ಅರ್ಚಕ ವೆಂಕಟರಮಣ ಅಸ್ರಣ್ಣ ದೇವರ ಶೇಷ ವಸ್ತ್ರ, ಪ್ರಸಾದ ನೀಡಿ ರಚಿತಾ ಅವರನ್ನು ಗೌರವಿಸಿದ್ದಾರೆ.
ಕಟೀಲು ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿದ ಬಳಿಕ ಕಟೀಲು ಶ್ರೀ ದುರ್ಗಾಪರಮೇಶ್ವರೀ ಸಮೂಹ ಶಿಕ್ಷಣ ಸಂಸ್ಥೆಗಳ ಅಶ್ರಯದಲ್ಲಿ ಮೂರು ದಿನಗಳ ಕಾಲ ನಡೆಯುತ್ತಿರುವ ಭ್ರಮರ ಇಂಚರ ನುಡಿಹಬ್ಬ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ರಚಿತಾ ರಾಮ್ ಭಾಗವಹಿಸಿದ್ದಾರೆ. ಈ ವೇಳೆ ವಿದ್ಯಾಥಿಗಳು ನಟಿ ರಚಿತಾ ರಾಮ್ ಭಾವ ಚಿತ್ರ ಬಿಡಿಸಿ ಕೊಡುಗೆಯಾಗಿ ನೀಡಿದ್ದಾರೆ.

ತಮ್ಮ ಫೋಟೋ ಡ್ರಾಯಿಂಗ್ ನೋಡಿದ ರಚಿತಾ ರಾಮ್ ಖುಷಿಯಿಂದ ವಿದ್ಯಾರ್ಥಿನಿಯನ್ನು ಅಪ್ಪಿ ಧನ್ಯವಾದ ಹೇಳಿದ್ದಾರೆ. ಅಲ್ಲದೇ ವಿದ್ಯಾರ್ಥಿಗಳಿಗೆ ಹಲವು ಕಿವಿಮಾತು ಹೇಳಿದ್ದಾರೆ. ವಿದ್ಯಾರ್ಥಿಗಳು ಹೆತ್ತ ತಂದೆ ತಾಯಿಗಳಿಗೆ, ಕಲಿಸುವ ಗುರುಗಳಿಗೆ ಮೊದಲು ಗೌರವ ಕೊಡಲು ಕಲಿಯಬೇಕು. ಅವರಿಗೆ ನೋವು ಕೊಡಬೇಡಿ. ಉತ್ತಮ ಶಿಕ್ಷಣ ಸಂಸ್ಥೆ ಮಕ್ಕಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವುದಕ್ಕೆ ಉತ್ತಮ ಅವಕಾಶ ಎಂದು ಹೇಳಿದರು.
ನುಡಿ ಹಬ್ಬದಲ್ಲಿ ರಂಗಭೂಮಿ ಮತ್ತು ಸಿನಿಮಾಗೋಷ್ಠಿಯ ಸಂಪನ್ಮೂಲ ವ್ಯಕ್ತಿಯಾಗಿ ಮಾತು ಮುಂದುವರಿಸಿದ ರಚಿತಾ ರಾಮ್ ಅವಕಾಶ ಸಿಕ್ಕಾಗಲೆಲ್ಲಾ ತಪ್ಪಿಸಿಕೊಳ್ಳದೇ ಇಂತಹ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಅದುವೇ ನಮ್ಮ ಬದುಕಿನ ದಾರಿದೀಪವಾಗಬಹುದು. ಸಿಕ್ಕ ಅವಕಾಶ, ಸಮಯ ಕಳೆದುಕೊಂಡರೆ ಮತ್ತೆ ಸಿಗುವುದಿಲ್ಲ. ನಿಮ್ಮೊಳಗಿನ ಪ್ರತಿಭೆಯನ್ನು ಬಚ್ಚಿಟ್ಟುಕೊಳ್ಳಬೇಡಿ ಎಂದು ರಚಿತಾ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ್ದಾರೆ.

ಇನ್ನು ವಿದ್ಯಾರ್ಥಿಗಳೊಂದಿಗೆ ಅತ್ಯಂತ ಲವಲವಿಕೆಯಿಂದ ಇದ್ದ ರಚಿತಾ ರಾಮ್, ಮಕ್ಕಳನ್ನು ವೇದಿಕೆಗೆ ಕರೆದು ಮಾತನಾಡಿಸಿ, ಹಾಡಿಸಿ, ನಕ್ಕು ನಗಿಸಿದರು. ಡಿಂಪಲ್ ಕ್ವೀನ್ನ ಸರಳತೆ ಹಾಗೂ ಸ್ನೇಹಪರತೆ ಕಂಡು ವಿದ್ಯಾರ್ಥಿಗಳು ಫುಲ್ ಖುಷಿಯಾಗಿದ್ದಾರೆ.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ನಟ ರಮೇಶ್ ಭಟ್ ಮಾತನಾಡಿ, ಎಲ್ಲ ಜನರಲ್ಲಿ ಒಬ್ಬ್ಬೊಬ್ಬ ಕಲಾವಿದನಿದ್ದಾನೆ. ಅದು ಬೇರೆ ಬೇರೆ ರೀತಿಯದ್ದಾಗಿರಬಹುದು. ವಿದ್ಯಾರ್ಥಿಗಳು ಆಸಕ್ತಿದಾಯಕ ಕೆಲಸದಲ್ಲಿ ತೊಡಗಿಸಿಕೊಳ್ಳಿ, ಮಕ್ಕಳು ಪಾಠ ಮಾತ್ರವಲ್ಲದೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ ಎಂದು ಹೇಳಿದರು.












Click it and Unblock the Notifications