Kadaba: ಮಂಟಪದಲ್ಲಿ ವಧುವಿನ ಅವಾಂತರದಿಂದ ಮುರಿದು ಬಿದ್ದ ಮದುವೆ, ಆಗಿದ್ದೇನು..?
ಮಂಗಳೂರು, ಏಪ್ರಿಲ್ 28: ಮದುವೆಗೆ ಸಕಲ ಸಿದ್ಧತೆಯಾಗಿ ವಧು-ವರರೂ ಸಿದ್ಧಗೊಂಡು, ಶಾಸ್ತ್ರಗಳು ಆರಂಭವಾಗಿ ಇನ್ನೇನು ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ವಧು ಅಥವಾ ವರನ ನಿರಾಕರಣೆಯಿಂದ ಮದುವೆ ಮುರಿದು ಬೀಳುವ ಅದೆಷ್ಟೋ ಘಟನೆಗಳು ಬೆಳಕಿಗೆ ಬಂದಿದೆ. ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕೊಣಾಲು ಗ್ರಾಮದಲ್ಲೂ ಕೂಡ ಇಂತಹದ್ದೇ ಘಟನೆ ನಡೆದಿದೆ. ಕೊನೆಯ ಕ್ಷಣ ವರನಿಂದ ತಾಳಿ ಕಟ್ಟಿಸಿಕೊಳ್ಳಲು ವಧು ನಿರಾಕರಸಿದ ಕಾರಣ ಮದುವೆ ಮುರಿದು ಬಿದ್ದಿದೆ.
ಘಟನೆ ನಡೆದು ಎರಡು ದಿನಗಳು ಕಳೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಕೊಣಾಲು ಗ್ರಾಮದ ಯುವಕನ ಮದುವೆಯು ಬಂಟ್ವಾಳ ತಾಲೂಕು ಕುಳ ಗ್ರಾಮದ ಯುವತಿಯೊಡನೆ ನಿಶ್ಚಯವಾಗಿತ್ತು. ಏಪ್ರಿಲ್ 26 ರಂದು ಬೆಳಗ್ಗೆ 11.35ರ ಮೂಹೂರ್ತದಲ್ಲಿ ಕಾಂಚನ ಪೆರ್ಲದ ಶ್ರೀ ಷಣ್ಮುಖ ದೇವಸ್ಥಾನದಲ್ಲಿ ಮದುವೆ ನಿಗದಿಯಾಗಿತ್ತು. ಅದರಂತೆ ವರ ಹಾಗೂ ವಧುವಿನ ಕಡೆಯವರು ಮದುವೆಯ ದಿಬ್ಬಣದಲ್ಲಿ ಬಂದಿದ್ದರು. ವಧು ಧಾರೆ ಸೀರೆ ಧರಿಸಿ ಪರಸ್ಪರ ಹೂಮಾಲೆ ಕೂಡ ಹಾಕಿದ್ದರು.

ಮದುವೆಯ ಇತರ ಶಾಸ್ತ್ರಗಳು ನಡೆದಿದ್ದು, ಇನ್ನೇನು ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ವಧು ಎಲ್ಲರಿಗೂ ಶಾಕ್ ನೀಡಿದ್ದಾಳೆ. ನನಗೆ ಈ ಮದುವೆ ಇಷ್ಟವಿಲ್ಲ. ತಾಳಿ ಕಟ್ಟಬೇಡಿ ಎಂದು ಹಠಕ್ಕೆ ಬಿದ್ದಿದ್ದಾಳೆ. ಯುವತಿ ವರ್ತನೆ ಕಂಡು ಎರಡೂ ಕಡೆಯವರು ಕಂಗಾಲಾಗಿ ವಧುವಿನ ಮನವೊಲಿಕೆಗೆ ಮುಂದಾದರು. ಆದರೆ ವಧು ಒಪ್ಪಲಿಲ್ಲ. ಬಳಿಕ ಎರಡೂ ಕುಟುಂಬಸ್ಥರು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ತೆರಳಿದರು.
ಪೊಲೀಸ್ ಠಾಣೆಯಲ್ಲಿ ನಡೆದ ಮಾತುಕತೆ ವೇಳೆ ವಧು ಮತ್ತೆ ಮದುವೆ ಆಗಲು ಒಪ್ಪಿದ್ದರು. ಆದರೆ ಆಗ ವರ ಈ ಕಥೆಗೆ ಟ್ವಿಸ್ಟ್ ಕೊಟ್ಟಿದ್ದು, ಆಕೆಯನ್ನು ಮದುವೆ ಆಗಲು ನಿರಾಕರಿಸಿದ್ದಾರೆ. ಇದರಿಂದಾಗಿ ಎರಡೂ ಕಡೆಯವರು ಪೊಲೀಸ್ ಠಾಣೆಯಲ್ಲಿ ಮುಚ್ಚಳಿಕೆ ಬರೆಯಿಸಿಕೊಂಡು ತಮ್ಮ ತಮ್ಮ ಮನೆಗಳಿಗೆ ತೆರಳಿದರು.
ಇತ್ತ ವರನ ಮನೆಯಲ್ಲಿ ಮಧ್ಯಾಹ್ನದ ಔತಣ ಕೂಟಕ್ಕೆ ಸುಮಾರು 500 ಜನರಿಗೆ ಮಾಂಸಾಹಾರಿ ಊಟ ತಯಾರಾಗಿತ್ತು. 1 ಸಾವಿರದಷ್ಟು ಐಸ್ಕ್ರೀಮ್ ವ್ಯವಸ್ಥೆಯನ್ನು ಮಾಡಲಾಗಿತ್ತು. ಮದುವೆ ಮುರಿದು ಬಿದ್ದ ಕಾರಣ ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಎಂದು ತಿಳಿದು ಬಂದಿದೆ.












Click it and Unblock the Notifications