ಯು. ಟಿ. ಖಾದರ್ಗೆ ಹತ್ಯೆಗೆ ಸಂಚು; ಭದ್ರತೆಗೆ ಗೃಹ ಸಚಿವರ ಸೂಚನೆ
ಮಂಗಳೂರು, ಮಾರ್ಚ್ 06 : ಮಾಜಿ ಸಚಿವ, ಕಾಂಗ್ರೆಸ್ ಶಾಸಕ ಯು. ಟಿ. ಖಾದರ್ ಹತ್ಯೆಗೆ ಸಂಚು ರೂಪಿಸಲಾಗಿದೆ. ಕರ್ನಾಟಕ ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದು, ಭದ್ರತೆ ಹೆಚ್ಚಿಸಲು ಗೃಹ ಸಚಿವರು ಆದೇಶ ನೀಡಿದ್ದಾರೆ.
ಯು. ಟಿ. ಖಾದರ್ ಹತ್ಯೆಗೆ ಸಂಚು ರೂಪಿಸಲಾಗಿದೆ ಎಂಬ ವಿಚಾರ ಬೆಳಕಿಗೆ ಬಂದಿದೆ. ಸ್ವತಃ ಗೃಹ ಸಚಿವ ಬಸವರಾಜ ಬೊಮ್ಮಾಯಿ ಯು. ಟಿ. ಖಾದರ್ ಜೊತೆ ದೂರವಾಣಿ ಮೂಲಕ ಈ ಕುರಿತು ಮಾತುಕತೆ ನಡೆಸಿದ್ದಾರೆ.
ಗುಪ್ತಚರ ಇಲಾಖೆ ಯು. ಟಿ. ಖಾದರ್ ಹತ್ಯೆಗೆ ಸಂಚು ರೂಪಿಸುವ ಮಾಹಿತಿ ಪಡೆದಿತ್ತು. ಬಳಿಕ ಪೊಲೀಸರಿಗೆ ಈ ಕುರಿತು ಮಾಹಿತಿ ನೀಡಿತು. ಎಸಿಪಿಯೊಬ್ಬರು ಮಂಗಳೂರಿನಲ್ಲಿರುವ ಖಾದರ್ ನಿವಾಸಕ್ಕೆ ಭೇಟಿ ನೀಡಿದ್ದಾರೆ.
ಮಾಜಿ ಸಚಿವ ಯು. ಟಿ. ಖಾದರ್ಗೆ ಭದ್ರತೆ ನೀಡಬೇಕು ಎಂದು ಗೃಹ ಸಚಿವರು ಮಂಗಳೂರು ಪೊಲೀಸರಿಗೆ ಆದೇಶ ನೀಡಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಖಾದರ್ ಹೋರಾಟ ಮಾಡಿದ್ದು ಜೀವ ಬೆದರಿಕೆಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ.
ಮೂಲಭೂತವಾದಿಗಳಿಂದ ಹತ್ಯೆ ಸಂಚು
ಮೂಲಭೂತವಾದಿಗಳು ಯು. ಟಿ. ಖಾದರ್ ಹತ್ಯೆಗೆ ಸಂಚು ರೂಪಿಸಿದ್ದಾರೆ ಎಂದು ಗುಪ್ತಚರ ಇಲಾಖೆ ಮೊದಲು ಮಾಹಿತಿ ನೀಡಿತ್ತು. ಮೈಸೂರಿನಲ್ಲಿ ಶಾಸಕ ತನ್ವೀರ್ ಸೇಠ್ ಹತ್ಯೆಯತ್ನ ನಡೆದಿತ್ತು. ಇದೇ ಮಾದರಿಯಲ್ಲಿ ಯು. ಟಿ. ಖಾದರ್ ಹತ್ಯೆಗೆ ಸಂಚು ನಡೆದಿದೆ ಎಂದು ಗುಪ್ತಚರ ಇಲಾಖೆ ಮಾಹಿತಿ ಸಂಗ್ರಹಿಸಿತ್ತು.
ಯು. ಟಿ. ಖಾದರ್ಗೆ ಮಾಹಿತಿ
ಗುಪ್ತಚರ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದ ಪೊಲೀಸರು ಮಂಗಳೂರಿನ ಯು. ಟಿ. ಖಾದರ್ ನಿವಾಸಕ್ಕೆ ಭೇಟಿ ನೀಡಿದರು. ಪೊಲೀಸರ ಭದ್ರತೆ ಪಡೆಯುವಂತೆ ಮನವಿ ಮಾಡಿದರು. ಗೃಹ ಸಚಿವ ಬಸವರಾಜ ಬೊಮ್ಮಾಯಿ ಸಹ ಭದ್ರತೆ ನೀಡುವಂತೆ ಪೊಲೀಸರಿಗೆ ಸೂಚನೆ ಕೊಟ್ಟಿದ್ದಾರೆ.
ಒಬ್ಬ ಗನ್ ಮ್ಯಾನ್ ವ್ಯವಸ್ಥೆ
ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಯು. ಟಿ. ಖಾದರ್, "ಒಬ್ಬ ಗನ್ ಮ್ಯಾನ್ ನೀಡುವುದಾಗಿ ಹೇಳಿದ್ದಾರೆ. ಒಬ್ಬ ಗನ್ ಮ್ಯಾನ್ನಿಂದ ರಕ್ಷಣೆ ಹೇಗೆ ಸಾಧ್ಯ?. ನಾನು ವಿವಿಧ ಜಿಲ್ಲೆಗಳಿಗೆ ಕಾರ್ಯಕ್ರಮಕ್ಕೆ ಹೋಗುತ್ತೇನೆ. ಆದ್ದರಿಂದ, ಕಾರ್ಯಕ್ರಮದ ಬಗ್ಗೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಬೇಕು" ಎಂದು ಹೇಳಿದರು.
ಜೀವ ಬೆದರಿಕೆ ಹಾಕಲಾಗಿತ್ತು
ಪೌರತ್ವ ತಿದ್ದುಪಡಿ ಮತ್ತು ಎನ್ಆರ್ಸಿ ಪರವಾಗಿ ಬಿಜೆಪಿಯಿಂದ ಜನವರಿ 27ರಂದು ಕೂಳೂರು ಗೋಲ್ಡ್ ಫಿಂಚ್ ಸಿಟಿ ಮೈದಾನದಲ್ಲಿ ಜನಜಾಗೃತಿ ಸಮಾವೇಶ ಆಯೋಜನೆ ಮಾಡಲಾಗಿತ್ತು. ಆಗ ಯುವಕರ ಗುಪೊಂದು ಖಾದರ್ಗೆ ಜೀವ ಬೆದರಿಕೆ ಹಾಕುವ ಘೋಷಣೆ ಕೂಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿತ್ತು. ಬಳಿಕ ಕಾವೂರು ಪೊಲೀಸರು ಯುವಕರ ವಿರುದ್ಧ ಸ್ವಯಂ ಪ್ರೇರಿತವಾಗಿ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದರು.