ಗೃಹ ಖಾತೆಗೆ ರಮಾನಾಥ ರೈ, ದೇವರ ಮೊರೆ ಹೋದ ಕಾಂಗ್ರೆಸ್ ಮುಖಂಡರು
ಮಂಗಳೂರು, ಆಗಸ್ಟ್ 30: ಅರಣ್ಯ ಸಚಿವ ಬಿ ರಮಾನಾಥ ರೈ ಅವರಿಗೆ ಗೃಹ ಖಾತೆ ಸಿಗುವ ಸಾಧ್ಯತೆಗಳು ಬಲವಾಗುತ್ತಿವೆ. ಈ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಬಿರುಸಿನ ಚರ್ಚೆಗಳು ಕೂಡ ನಡೆಯುತ್ತಿವೆ.
ಈ ನಡುವೆ ರಮಾನಾಥ್ ರೈ ಅವರು ಗೃಹ ಖಾತೆ ಸಿಗಬೇಕು ಎಂಬ ಕಾರಣಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ನಾಯಕರು ದೇವರಿಗೂ ಮೊರೆ ಹೋಗಿದ್ದಾರೆ.
Recommended Video
ವೈರಲ್ ಆಯ್ತು ಅರಣ್ಯ ಸಚಿವ ರಮಾನಾಥ್ ರೈ ಡ್ಯಾನ್ಸ್
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರಿ ದೇವಾಲಯಕ್ಕೆ ಇಂದು ಮಾಜಿ ಸಚಿವ ಹಾಗೂ ಮೂಲ್ಕಿ ಮೂಡಬಿದಿರೆ ಕ್ಷೇತ್ರದ ಶಾಸಕ ಅಭಯಚಂದ್ರ ಜೈನ್ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಕಟೀಲು ದೇವಿಗೆ ವಿಶೇಷ ಪೂಜೆ
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ಅಭಯಚಂದ್ರ ಜೈನ್, "ರಮಾನಾಥ ರೈ ಅವರು ಗೃಹ ಸಚಿವರಾಗಬೇಕು ಎಂದು ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದೇವೆ . ರಮಾನಾಥ ರೈಯವರು ಜನತೆಯ ಏಳಿಗೆಗಾಗಿ , ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗಾಗಿ ಬಹಳಷ್ಟು ವರ್ಷಗಳಿಂದ ಹೋರಾಟ ಮಾಡಿದವರು .ಬಜೆಟ್ ನಲ್ಲಿ ಜಿಲ್ಲೆಗೆ ಅತೀ ಹೆಚ್ಚು ಅನುದಾನ ತಂದಿದ್ದಾರೆ," ಎಂದು ಹೇಳಿದರು.
ಜಿಲ್ಲೆಯ ಅಭಿವೃದ್ಧಿಗಾಗಿ ಗೃಹ ಖಾತೆ
"ರಮಾನಾಥ ರೈ ಅವರ ಮುಂದಾಳತ್ವದಲ್ಲಿ ಜಿಲ್ಲೆಯಲ್ಲಿ ಇನ್ನಷ್ಟು ಅಭಿವೃದ್ಧಿ ಕೆಲಸಗಳೂ ನಡೆಯಬೇಕಿದೆ. ಈ ಹಿನ್ನೆಲೆಯಲ್ಲಿ ಅವರಿಗೆ ಗೃಹ ಖಾತೆ ಸಿಗಬೇಕು," ಎಂದು ಅಭಯಚಂದ್ರ ಜೈನ್ ಹೇಳಿದರು .
ಕಾಂಗ್ರೆಸ್ ನಾಯಕರು ಉಪಸ್ಥಿತಿ
ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ , ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧನಂಜಯ ಮಟ್ಟು ಸೇರಿದಂತೆ ಇನ್ನಿತರ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.
ಗೃಹ ಖಾತೆ ಸಮರ್ಥವಾಗಿ ನಿಭಾಯಿಸುತ್ತೇನೆ
ಈ ನಡುವೆ ಗೃಹ ಖಾತೆ ನಿಭಾಯಿಸುವ ಕುರಿತು ಪ್ರತಿಕ್ರಿಯಿಸಿರುವ ಸಚಿವ ರಮಾನಾಥ್ ರೈ, "ನಾನು ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿಲ್ಲ . ಆದರೆ, ಪಕ್ಷ ಗೃಹ ಖಾತೆಯ ಜವಾಬ್ದಾರಿ ನೀಡಿದರೆ ಬೇಡ ಅನ್ನುವಷ್ಟು ದೊಡ್ಡವನಲ್ಲ. ಪಕ್ಷ ಗೃಹ ಖಾತೆ ನೀಡಿದರೆ ಸಮರ್ಥವಾಗಿ ನಿಭಾಯಿಸುತ್ತೇನೆ," ಎಂದು ಸ್ಪಷ್ಟಪಡಿಸಿದ್ದಾರೆ .