ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ ಅಧಿಕೃತವಾಗಿ ಎನ್ಐಎ ತನಿಖೆಗೆ ಹಸ್ತಾಂತರ
ಮಂಗಳೂರು, ಡಿಸೆಂಬರ್ 1: ನಗರದಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣವನ್ನು ಗುರುವಾರ ಅಧಿಕೃತವಾಗಿ ಎನ್ಐಎಗೆ ಹಸ್ತಾಂತರಿಸಲಾಗಿದೆ. ಮಂಗಳೂರು ಪೊಲೀಸರು ಬುಧವಾರ ರಾತ್ರಿ ಆರೋಪಿ ಶಾರೀಕ್ನನ್ನು ವಿಚಾರಣೆ ನಡೆಸಿದ್ದು, 100ಕ್ಕೂ ಅಧಿಕ ಪ್ರಶ್ನೆಗಳಿಗೆ ಉತ್ತರ ಪಡೆದಿದ್ದಾರೆ.
ಆರೋಪಿ ಶಾರೀಕ್ ವಿಚಾರಣೆ ವೇಳೆ ಹಲವಾರು ಮಹತ್ವದ ಮಾಹಿತಿ ಕಲೆ ಹಾಕಿದ ಮಂಗಳೂರು ಪೊಲೀಸ್ ಕಮಿಷನರ್ ನೇತೃತ್ವದ ತಂಡ ಬಳಿಕ ಪ್ರಕರಣವನ್ನು ಎನ್ಐಎಗೆ ಹಸ್ತಾಂತರಿಸಿದ್ದಾರೆ.
ಕಳೆದ ನವೆಂಬರ್ 19ರ ಶನಿವಾರ ಮಂಗಳೂರಿನ ನಾಗುರಿಯಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟದಲ್ಲಿ ಗಾಯಗೊಂಡಿದ್ದ ಆರೋಪಿ ಶಾರೀಕ್ ಚೇತರಿಸಿಕೊಳ್ಳುತ್ತಿದ್ದಾನೆ. ನವೆಂಬರ್ 19ರಿಂದ ಸುಟ್ಟ ಗಾಯದಿಂದ ಗಂಭೀರ ಸ್ಥಿತಿಯಲ್ಲಿದ್ದ ಶಾರೀಕ್ ಇದೀಗ ಮಾತನಾಡುವ ಸ್ಥಿತಿಗೆ ತಲುಪಿದ್ದಾನೆ. ಹೀಗಾಗಿ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ನೇತೃತ್ವದ ತಂಡ ವೈದ್ಯರ ಸಲಹೆಯಂತೆ ಸುಮಾರು 3 ಗಂಟೆಗಳ ಕಾಲ ಶಾರೀಕ್ನನ್ನು ವಿಚಾರಣೆ ನಡೆಸಿದ್ದಾರೆ.

ವಿಚಾರಣೆ ವೇಳೆ ಬರೋಬ್ಬರಿ 100ಕ್ಕೂ ಅಧಿಕ ಪ್ರಶ್ನೆಗಳನ್ನು ಮಂಗಳೂರು ಪೊಲೀಸರು ಶಾರೀಕ್ ಮುಂದೆ ಇಟ್ಟಿದ್ದಾರೆ. ಈ ವೇಳೆ ಆತನಿಂದ ಮಹತ್ವದ ಮಾಹಿತಿ ಹೊರಬಿದ್ದಿದೆ. ಈ ಎಲ್ಲಾ ಮಾಹಿತಿಗಳನ್ನು ಎನ್ಐಎ ಅಧಿಕಾರಿಗಳಿಗೆ ಶೀಘ್ರದಲ್ಲೇ ನೀಡಲಾಗುವುದು ಎಂದು ಮಂಗಳೂರು ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ತಿಳಿಸಿದ್ದಾರೆ.
ಮಂಗಳೂರು ಪೊಲೀಸರು ಶಾರೀಕ್ನನ್ನು ಸಾಕಷ್ಟು ವಿಚಾರಣೆ ನಡೆಸಿದ್ದು, ಪ್ರಕರಣವನ್ನು ಎನ್ಐಎಗೆ ಹಸ್ತಾಂತರಿಸಿದ್ದಾರೆ. ಮಂಗಳೂರು ಪೊಲೀಸ್ ಆಯುಕ್ತರ ಕಚೇರಿಗೆ ಆಗಮಿಸಿದ ಮೂವರು ಎನ್ಐಎ ಅಧಿಕಾರಿಗಳ ತಂಡ ಪೊಲೀಸ್ ಕಮಿಷನರ್ ಶಶಿಕುಮಾರ್ ಜೊತೆ ಮಾತುಕತೆ ನಡೆಸಿ ಹಲವು ದಾಖಲೆಗಳನ್ನು ಸಂಗ್ರಹಿಸಿದ್ದಾರೆ. ಸುಮಾರು ಎರಡು ಗಂಟೆಗಳ ಕಾಲ ಕಮಿಷನರ್ ಜೊತೆ ಚರ್ಚೆ ನಡೆಸಿದ್ದಾರೆ.
ಶಾರೀಕ್ ಈ ಹಿಂದೆ ಉಗ್ರರ ಪರ ಬರೆದಿದ್ದ ಗೋಡೆ ಬರಹ ಪ್ರಕರಣದ ವಿವರವನ್ನು ಕಮಿಷನರ್ರಿಂದ ಎನ್ಐಎ ಅಧಿಕಾರಿಗಳು ಪಡೆದಿದ್ದಾರೆ. ಡಿಜಿ ಕಚೇರಿಯ ಸೂಚನೆಯಂತೆ ಪ್ರಕರಣವನ್ನು ಗುರುವಾರ ಎನ್ಐಎಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸ್ ಕಮಿಷನರ್ ಸ್ಪಷ್ಟಪಡಿಸಿದ್ದಾರೆ.

ಶಾರೀಕ್ ಚೇತರಿಸಿಕೊಂಡಿರುವುದರಿಂದ ಗುರುವಾರ ಎನ್ಐಎ ಅಧಿಕಾರಿಗಳು ಆತನನ್ನು ಮೊದಲ ಹಂತದ ವಿಚಾರಣೆ ನಡೆಸಲಿದ್ದಾರೆ. ಪ್ರಕರಣ ಎನ್ಐಎಗೆ ಹಸ್ತಾಂತರ ಆಗಿರುವುದರಿಂದ ತನಿಖೆ ಮಹತ್ವ ಪಡೆಯಲಿದೆ. ಶೀಘ್ರದಲ್ಲೇ ಎನ್ಐಎ ಅಧಿಕಾರಿಗಳು ಶಾರೀಕ್ನನ್ನು ವಶಕ್ಕೆ ಪಡೆದು ಆತ ಸಂಪೂರ್ಣವಾಗಿ ಚೇತರಿಸಿಕೊಂಡ ಬಳಿಕ ಬಂಧಿಸಿ ಕರೆದುಕೊಂಡು ಹೋಗಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications