ಮತ್ತೆ ಮಂಗಳೂರು ಜೈಲಿನಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ
ಮಂಗಳೂರು, ಸೆಪ್ಟೆಂಬರ್ 4: ಜಿಲ್ಲಾ ಸಬ್ ಜೈಲಿನಲ್ಲಿ ಎರಡು ಕೋಮಿನ ಗುಂಪುಗಳ ನಡುವೆ ಸಂಘರ್ಷ ನಡೆದಿದೆ. ವಿಚಾರಣಾಧೀನ ಕೈದಿಗಳ ನಡುವೆ ಹೊಡೆದಾಟ ನಡೆದಿದ್ದು ವರದಿಯಾಗಿದೆ.
ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಕೌಶಿಕ್ ಎಂಬಾತನಿಗೆ ಇನ್ನೊಂದು ಕೋಮಿಗೆ ಸೇರಿದ ತಂಡದವರು ಹಲ್ಲೆ ನಡೆಸಿದ್ದರು. ಆದರೆ ಅಚ್ಚರಿಯೆಂಬಂತೆ ಈ ಹೊಡೆದಾಟ ಜಿಲ್ಲಾಧಿಕಾರಿ ಎದುರೇ ನಡೆದಿದೆ ಎನ್ನಲಾಗಿದೆ.
ಪರಿಸ್ಥಿತಿ ಕ್ಷಣ ಮಾತ್ರದಲ್ಲಿ ವಿಕೋಪಕ್ಕೆ ತಿರುಗಲಾರಂಭಿಸಿದ್ದು, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಅಧಿಕಾರಿಗಳು ಹರಸಾಹಸ ಪಡೆಯಬೇಕಾಯಿತು ಎಂದು ತಿಳಿದುಬಂದಿದೆ. ಈ ಬಗ್ಗೆ ನಗರದ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲವು ದಿನಗಳಿಂದ ಜೈಲಿನಲ್ಲಿ ಪದೇ ಪದೇ ಹೊಡೆದಾಟಗಳು ನಡೆಯುತ್ತಲೇ ಇವೆ. ನಿಗದಿತ ಪ್ರಮಾಣಕ್ಕಿಂತ ಅಧಿಕ ಸಂಖ್ಯೆಯಲ್ಲಿ ಕೈದಿಗಳು ಇರುವುದು ಇದಕ್ಕೆ ಒಂದು ಕಾರಣವಾದರೆ, ಜೈಲಿನಲ್ಲಿ ಕೈದಿಗಳ ಬಗ್ಗೆ ತಳೆದ ಮೃದು ಧೋರಣೆಯೂ ಮತ್ತೊಂದು ಕಾರಣ ಎಂಬ ಮಾಹಿತಿ ಲಭ್ಯವಾಗಿದೆ.
ಈಗಾಗಲೇ ಈ ಜೈಲಿನಲ್ಲಿರುವ ಕೆಲವೊಂದು ಕೈದಿಗಳನ್ನು ರಾಜ್ಯದ ಬೇರೆ ಜೈಲಿಗೆ ವರ್ಗಾಹಿಸಲಾಗಿದ್ದರೂ ಜೈಲನ್ನು ಇನ್ನೂ ಸಂಪೂರ್ಣ ನಿಯಂತ್ರಣಕ್ಕೆ ತರಲು ಅಧಿಕಾರಿಗಳಿಗೆ ಸಾಧ್ಯವಾಗಿಲ್ಲ. ಇಷ್ಟು ಮಾತ್ರವಲ್ಲದೆ ಮಂಕಿಸ್ಟ್ಯಾಂಡ್ ವಿಜಯ್ ಬೆಂಬಲಿಗರು ಮತ್ತು ಇನ್ನೊಂದು ತಂಡಗಳ ಮಧ್ಯೆಯೂ ಪದೇ ಪದೇ ಹೊಡೆದಾಟ ನಡೆಯುತ್ತಿದೆ ಎಂಬ ಮಾಹಿತಿ ಕೂಡಾ ಆಂತರಿಕ ಮೂಲದಿಂದ ಕೇಳಿಬಂದಿದೆ.
ಒಂದು ದಿನದಲ್ಲಿ ಎರಡು ಬಾರಿ ಸಾರ್ವಜನಿಕರಿಗೆ ವಿಚಾರಣಾಧೀನ ಕೈದಿಗಳನ್ನು ಭೇಟಿಯಾಗುವ ಅವಕಾಶವಿದೆ. ಈ ಸಮಯದಲ್ಲಿ ಕೈದಿಗಳ ಓಡಾಟ ತಮ್ಮ ಸೆಲ್ ಗಿಂತ ಹೊರಗೆ ಇರುತ್ತದೆ. ಇದೇ ಸಂದರ್ಭದಲ್ಲಿ ಜೈಲಿನೊಳಗೆ ಕೈದಿಗಳ ನಡುವೆ ಮಾತಿನ ಚಕಮಕಿ, ಹಲ್ಲೆ, ಗುಂಪು ಘರ್ಷಣೆಗಳೆಲ್ಲಾ ನಡೆಯುತ್ತವೆ ಎಂದು ಮೂಲಗಳು ತಿಳಿಸಿವೆ.
ಪೊಲೀಸ್ ಅಧಿಕಾರಿಗಳ ಪ್ರಕಾರ ಸಬ್ ಜೈಲಿನಲ್ಲಿ ಮಹಿಳೆಯರ ವಿಭಾಗವೂ ಸೇರಿ ಒಟ್ಟು ನಾಲ್ಕು ವಿಭಾಗಗಳಿವೆ. ಈ ಎಲ್ಲಾ ನಾಲ್ಕು ವಿಭಾಗಗಳಲ್ಲಿ ಸುಮಾರು 208 ಮಂದಿ ವಿಚಾರಣಾಧೀನ ಕೈದಿಗಳನ್ನು ಇರಿಸಿಕೊಳ್ಳಲು ಅವಕಾಶವಿದೆ. ಆದರೆ ಅಚ್ಚರಿಯೆಂದರೆ ಮಂಗಳೂರು ಸಬ್ ಜೈಲಿನೊಳಗೆ ಇರುವುದು ಬರೋಬ್ಬರಿ 432 ಕೈದಿಗಳು. ನಿಗದಿತ ಸಂಖ್ಯೆಗಿಂತಲೂ ಇದು ದುಪ್ಪಟ್ಟು. ಈ ನಿಟ್ಟಿನಲ್ಲಿ ಇಷ್ಟೊಂದು ಕೈದಿಗಳ ಮೇಲೆ ನಿಗಾವಹಿಸಲು ಜೈಲ್ ಸಿಬ್ಬಂದಿಗೆ ಕಷ್ಟವಾಗುತ್ತಿದೆ ಎಂದು ಹೇಳಲಾಗಿದೆ.












Click it and Unblock the Notifications