ಮಂಗಳೂರು ಕ್ಷೇತ್ರದಲ್ಲಿ ನನ್ನ ಗೆಲುವು ಖಚಿತ: ಯು.ಟಿ. ಖಾದರ್
ಮಂಗಳೂರು, ಮೇ 14: ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಖಚಿತ ಎಂದು ಸಚಿವ ಯು.ಟಿ. ಖಾದರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ 8 ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಲಿದೆ ಎಂದು ಹೇಳಿದರು.
ರಾಜ್ಯದಲ್ಲಿ ಅತೀ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದ್ದು ರಾಜ್ಯದಲ್ಲಿ ಮತ್ತೆ ಸರಕಾರ ರಚಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಮಂಗಳೂರು ಫೇಸ್ಬುಕ್ ಸಮೀಕ್ಷೆ: ಖಾದರ್ ಗೆ ಸೋಲು, ಸಂತೋಷ್ ರೈಗೆ ಜಯ
ಮುಖ್ಯಮಂತ್ರಿ ಆಯ್ಕೆ ಬಗ್ಗೆ ಕಾಂಗ್ರೆಸ್ ನಲ್ಲಿ ಯಾವುದೇ ರೀತಿಯ ಗೊಂದಲಗಳಿಲ್ಲ ಎಂದು ಹೇಳಿದ ಅವರು, ಪಕ್ಷದ ಹೈಕಮಾಂಡ್ ಮುಖ್ಯಮಂತ್ರಿ ಬಗ್ಗೆ ತೀರ್ಮಾನ ಕೈಗೊಳ್ಳಲಿದೆ ಎಂದು ಸ್ಪಷ್ಟಪಡಿಸಿದರು.
ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಚುನಾವಣಾ ಆಯೋಗ ಉತ್ತಮವಾಗಿ ಕಾರ್ಯ ನಿರ್ವಹಿಸಿದೆ ಎಂದ ಅವರು, ಆದರೆ ಕೆಲವು ವಿಚಾರದಲ್ಲಿ ಮಾತ್ರ ವಿಫಲವಾಗಿದೆ ಎಂದು ದೂರಿದರು. ಆಯೋಗ ನೀಡಿದ ವೋಟರ್ ಸ್ಲಿಪ್ ನಲ್ಲಿ ದುರುಪಯೋಗ ಸಾಧ್ಯತೆ ಹೆಚ್ಚಾಗಿದೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ಮತದಾನದ ವೇಳೆ ಕೇವಲ ವೋಟರ್ ಸ್ಲಿಪ್ ತೋರಿಸಿ ಮತ ಹಾಕುವ ವ್ಯವಸ್ಥೆ ಮಾಡಲಾಗಿರುವುದು ಸರಿಯಾದ ಕ್ರಮವಲ್ಲ ಎಂದು ಹೇಳಿದರು.
ಮತದಾನದ ಸಂದರ್ಭದಲ್ಲಿ ಚುನಾವಣಾ ಆಯೋಗದ ಗುರುತಿನ ಚೀಟಿಯು ಅಗತ್ಯವಿರಲಿಲ್ಲ. ವೋಟರ್ ಸ್ಲಿಪ್ ನಲ್ಲಿ ಕಪ್ಪು- ಬಿಳುಪು ಭಾವಚಿತ್ರ ಇರುತ್ತದೆ. ಅದರಲ್ಲಿ ಗುರುತು ಹಿಡಿಯಲು ಅಸಾಧ್ಯ. ಇದರಿಂದ ದುರುಪಯೋಗ ಸಾಧ್ಯತೆ ಹೆಚ್ಚು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು .
ವೋಟರ್ ಸ್ಲಿಪ್ ನ್ನು ಮನೆ ಮನೆಗೆ ಮುಟ್ಟಿಸಲು ಆಯೋಗ ವಿಫಲವಾಗಿದೆ ಎಂದು ದೂರಿದ ಅವರು, ಕೆಲವು ಕಡೆ ರಾಜಕೀಯ ಪ್ರಭಾವಿಗಳಿಗೆ ವೋಟರ್ ಸ್ಲಿಪ್ ಕೊಡಲಾಗಿದೆ. ಇದರಿಂದ ಮುಂದೆ ಸಾಕಷ್ಟು ಸಮಸ್ಯೆಯಾಗಲಿದೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ಪತ್ರ ಬರೆಯುವುದಾಗಿ ಅವರು ಹೇಳಿದರು.