ನಳಿನ್ ಕಟೀಲ್ ಸತ್ರಾ ಎಂದು ಪ್ರಶ್ನಿಸುತ್ತೇವೆ: ಲಯತಪ್ಪಿದ ರಮಾನಾಥ ರೈ ವಾಗ್ದಾಳಿ
ಅರಣ್ಯ ಸಚಿವರಾಗಿದ್ದಾಗಲೂ ತಮ್ಮ ವಿವಾದಕಾರಿ ಹೇಳಿಕೆಯಿಂದ ಹಲವು ಬಾರಿ ಟೀಕೆಗೆ ಒಳಗಾಗಿದ್ದ, ಮಾಜಿ ಸಚಿವ ರಮಾನಾಥ ರೈ, ಮತ್ತೊಮ್ಮೆ ಕೀಳುಮಟ್ಟದ ಹೇಳಿಕೆಯನ್ನು ನೀಡಿದ್ದಾರೆ.
ಮಂಗಳೂರು, ನ 9: ಅರಣ್ಯ ಸಚಿವರಾಗಿದ್ದಾಗಲೂ ತಮ್ಮ ವಿವಾದಕಾರಿ ಹೇಳಿಕೆಯಿಂದ ಹಲವು ಬಾರಿ ಟೀಕೆಗೆ ಒಳಗಾಗಿದ್ದ, ಮಾಜಿ ಸಚಿವ ರಮಾನಾಥ ರೈ, ಮತ್ತೊಮ್ಮೆ ಕೀಳುಮಟ್ಟದ ಹೇಳಿಕೆಯನ್ನು ನೀಡಿದ್ದಾರೆ.
ಅಪನಗದೀಕರಣಕ್ಕೆ ಎರಡು ವರ್ಷವಾದ ಹಿನ್ನಲೆಯಲ್ಲಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪ್ರತಿಭಟನೆ ನಡೆಸಿ ಮಾತನಾಡುತ್ತಿದ್ದ ರಮಾನಾಥ ರೈ, ವಿಜಯಾ ಬ್ಯಾಂಕ್ ವಿಲೀನ ತಪ್ಪಿಸಲು ಕೇಂದ್ರಕ್ಕೆ ಒತ್ತಡ ತರಲು ಸಾಧ್ಯವಾಗದೇ ಇದ್ದರೆ, ನಳಿನ್ ಕಟೀಲ್ ಬದುಕಿದ್ದರೂ ಸತ್ತಹಾಗೆ ಎಂದು ಹೇಳಿದ್ದಾರೆ. (ಟಿಪ್ಪು ಜಯಂತಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿಷೇಧಾಜ್ಞೆ)
ಲಾಭದಲ್ಲಿರುವ ವಿಜಯಾ ಬ್ಯಾಂಕ್ ಅನ್ನು ಕೇಂದ್ರ ಸರಕಾರ ವಿಲೀನಗೊಳಿಸಿದೆ. ವಿಜಯಾ ಬ್ಯಾಂಕ್ ಈ ಮಟ್ಟಕ್ಕೆ ಬರಲು ನಮ್ಮ ಸಮುದಾಯದವರು ಬೆವರು ಸುರಿಸಿದ್ದಾರೆ. ಇದರ ಬಗ್ಗೆ ಮಾನ್ಯ ಸಂಸದ ಕಟೀಲ್ ಅವರಿಗೆ ಏನಾದರೂ ತಿಳುವಳಿಕೆಯಿದೆಯಾ ಎಂದು ರೈ ಪ್ರಶ್ನಿಸಿದ್ದಾರೆ.

ಇನ್ನಾದರೂ, ಕೇಂದ್ರ ಸರಕಾರಕ್ಕೆ ಒತ್ತಡ ಹೇರಿ ವಿಲೀನ ಪ್ರಕ್ರಿಯೆಯನ್ನು ನಳಿನ್ ಕಟೀಲ್ ನಿಲ್ಲಿಸಲಿ. ಇಲ್ಲದಿದ್ದರೆ, ನಳಿನ್ ಕುಮಾರ್ ಕಟೀಲ್ ಸತ್ತಿದ್ದಾರೆಯೇ ಎಂದು ಪ್ರಶ್ನಿಸಬೇಕಾಗುತ್ತದೆ. ಜೊತೆಗೆ, ಅವರ ಶವಸಂಸ್ಕಾರ ನಡೆಸುವುದು ಮಾತ್ರ ಬಾಕಿಯಿದೆ ಎಂದು ಹೇಳಬೇಕಾಗುತ್ತದೆ ಎಂದು ರಮಾನಾಥ ರೈ, ವಿವಾದಕಾರಿ ಹೇಳಿಕೆ ನೀಡಿದ್ದಾರೆ.
ಲಾಭದಲ್ಲಿರುವ ವಿಜಯಾ ಬ್ಯಾಂಕ್ ಅನ್ನು ನಷ್ಟದಲ್ಲಿರುವ ದೇನಾ ಬ್ಯಾಂಕ್ ಜೊತೆ ವಿಲೀನಗೊಳಿಸಲಾಗಿದೆ. ನಮ್ಮ ರಾಜ್ಯದ ಹೆಮ್ಮೆಯ ಬ್ಯಾಂಕುಗಳಲ್ಲಿ ವಿಜಯಾ ಬ್ಯಾಂಕ್ ಕೂಡಾ ಒಂದು. ವಿಲೀನ ಪ್ರಕ್ರಿಯೆ ತಪ್ಪಿಸುವ ಕನಿಷ್ಟ ಪ್ರಯತ್ನ, ಎಲ್ಲದಕ್ಕೂ ಬಾಯಿಬಡಿದುಕೊಳ್ಳುವ ಬಿಜೆಪಿ ನಾಯಕರಿಂದ ಆಗಲಿಲ್ಲ ಎಂದು ರಮಾನಾಥ್ ರೈ ವಾಗ್ದಾಳಿ ನಡೆಸಿದ್ದಾರೆ.
ಟಿಪ್ಪುವಿಗಿಂತ ದೊಡ್ಡ ಮತಾಂಧ ಸಿದ್ಧರಾಮಯ್ಯ. ಮುಖ್ಯಮಂತ್ರಿ ಕುಮಾರಸ್ವಾಮಿ ಟಿಪ್ಪುವಿನ ಬದಲು ಸಿದ್ಧರಾಮಯ್ಯನವರ ಜಯಂತಿ ಮಾಡಬಹುದಿತ್ತು ಎಂದು ಸಂಸದ ಕಟೀಲ್, ಶುಕ್ರವಾರ (ನ 9) ಆಕ್ರೋಶ ವ್ಯಕ್ತಪಡಿಸಿದ್ದರು.












Click it and Unblock the Notifications