ಕುಕ್ಕೆ ಸುಬ್ರಮಣ್ಯದ ಅಭಿವೃದ್ಧಿಗೆ ಪ್ರಾಧಿಕಾರ ರಚನೆ?
ಮಂಗಳೂರು, ಮಾ.5 : ಪುರಾಣ ಪ್ರಸಿದ್ಧ ಕುಕ್ಕೆ ಸುಬ್ರಮಣ್ಯ ದೇವಾಲಯದ ಅಭಿವೃದ್ಧಿಗಾಗಿ ಸರ್ಕಾರ 'ದೇವಾಲಯ ಅಭಿವೃದ್ಧಿ ಪ್ರಾಧಿಕಾರ'ವನ್ನು ರಚನೆ ಮಾಡುವ ಸಾಧ್ಯತೆ ಇದೆ. ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ.
ಪುತ್ತೂರು ಸಹಾಯಕ ಕಮೀಷನರ್ ಬಸವರಾಜು ಅವರು ಈ ಕುರಿತು ಮಾಹಿತಿ ನೀಡಿದ್ದು, ಕುಕ್ಕೆ ಸುಬ್ರಮಣ್ಯ ದೇವಾಲಯದ ಅಭಿವೃದ್ಧಿಗಾಗಿ 'ದೇವಾಲಯ ಅಭಿವೃದ್ಧಿ ಪ್ರಾಧಿಕಾರ' ರಚನೆ ಮಾಡುವ ಪ್ರಸ್ತಾನೆಯನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡಲಾಗಿದೆ ಎಂದು ಹೇಳಿದ್ದಾರೆ. [ಮಲೆ ಮಹದೇಶ್ವರದ ಅಭಿವೃದ್ಧಿಗೆ ಪ್ರಾಧಿಕಾರ]

ಕೆಲವು ದಿನಗಳ ಹಿಂದೆ ಸರ್ಕಾರ ಮಲೆ ಮಹದೇಶ್ವರಬೆಟ್ಟದ ಅಭಿವೃದ್ಧಿಗಾಗಿ 'ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ' ವನ್ನು ಆರಂಭಿಸಿತ್ತು. ಪ್ರಾಧಿಕಾರ ರಚನೆಯಾದರೆ ದೇವಾಲಯ ಮುಜರಾಯಿ ಇಲಾಖೆ ವ್ಯಾಪ್ತಿಯಿಂದ ಹೊರ ಬಂದು ಪ್ರಾಧಿಕಾರದ ನಿರ್ವಹಣೆಗೆ ಒಳಪಡಲಿದೆ. [ಈ ಮಳೆಗಾಲದಲ್ಲೂ ಕುಕ್ಕೆ ಕ್ಷೇತ್ರ ಸುದ್ದಿಯಾಗುವುದು ಖಂಡಿತ]
ಕುಕ್ಕೆ ಸುಬ್ರಮಣ್ಯ ದೇವಾಲಯದ ವಾರ್ಷಿಕ ಆದಾಯ ಸುಮಾರು 60 ರಿಂದ 80 ಕೋಟಿ. ಭಕ್ತರಿಗೆ ಸರಿಯಾದ ವ್ಯವಸ್ಥೆಗಳನ್ನು ಕಲ್ಪಿಸಿಕೊಟ್ಟರೆ ದೇವಾಲಯದ ಆದಾಯ ವಾರ್ಷಿಕ 100 ಕೋಟಿ ರೂ.ಗಳಿಗೆ ತಲುಪಲಿದೆ. ಪ್ರಾಧಿಕಾರ ರಚನೆಯಾದರೆ ಕೆಎಎಸ್ ಅಧಿಕಾರಿಯೊಬ್ಬರು ಆಡಳಿತಾಧಿಕಾರಿಯಾಗಿ ನೇಮಕಗೊಳ್ಳಲಿದ್ದಾರೆ. [ರಾಜ್ಯದ 12 ಶ್ರೀಮಂತ ದೇವಾಲಯಗಳ ಹೊಸ ಪಟ್ಟಿ]
ಪ್ರಾಧಿಕಾರ ರಚನೆಯಾದ ತಕ್ಷಣ ದೇವಾಲಯದ ಆಡಳಿತ ಮುಜರಾಯಿ ಇಲಾಖೆಯಿಂದ ಬೇರ್ಪಟ್ಟು ಪ್ರಾಧಿಕಾರದ ವ್ಯಾಪ್ತಿಗೆ ಒಳಪಡುತ್ತದೆ. ದೇವಾಲಯದ ಆದಾಯವನ್ನು ಯಾವ ಸೌಲಭ್ಯಗಳನ್ನು ಕಲ್ಪಿಸಲು ಖರ್ಚು ಮಾಡಬೇಕು, ದೇವಾಲಯದ ಸುತ್ತಮುತ್ತಲಿನ ಗ್ರಾಮಗಳ ಅಭಿವೃದ್ಧಿ ಮುಂತಾದ ಯೋಜನೆ ರೂಪಿಸಿ ಅನುಷ್ಠಾನಗೊಳಿಸುವ ಕೆಲಸ ಪ್ರಾಧಿಕಾರದ್ದಾಗಿರುತ್ತದೆ.












Click it and Unblock the Notifications