ಮಂಗಳೂರು: ಕಲ್ಯಾಣ ಮಂಟಪದಲ್ಲಿ ಮಾಜಿ ಪ್ರೇಯಸಿ ರಂಪಾಟ, ತಾಳಿ ಕಟ್ಟಿ ವರ ಎಸ್ಕೇಪ್
ಮಂಗಳೂರು, ಜನವರಿ 05: ಯುವತಿಯೊಬ್ಬಳು ಕಲ್ಯಾಣ ಮಂಟಪಕ್ಕೆ ಬಂದು ವರನ ವಿರುದ್ಧ ಆರೋಪ ಮಾಡಿ ಮದುವೆ ನಿಲ್ಲಿಸಲು ಯತ್ನಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಕರ್ನಾಟಕದ-ಕೇರಳ ಗಡಿ ಬೀರಿ ಬಳಿ ನಡೆದಿದೆ.
ಕೇರಳ ಕೊಝಿಕ್ಕೋಡ್ ಮೂಲದ ಅಕ್ಷಯ್ ಎನ್ನುವಾತನ ಮದುವೆ ಮಂಗಳೂರು ಮೂಲದ ಯುವತಿ ಜೊತೆ ನಿಶ್ಚಯವಾಗಿತ್ತು. ಇಂದು (ಜನವರಿ 04) ಮದುವೆ ನಡೆಯುತ್ತಿದ್ದ ವೇಳೆ ಕಲ್ಯಾಣ ಮಂಟಪಕ್ಕೆ ನುಗ್ಗಿದ ಯುವತಿ ಮದುವೆ ಮನೆಯಲ್ಲೇ ಗಲಾಟೆ ಮಾಡಿದ್ದಾಳೆ. ಮದುವೆ ಮನೆಗೆ ನುಗ್ಗಿದ ಯುವತಿ ವರ ಅಕ್ಷಯ್ನ ಮಾಜಿ ಪ್ರೇಯಸಿ ಎನ್ನಲಾಗಿದೆ.

ಮೈಸೂರು ಮೂಲದ ಯುವತಿ ಹಾಗೂ ಅಕ್ಷಯ್ ಈ ಹಿಂದೆ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಇಂದು ಮದುವೆ ನಡೆಯುತ್ತಿದ್ದ ಸಂದರ್ಭದಲ್ಲಿ ಉಳ್ಳಾಲ ಪೊಲೀಸರೊಂದಿಗೆ ಕಲ್ಯಾಣ ಮಂಟಪದ ಬಳಿ ಬಂದ ಯುವತಿ ಗಲಾಟೆ ಮಾಡಿದ್ದು, ವರನ ವಿರುದ್ಧ ಗಂಭೀರ ಆರೋಪ ಮಾಡಿದ್ದಾಳೆ.
ಕೇರಳ ಕೊಝಿಕ್ಕೋಡ್ ಮೂಲದ ಅಕ್ಷಯ್ಗೂ ಮೈಸೂರು ಮೂಲದ ಯುವತಿಗೂ ಒಂದೂವರೆ ವರ್ಷದ ಹಿಂದೆ ಶಾದಿ ಡಾಟ್ ಕಾಮ್ ಮೂಲಕ ಪರಿಚಯವಾಗಿದೆ. ಇಬ್ಬರಿಗೂ ಪರಸ್ಪರ ಇಷ್ಟವಾಗಿದ್ದು, ವಿವಾಹವಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ನಡೆಸಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ.
ಇನ್ನು ಈ ಹಿಂದೆ ಅಂದರೆ ಡಿಸೆಂಬರ್ 26ರಂದು ಯುವತಿ ಅಕ್ಷಯ್ ವಿರುದ್ಧ ಕೇರಳದ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ದೂರು ದಾಖಲಿಸಿದ್ದಾಳೆ. ಈ ಪ್ರಕರಣದ ವಿಚಾರಣೆ ನಡೆಯುತ್ತಿದ್ದು, ಕೋರ್ಟ್ ಆರೋಪಿ ಅಕ್ಷಯ್ನ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಳಿಸಿತ್ತು.
ಈ ನಡುವೆಯೇ ಮಂಗಳೂರನ ಯುವತಿ ಜೊತೆ ಅಕ್ಷಯ್ಗೆ ವಿವಾಹ ನಿಶ್ಚಯವಾಗಿತ್ತು. ಕರ್ನಾಟಕದ-ಕೇರಳ ಗಡಿಭಾಗ ಬೀರಿಯ ಖಾಸಗಿ ಹಾಲ್ನಲ್ಲಿ ಮದುವೆ ನಡೆಯುತ್ತಿರುವ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಮಾಜಿ ಪ್ರೇಯಸಿ ಕಲ್ಯಾಣ ಮಂಟಪದ ಮುಂದೆ ಗಲಾಟೆ ಮಾಡಿದ್ದು, ಇನ್ನು ಯುವತಿ ಜೊತೆ ಬಂದಿರುವ ಉಳ್ಳಾಲ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.
ಇತ್ತ ಮಂಗಳೂರು ಮೂಲದ ಯುವತಿಯನ್ನು ಮದುವೆಯಾದ ಅಕ್ಷಯ್ ತಾಳಿ ಕಟ್ಟಿ ಕಲ್ಯಾಣ ಮಂಟಪದಿಂದ ನಾಪತ್ತೆಯಾಗಿದ್ದಾನೆ. ಮಾಜಿ ಪ್ರೇಯಸಿಯ ವಿರೋಧದ ನಡುವೆಯೂ ಮದುವೆಯಾದ ಆರೋಪಿ ಅನಾರೋಗ್ಯ ಕಾರಣ ಮುಂದಿಟ್ಟು ಪರಾರಿಯಾಗಿದ್ದಾನೆ. ಕಿಡ್ನಿಯಲ್ಲಿ ಕಲ್ಲಾಗಿದೆ ಆಸ್ಪತ್ರೆಗೆ ದಾಖಲಾಗುತ್ತೇನೆ ಎಂದು ಮದುವೆಗೆ ಬಂದಿದ್ದ ಸಂಬಂಧಿಕರಿಗೆ ತಿಳಿಸಿ ಹೋಗಿದ್ದಾನೆ ಎನ್ನಲಾಗಿದೆ.












Click it and Unblock the Notifications