ವಿಧಾನ ಪರಿಷತ್ ಸಭಾಪತಿ ಪ್ರತಾಪ್ ಚಂದ್ರಶೆಟ್ಟಿ ಸಹೋದರ ನಿಧನ!
ಬೆಂಗಳೂರು, ಜ. 08: ವಿಧಾನ ಪರಿಷತ್ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಅವರ ಸಹೋದರ ಕೆ. ಸುಧಾಕರ್ (80) ಅವರು ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ಇಂದು ಸಂಜೆ (ಜ.08) ನಿಧನರಾಗಿದ್ದಾರೆ. ಕಳೆದ ಡಿಸೆಂಬರ್ 28 ರಂದು ದೀರ್ಘ ಕಾಲದ ಆನಾರೋಗ್ಯ ಸಮಸ್ಯೆಯಿಂದ ಮಂಗಳೂರಿನ ಎ.ಜೆ. ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಇಂದು ಸಂಜೆ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಇಂದು ತಡರಾತ್ರಿಯೇ ಹೈಕಾಡಿಗೆ ಸುಧಾಕರ್ ಪಾರ್ಥಿವ ಶರೀರ ಆಗಮಿಸಲಿದ್ದು, ಬಳಿಕ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ಕಳೆದ ಡಿಸೆಂಬರ್ 28 ರಂದು ತೀವ್ರ ಅನಾರೋಗ್ಯದಿಂದ ಕೆ. ಸುಧಾಕರ್ ಅವರು ಆಸ್ಪತ್ರೆ ಸೇರಿದ್ದರು. ಹೀಗಾಗಿ ಸಭಾಪತಿ ಕೆ. ಪ್ರತಾಪ್ ಚಂದ್ರ ಶೆಟ್ಟಿ ಅವರು ಬೆಂಗಳೂರಿನಿಂದ ಮಂಗಳೂರಿಗೆ ತೆರಳಿದ್ದರು. ಅದರ ಮರುದಿನ ಅಂದರೆ ಡಿ. 29 ರಂದು ಉಪ ಸಭಾಪತಿ ಎಸ್.ಎಲ್. ಧರ್ಮೇಗೌಡ ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು.

ಸಹೋದರ ಕೆ. ಸುಧಾಕರ್ ಅವರಿಗೆ ತೀವ್ರ ಆರೋಗ್ಯ ಸಮಸ್ಯೆ ಇದ್ದುದರಿಂದ ಸಭಾಪತಿ ಕೆ. ಪ್ರತಾಪ್ ಚಂದ್ರ ಶೆಟ್ಟಿ ಅವರು ಅವತ್ತು ಮಂಗಳೂರಿನಲ್ಲಿದ್ದರು. ಹೀಗಾಗಿ ಉಪ ಸಭಾಪತಿ ಎಸ್.ಎಲ್. ಧರ್ಮೇಗೌಡ ಅವರ ಅಂತಿಮ ದರ್ಶನ ಪಡೆದಿರಲಿಲ್ಲ. ಆದರೆ ವಿಧಾನ ಪರಿಷತ್ನಲ್ಲಿ ಡಿಸೆಂಬರ್ 15 ರಂದು ನಡೆದಿದ್ದ ಹೈಡ್ರಾಮಾ ಹಿನ್ನೆಲೆಯಲ್ಲಿ ಪ್ರತಾಪ್ ಚಂದ್ರ ಶೆಟ್ಟಿ ಅವರು ಧರ್ಮೇಗೌಡ ಅವರ ಅಂತಿಮ ದರ್ಶನ ಪಡೆಯದೆ ಇದ್ದುದ್ದು ಚರ್ಚೆಗೆ ಗ್ರಾಸವಾಗಿತ್ತು.













Click it and Unblock the Notifications