ಮಂಗಳೂರು ಪೊಲೀಸ್ ಕಮಿಷನರ್ ನೇಮಕ ರದ್ದು, ಖಾದರ್ ಕೈವಾಡ?
ಆಹಾರ ಸಚಿವ ಯು. ಟಿ. ಖಾದರ್ ಹಾಗೂ ಕಾಂಗ್ರೆಸ್ ಶಾಸಕರು ಪೊಲೀಸ್ ಆಯುಕ್ತರಾಗಿ ನೇಮಕಗೊಂಡಿದ್ದ ಸತೀಶ್ ಕುಮಾರ್ ಮಂಗಳೂರಿಗೆ ಬರುವುದು ಬೇಡವೆಂದು ಅಸಮಾಧಾನ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.ಬೆನ್ನಿಗೇ ನೇಮಕ ರದ್ದಾಗಿದೆ.
ಮಂಗಳೂರು, ಮೇ 26: ಮಂಗಳೂರು ನಗರ ಪೊಲೀಸ್ ಕಮಿಷನರ್ ಎಂ ಚಂದ್ರಶೇಖರ್ ಜಾಗಕ್ಕೆ ನೇಮಕವಾಗಿದ್ದ ಎನ್ ಸತೀಶ್ ಕುಮಾರ್ ವರ್ಗಾವಣೆಯನ್ನು ರದ್ದು ಪಡಿಸಲಾಗಿದೆ. ಇದಕ್ಕೆ ಸಚಿವ ಯುಟಿ ಖಾದರ್ ಕಾರಣ ಎನ್ನಲಾಗಿದೆ.
ಆಹಾರ ಸಚಿವ ಯು. ಟಿ. ಖಾದರ್ ಹಾಗೂ ಕಾಂಗ್ರೆಸ್ ಶಾಸಕರು ಪೊಲೀಸ್ ಆಯುಕ್ತರಾಗಿ ನೇಮಕಗೊಂಡಿದ್ದ ಸತೀಶ್ ಕುಮಾರ್ ಮಂಗಳೂರಿಗೆ ಬರುವುದು ಬೇಡವೆಂದು ಅಸಮಾಧಾನ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಇದನ್ನು ಸಚಿವ ಖಾದರ್ ಮುಖ್ಯಮಂತ್ರಿಯವರ ಗಮನಕ್ಕೆ ತಂದಿದ್ದರು ಎಂದೂ ಹೇಳಲಾಗಿದೆ. ಒಟ್ಟಿನಲ್ಲಿ ಸತೀಶ್ ಕುಮಾರ್ ಅಧಿಕಾರ ಸ್ವೀಕರಿಸುವುದು ಮಾತ್ರ ರದ್ದಾಗಿದೆ.
ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸತೀಶ್ ಕುಮಾರ್ ಸೇವೆ ಸಲ್ಲಿಸಿದ್ದರು. ಈ ಅವಧಿಯಲ್ಲಿ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟ ಬಗ್ಗೆ ಜನರಿಂದ ದೂರುಗಳಿದ್ದವು. ದೇಶ, ವಿದೇಶಗಳಲ್ಲಿ ಮಂಗಳೂರಿಗೆ ಕೆಟ್ಟ ಹೆಸರು ತಂದ ಚರ್ಚ್ ದಾಳಿ ಪ್ರಕರಣ ಹಾಗೂ ಅದರ ಬೆನ್ನಿಗೇ ಚರ್ಚ್ ನಲ್ಲಿ ಪ್ರಾರ್ಥನಾ ನಿರತರ ಮೇಲೆ ನಡೆದ ಪೊಲೀಸ್ ದೌರ್ಜನ್ಯ ಪ್ರಕರಣಗಳು ಸತೀಶ್ ಕುಮಾರ್ ಅವಧಿಯಲ್ಲೇ ನಡೆದಿದ್ದವು. ಆದ್ದರಿಂದ ಅವರ ಕಾರ್ಯ ವೈಖರಿಯ ಕುರಿತು ತೀವ್ರ ಆ ಸಂದರ್ಭದಲ್ಲಿ ತೀವ್ರ ಅಸಮಧಾನ ವ್ಯಕ್ತವಾಗಿತ್ತು.
ವಿಶೇಷವಾಗಿ ಚರ್ಚ್ ದಾಳಿ ಬಳಿಕ ಉಳ್ಳಾಲ ವ್ಯಾಪ್ತಿಯಲ್ಲಿ ನಡೆದ ಪೊಲೀಸ್ ದೌರ್ಜನ್ಯಗಳಲ್ಲಿ ಸತೀಶ್ ಕುಮಾರ್ ಅವರ ಪಾತ್ರದ ಕುರಿತು ಸಚಿವ ಯು.ಟಿ. ಖಾದರ್ ಮುಖ್ಯಮಂತ್ರಿಗೆ ದೂರು ನೀಡಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.
ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಶ್ರಮಿಸಿದ್ದ ಚಂದ್ರಶೇಖರ್ ದಕ್ಷ ಅಧಿಕಾರಿಯಾಗಿದ್ದರು ಎಂಬ ಜನಾಭಿಪ್ರಾಯವಿದೆ. ಅಂತಹ ಅಧಿಕಾರಿ ನಿರ್ಗಮಿಸುವಾಗ, ಅದೂ ಚುನಾವಣಾ ವರ್ಷದಲ್ಲಿ ಜಿಲ್ಲೆಯಲ್ಲಿ ಈಗಾಗಲೇ ಜನರ ಅಸಮಾಧಾನಕ್ಕೆ ಪಾತ್ರರಾದ ಅಧಿಕಾರಿಯನ್ನು ಆಯುಕ್ತರಾಗಿ ನೇಮಿಸುವುದು ಸರಿಯಲ್ಲ ಎಂಬ ವಾದವನ್ನು ಖಾದರ್ ಸಹಿತ ಕಾಂಗ್ರೆಸ್ ಶಾಸಕರು ಸರಕಾರದ ಮುಂದಿಟ್ಟಿದ್ದಾರೆ ಎಂದು ಹೇಳಲಾಗಿದೆ.
ಒಟ್ಟಿನಲ್ಲಿ ಅಸಮಧಾನವೋ ಏನೋ ಗೊತ್ತಿಲ್ಲ ಸತೀಶ್ ಕುಮಾರ್ ವರ್ಗಾವಣೆ ಮಾತ್ರ ರದ್ದಾಗಿದೆ. ಇದೀಗ ಮಂಗಳೂರಿಗೆ ಹೊಸ ಕಮಿಷನರ್ ಯಾರು ಬರುತ್ತಾರೆ ನೋಡಬೇಕಷ್ಟೆ.