ಕರಾವಳಿಯಲ್ಲಿ ಮಾದಕ ವಸ್ತು ಬ್ರೇಕ್ ಗೆ ಡಿಸಿ ಪಣ
ಮಂಗಳೂರು ನವೆಂಬರ್ 25: ನಗರದೆಲ್ಲೆಡೆ ಗಾಂಜಾ ಹಾಗು ಮಾದಕವಸ್ತುಗಳ ಜಾಲ ಹೆಚ್ಚಾಗುತ್ತಿದೆ. ಈ ಮಾದಕ ವಸ್ತುಗಳಿಗೆ ಯುವಕರು ಮತ್ತು ಶಾಲಾಕಾಲೇಜುಗಳ ವಿದ್ಯಾರ್ಥಿಗಳು ಬಲಿಯಾಗುತ್ತಿದ್ದಾರೆ. ಹೀಗಾಗಿ ಯುವಕರು ಮಾದಕ ವ್ಯಸನಿಗಳಾಗದಂತೆ ತಡೆಯಲು ತೀವ್ರ ನಿಗಾ ವಹಿಸುವಂತೆ ಎಂದು ಜಿಲ್ಲಾಧಿಕಾರಿ ಡಾ.ಕೆ.ಜಿ. ಜಗದೀಶ್ ಸೂಚಿಸಿದರು.
ಮಂಗಳೂರು, ದಕ್ಷಿಣ ಕನ್ನಡ ಭಾಗಗಳಲ್ಲಿ ಗಾಂಜಾ ಅಪೀಮು, ಹೆರಾಯಿನ್ ಇತ್ಯಾದಿಗಳನ್ನು ವಿತರಿಸುವ ಜಾಲವೇ ಹಬ್ಬಿದ್ದು, ಈ ಚಟುವಟಿಕೆಯಲ್ಲಿ ಯುವ ಜನತೆ ಹಾಳಾಗುತ್ತಿರುವುದರ ಬಗ್ಗೆ ಗಮನಹರಿಸಿ ಕ್ರಮ ಜರುಗಿಸುವುದಾಗಿ ಅವರು ತಿಳಿಸಿದರು.[ಡ್ರಗ್ ಸೇವಿಸುವ ವಿದ್ಯಾರ್ಥಿಗಳನ್ನು ಜೈಲಿಗಟ್ಟಿ: ಪಿಯು ಇಲಾಖೆ ಸೂಚನೆ]

ದ.ಕ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಜಿಲ್ಲಾ ತಂಬಾಕು ನಿಯಂತ್ರಣ ಕೋಶದಲ್ಲಿ ಮಾತನಾಡಿ, ಗಾಂಜಾ, ಅಫೀಮು ಸೇರಿದಂತೆ ಮಾದಕ ವಸ್ತುಗಳಿಗೆ ವಿದ್ಯಾರ್ಥಿಗಳು ಬಲಿಯಾಗುತ್ತಿರುವುದನ್ನು ನಿಯಂತ್ರಿಸಲು ಮತ್ತು ಮಾದಕ ವಸ್ತುಗಳ ಚಟುವಟಿಕೆಗಳ ಮೇಲೆ ನಿಗಾ ಇಡಲು ಮತ್ತು ವಿದ್ಯಾರ್ಥಿಗಳನ್ನು ತಪಾಸಣೆ ನಡೆಸಲು ಈಗಾಗಲೇ ನಗರದಲ್ಲಿರುವ ಪ್ರತಿ ಶಾಲಾ ಕಾಲೇಜುಗಳಲ್ಲಿ ನೋಡೆಲ್ ಶಿಕ್ಷಕರನ್ನು ನೇಮಿಸಲಾಗಿದೆ. ಈ ಶಿಕ್ಷಕರಿಗೆ ಸೂಕ್ತ ತರಬೇತಿ ನೀಡಿ ಅವರು ವಿದ್ಯಾರ್ಥಿಗಳ ಮೇಲೆ ನಿಗಾ ಇಡುವಂತೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ತಿಳಿಸಿದರು.
ಅಲ್ಲದೆ ನಗರದಾದ್ಯಂತ ಮಾದಕ ವಸ್ತುಗಳನ್ನು ಗುಪ್ತವಾಗಿ ಮಾರುವ ಕೊಳ್ಳುವ ಜಾಲ ಹೆಚ್ಚಿದೆ. ಈ ಚಟುವಟಿಕೆಗೆ ಪೂರ್ಣ ಪ್ರಮಾಣದಲ್ಲಿ ಕಡಿವಾಣ ಹಾಕಲು ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಗಾಂಜಾ ಪ್ರಕರಣ ಶಾಲಾ ಕಾಲೇಜುಗಳಲ್ಲಿ ಕಂಡು ಬಂದರೆ ನೋಡೆಲ್ ಶಿಕ್ಷಕರು ನೇರವಾಗಿ ಪೊಲೀಸ್ ಠಾಣೆಗೆ ಮಾಹಿತಿ ನೀಡುತ್ತಾರೆ. ನಂತರ ಗಾಂಜಾ ಪ್ರಕರಣಕ್ಕೆ ಸಂಬಂಧಿಸಿದ ತನಿಖೆ ನಡೆಸಿ ಕ್ರಮ ಜರುಗಿಸಲಾಗುವುದು. ಈ ನಿಟ್ಟಿನಲ್ಲಿ ಜಿಲ್ಲೆಯನ್ನು ಗಾಂಜಾ ಮುಕ್ತ ಜಿಲ್ಲೆಯಾಗಿಸಲು ಪಣತೊಟ್ಟಿರುವುದಾಗಿ ಡಿಸಿ ತಿಳಿಸಿದರು.

ಸಾರ್ವಜನಿಕ ಸ್ಥಳಗಳಲ್ಲಿ ಬೀಡಿ, ಸಿಗರೇಟು ಸೇರಿದಂತೆ ತಂಬಾಕು ಸೇವನೆ ನಿಯಂತ್ರಿಸಲು ನೋಡೆಲ್ ಶಿಕ್ಷಕರಿಗೆ ತಿಳಿಸಲಾಗುವುದು, ಶಾಲಾ ಕಾಲೇಜಿನ ಸುತ್ತಮುತ್ತ ತಂಬಾಕು ಉತ್ಪನ್ನಗಳ ಚಟುವಟಿಕೆಗಳ ಮೇಲೂ ನಿಗಾ ಇಡಲು ಸೂಚಿಸಲಾಗುವುದು ಎಂದು ತಿಳಿಸಿದರು. ಈಗಾಗಲೇ ತಂಬಾಕು ಉತ್ಪನ್ನ ಮಾರಾಟ ನಿಷೇಧ ನಿಯಮ ಜಾರಿಯಾಗಿರುವ ಬಗ್ಗೆ ಮಾಹಿತಿ ನೀಡಿದ ಅವರು ತಂಬಾಕು ಮತ್ತು ಮಾದಕ ವಸ್ತುಗಳ ಚಟುವಟಿಕೆಯನ್ನು ಮುಕ್ತಗೊಳಿಸಲು ಸಹಕರಿಸುವಂತೆ ಕೇಳಿದರು.












Click it and Unblock the Notifications