ಭಗವತಿ ದೇವಸ್ಥಾನದಲ್ಲಿ ವಧು-ವರರ ರೀತಿ ಮಕ್ಕಳ ಸಿಂಗಾರ; ಸಸಿಹಿತ್ಲು ಕ್ಷೇತ್ರದ ವಿಶೇಷ ಹರಕೆ
ಮಂಗಳೂರು, ಮಾರ್ಚ್ 28: ಕರಾವಳಿ ಮಹಾಮಾನ್ವಿತ ಶಕ್ತಿ ಕೇಂದ್ರಗಳ ಆಗರ. ಕರಾವಳಿಯ ಪ್ರತೀ ಭಾಗದಲ್ಲಿ ಹಲವು ಶಕ್ತಿ ಕೇಂದ್ರಗಳಿವೆ. ತನ್ನ ಕಾರಣಿಕ ಶಕ್ತಿಯಿಂದಲೇ ಆ ಶಕ್ತಿ ಕೇಂದ್ರಗಳು ಅಸಂಖ್ಯಾತ ಭಕ್ತರನ್ನು ತನ್ನತ್ತ ಸೆಳೆಯುತ್ತವೆ. ಇಂತಹ ಹಲವು ಶಕ್ತಿ ಕೇಂದ್ರಗಳ ಪೈಕಿ ಉನ್ನತವಾಗಿರುವುದು ಮಂಗಳೂರಿನ ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನ.
ಅಸಂಖ್ಯಾತ ಭಕ್ತಗಣವನ್ನು ಹೊಂದಿರುವ ಭಗವತಿ ಕ್ಷೇತ್ರದ ವಾರ್ಷಿಕ ಜಾತ್ರಾ ಉತ್ಸವ ಬಹಳ ವಿಶೇಷತೆಯನ್ನು ಹೊಂದಿದೆ. ಇಡೀ ರಾತ್ರಿ ನಡೆಯುವ ದೇವಿಯ ಬಲಿ ಉತ್ಸವ, ಮದುಮಗ ಮತ್ತು ವಧುವಿನ ರೀತಿ ಅಲಂಕಾರವಾಗಿರುವ ಪುಟಾಣಿಗಳು ಈ ಜಾತ್ರೋತ್ಸವದ ವಿಶೇಷ.
ಸಸಿಹಿತ್ಲು, ಹಳೆಯಂಗಡಿ ಹಾಗೂ ಸುತ್ತಮುತ್ತಲ ಗ್ರಾಮಗಳ ಜನರಿಗೆ ಸಸಿಹಿತ್ಲು ಭಗವತಿ ದೇವಸ್ಥಾನ ಭಯ ಭಕ್ತಿಯ ಶ್ರದ್ಧಾ ಕೇಂದ್ರವಾಗಿದೆ. ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನದಲ್ಲಿ ಇಡೀ ರಾತ್ರಿ ನಡೆಯುವ ಬಲಿ ಉತ್ಸವ ಸರ್ವರ ಆಕರ್ಷಣೆಯ ಕೇಂದ್ರವಾಗಿದೆ. ಇಲ್ಲಿ ನಡೆಯುವ ವಾರ್ಷಿಕ ನಡಾವಳಿ ಉತ್ಸವ ನೋಡುವುದೇ ಭಕ್ತರ ಪಾಲಿಗೆ ಹಬ್ಬವಾಗಿದೆ.

ವಿಶೇಷವೆಂದರೆ ಬಪ್ಪನಾಡು ಜಾತ್ರೆಯಲ್ಲಿ ಇಡೀ ವಾರ ನಡೆಯುವ ದೇವರ ಬಲಿ ಇಲ್ಲಿ ಒಂದೇ ರಾತ್ರಿ ನಡೆಯುತ್ತದೆ. ಇಲ್ಲಿನ ನಡಾವಳಿ ಉತ್ಸವದಂದು ಮೂರ್ತಿ ದರ್ಶನ ಬಲಿ ನಡಾವಳಿಯ ದಿನ ಮಧ್ಯರಾತ್ರಿ 11 ಗಂಟೆಗೆ ಆರಂಭವಾಗಿ ಮರುದಿನ ಮುಂಜಾನೆ ಏಳು ಗಂಟೆ ತನಕ ನಡೆದಿದೆ. ಒಂದು ಕಾಲದಲ್ಲಿ ಮಲಯಾಳಿ ಬಿಲ್ಲವರಿಂದ ಪೂಜೆಗೊಳ್ಳುತ್ತಿದ್ದ ಭಗವತಿ ಬಳಿಕ ಸಕಲ ಸಮುದಾಯದ ಜನರಿಂದ ಪೂಜಿತಳಾಗುತ್ತಿದ್ದಾಳೆ.

ಕಂಚೀಲು ಸೇವೆ ಇಲ್ಲಿನ ಜನಪ್ರಿಯ ಹರಕೆಯಾಗಿದೆ. ಮಕ್ಕಳ ಜನನ, ಅನಾರೋಗ್ಯ ಸಂದರ್ಭ ಈ ಹರಕೆ ಹೇಳಿದಲ್ಲಿ ಎಲ್ಲವೂ ಸುಖಾಂತ್ಯವಾಗುವುದು ಎಂಬ ನಂಬಿಕೆ ಇದೆ. ಈ ವರ್ಷ ಕಂಚೀಲು ಬಲಿ ಹರಕೆಯಲ್ಲಿ 70ಕ್ಕೂ ಅಧಿಕ ಮಕ್ಕಳು ಭಾಗವಹಿಸಿದ್ದಾರೆ. ಕಷ್ಟಕಾಲದಲ್ಲಿ ಪೊರೆಯಲು ಹೇಳುವ ಮಡೆಸ್ನಾನ ಹರಕೆ ಸಲ್ಲಿಸಲು ಹೊರರಾಜ್ಯಗಳಲ್ಲಿ ನೆಲೆಸಿರುವವರೂ ಬರುತ್ತಾರೆ. ಸಸಿಹಿತ್ಲು, ಹಳೆಯಂಗಡಿ ಹಾಗೂ ಪರಿಸರದ ಗ್ರಾಮಗಳಲ್ಲಿ ಜಾತಿ ಭೇದ ಭಾವ ಇಲ್ಲದೆ ಎಲ್ಲರಿಂದಲೂ ಆರಾಧನೆಗೊಳ್ಳುತ್ತಾ ಭಗವತಿ ಎಲ್ಲರ ಇಷ್ಟಾರ್ಥ ಪೂರೈಸುವ ಶಕ್ತಿಯಾಗಿದ್ದಾಳೆ.
ಮಕ್ಕಳು ಆಗದಿದ್ದಲ್ಲಿ, ಮಕ್ಕಳಿಗೆ ಏನಾದರೂ ರೋಗ ರುಜಿನ ಬಂದಲ್ಲಿ ಈ ಹರಕೆ ಹೇಳುವ ಕ್ರಮ ಈ ಭಾಗದಲ್ಲಿದೆ. ಹರಕೆ ಹೇಳಿ ರೋಗ ರುಜಿನಗಳು ದೂರವಾಗುತ್ತದೆ. ಮಗು ಜನನವಾದರೆ ಮಗುವಿಗೆ ಏಳು ವರ್ಷದಿಂದ ಹನ್ನೆರಡು ವರ್ಷ ಪೂರ್ಣವಾಗುವ ಮೊದಲು ಈ ಹರಕೆಯನ್ನು ತೀರಿಸಬೇಕು.

ಈ ಹರಕೆ ತೀರುವ ದಿನ ಗಂಡು ಮಗುವನ್ನು ಮದುಮಗನ ಅಲಂಕಾರದಲ್ಲಿ, ಹೆಣ್ಣುಮಗು ಮದುಮಗಳ ವೇಷವನ್ನು ಧರಿಸಬೇಕು. ಹರಕೆ ಒಪ್ಪಿಸುವ ಸಂದರ್ಭದಲ್ಲಿ ಮಗುವಿನ ಕೈಗೆ ವೀಳ್ಯದೆಲೆ- ಅಡಿಕೆ ಹಿಂಗಾರವನ್ನು ನೀಡಲಾಗುತ್ತದೆ. ದೇವರ ಬಲಿ ಆರಂಭವಾಗುವ ಹೊತ್ತಿನಲ್ಲಿ ದೀಪ ಬೆಳಗಿಸಿ ದೀಪದ ಬಳಿ ಮಣೆಯಲ್ಲಿ ಬಾಳೆ ಎಳೆ ಹಾಕಿ ಅದರಲ್ಲಿ ಅಕ್ಕಿ, ತೆಂಗಿನಕಾಯಿ, ಹೂವು ಹಣ್ಣು ಇಟ್ಟು ಪೂಜೆ ಮಾಡಲಾಗುತ್ತದೆ.
ದೇವರ ಬಲಿ ನಂತರವಾಗಿ ಈ ಮಕ್ಕಳನ್ನು ಮಕ್ಕಳ ತಂದೆ ಅಥವಾ ತಾಯಿಯ ಅಣ್ಣ ಅಥವಾ ತಮ್ಮ, ಅಂದರೆ ಮಾವ ತನ್ನ ಹೆಗಲ ಮೇಲೆ ಮಕ್ಕಳನ್ನು ಕೂರಿಸಿ ತಾಯಿ ಅವರ ಮುಂದೆ ದೀಪವನ್ನು ಹಿಡಿದು ದೇವಸ್ಥಾನ ಸುತ್ತಿ ಬರಬೇಕು. ಹೀಗೆ ಸುತ್ತಿ ಬಂದ ಬಳಿಕ ದೇವಸ್ಥಾನದ ಕೊಡಮರದ ಬಳಿ ಮುಷ್ಠಿ ಹಣ ಹರಕೆ ರೂಪದಲ್ಲಿ ಹಾಕಬೇಕಾಗುತ್ತದೆ.
ಈ ದೇವಾಲಯ ಕ್ರಿಸ್ತಪೂರ್ವ ಕಾಲದ ಜೈನ ಅರಸರ ಕಾಲದ್ದು ಎಂದು ಐತಿಹ್ಯವಿದೆ. ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಹಾಗೂ ಸಸಿಹಿತ್ಲು ಭಗವತಿ ಅಕ್ಕ- ತಂಗಿ ಅಂತಾನೂ ಹೇಳಲಾಗುತ್ತದೆ. ಬಪ್ಪನಾಡು ಜಾತ್ರೆಯ ಧ್ವಜಾರೋಹಣ ಹಾಗೂ ರಥೋತ್ಸವ ಸಂದರ್ಭ ಭಗವತಿ ಅಲ್ಲಿಗೆ ದರ್ಶನದಲ್ಲಿ ತೆರಳುವುದು ಸಂಪ್ರದಾಯ.
ಬಪ್ಪನಾಡು ಶಾಂಭವಿ ನದಿ ತಟದಲ್ಲಿದ್ದರೆ, ಭಗವತಿ ಕ್ಷೇತ್ರ ಸಮೀಪದಲ್ಲಿಯೇ ನಂದಿನಿ ತಟದಲ್ಲಿದೆ. ಬಪ್ಪನಾಡು ದೇವಳದಲ್ಲಿ ಧ್ವಜಾರೋಹಣ ದಿನವೇ ಇಲ್ಲಿ ಗೊನೆ ಮುಹೂರ್ತ ನಡೆಸಲಾಗುವುದು. ಒಂದೇ ಮೂರ್ತಿಯಲ್ಲಿ ಇಬ್ಬರು ಭಗವತೀಯರನ್ನು ಇಲ್ಲಿಆರಾಧಿಸಲಾಗುತ್ತಿದೆ. ದಂಡರಾಜ, ಗಂಡಕರ್ಣ ಎಂಬ ದೈವಗಳನ್ನೂ ಇಲ್ಲಿ ಪೂಜಿಸಲಾಗುತ್ತಿದೆ. ಈ ದೇವಸ್ಥಾನ ಮರಳಿನಿಂದ ಆವೃತವಾಗಿರುವುದು ವಿಶೇಷವಾಗಿದೆ.












Click it and Unblock the Notifications