ಲೈಂಗಿಕ ದೌರ್ಜನ್ಯ ಪ್ರಕರಣ: ವಕೀಲ ರಾಜೇಶ್ ಭಟ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ!
ಮಂಗಳೂರು, ಆಗಸ್ಟ್ 18: ಇಂಟರ್ನ್ಶಿಪ್ ಗೆಂದು ಬಂದಿದ್ದ ಕಾನೂನು ಪದವಿ ವಿದ್ಯಾರ್ಥಿನಿಯೋರ್ವರಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಎದುರಿಸುತ್ತಿರುವ ಮಂಗಳೂರಿನ ವಕೀಲ ಕೆಎಸ್ಎನ್ ರಾಜೇಶ್ ಭಟ್ ವಿರುದ್ಧ ಪೊಲೀಸರು ಮಂಗಳೂರಿನ ಜೆಎಂಎಫ್ಸಿ 3ನೇ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದಾರೆ.
ಆ ಸಂದರ್ಭದಲ್ಲಿ ರಾಜೇಶ್ ಭಟ್ ಲೋಕಾಯುಕ್ತದಲ್ಲಿ ದಾಖಲಾಗುವ ಭ್ರಷ್ಟಾಚಾರ ಪ್ರಕರಣಗಳಲ್ಲಿ ವಿಶೇಷ ಸರಕಾರಿ ಅಭಿಯೋಜಕರಾಗಿ ಸೇವೆ ಸಲ್ಲಿಸುತ್ತಿದ್ದರು. ಲೋಕಾಯುಕ್ತ ಪ್ರಕರಣಗಳಲ್ಲಿ ಸಂತ್ರಸ್ತರ ಪರವಾಗಿ ವಾದಿಸಲು ಆರೋಪಿಯನ್ನು ಸರಕಾರದಿಂದ ನೇಮಕ ಮಾಡಲಾಗಿತ್ತು. ದೂರು ದಾಖಲಾಗುತ್ತಿದ್ದಂತೆ ಕಾಣೆಯಾಗಿದ್ದ ರಾಜೇಶ್ ಭಟ್ ಗೆ ಅನಂತ ಭಟ್ ಮತ್ತು ಅಚ್ಯುತ ಭಟ್ ಎಂಬುವವರು ನೆರವು, ಆಶ್ರಯ ನೀಡಿರುವ ಬಗ್ಗೆಯೂ ದೋಷಾರೋಪಣಾ ಪಟ್ಟಿಯಲ್ಲಿ ಉಲ್ಲೇಖ ಮಾಡಲಾಗಿದೆ.
ಶಿಕ್ಷಕನ ವಿರುದ್ಧ 14 ಲೈಂಗಿಕ ಕಿರುಕುಳ ಎಫ್ಐಆರ್, ರದ್ದುಗೊಳಿಸಲು ಹೈಕೋರ್ಟ್ ನಕಾರ
ಇಂಟರ್ನ್ಶಿಪ್ಗೆಂದು ಬಂದಿದ್ದ ವಿದ್ಯಾರ್ಥಿನಿಗೆ 2021ರ ಸೆಪ್ಟೆಂಬರ್ 25 ರಂದು ಮಧ್ಯಾಹ್ನ ವಕೀಲ ಕೆಎಸ್ಎನ್ ರಾಜೇಶ್ ತನ್ನ ಕಚೇರಿಯಲ್ಲಿಯೇ ಲೈಂಗಿಕ ಕಿರುಕುಳ ನೀಡಿದ್ದ. ಅತ್ಯಾಚಾರಕ್ಕೆ ಯತ್ನಿಸಿದಾಗ ಆಕೆ ತಪ್ಪಿಸಿಕೊಂಡು ಹೋಗಿದ್ದರು. ಈ ಸಂದರ್ಭದಲ್ಲಿ ಆರೋಪಿ ರಾಜೇಶ್ ಭಟ್ ಆಕೆಗೆ ಜೀವಬೆದರಿಕೆಯನ್ನೂ ಒಡ್ಡಿದ್ದ ಎಂದು ಆರೋಪಿಸಿ ವಿದ್ಯಾರ್ಥಿನಿ ದೂರು ಸಲ್ಲಿಸಿದ್ದರು.
ಅಲ್ಲದೇ ಈ ದೂರಿನ ವಿಚಾರವನ್ನು ಮುಕ್ತಾಯಗೊಳಿಸುವಂತೆ ಮಂಗಳೂರಿನ ವಕೀಲರ ಮೂಲಕ ಬಾರ್ ಅಸೋಸಿಯೇಷನ್ ಅಧ್ಯಕ್ಷರಿಗೆ ಒತ್ತಾಯದಲ್ಲಿ ಪತ್ರ ಬರೆಯಿಸಿಕೊಂಡು ಸಹಿ ಪಡೆದುಕೊಂಡಿದ್ದಲ್ಲದೆ, ಬಳಿಕ ಪ್ರಕರಣವನ್ನು ಹನಿಟ್ರ್ಯಾಪ್ ಎಂದು ಬಿಂಬಿಸುವ ಸಲುವಾಗಿ ವಿದ್ಯಾರ್ಥಿನಿಯ ಗೆಳತಿಗೂ ನಾವು ಹೇಳಿದಂತೆ ಹೇಳಿಕೆ ನೀಡಬೇಕೆಂದು ಬೆದರಿಕೆಯಾಕಿ ಒತ್ತಾಯಪೂರ್ವಕವಾಗಿ ಸಹಿ ಮಾಡಿಸಿಕೊಂಡಿದ್ದರು ಎಂಬ ಆರೋಪ ಕೂಡ ಕೇಳಿಬಂದಿತ್ತು. ಈ ಕುರಿತು ವಿದ್ಯಾರ್ಥಿನಿಯ ಗೆಳತಿ ಕೂಡ ಪ್ರತ್ಯೇಕ ದೂರು ದಾಖಲಿಸಿದ್ದರು.
ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ತನಿಖೆಯನ್ನು ಅಂದಿನ ಎಸಿಪಿ ರಂಜಿತ್ ಬಂಡಾರು ಅವರಿಗೆ ವಹಿಸಿದ್ದರು. ಆ ಬಳಿಕ ಎಸಿಪಿ ದಿನಕರ ಶೆಟ್ಟಿ ತನಿಖೆಯನ್ನು ಮುಂದುವರಿಸಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.
ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪಿ ನ್ಯಾಯವಾದಿ ರಾಜೇಶ್ ಭಟ್ ವಿದೇಶಕ್ಕೆ ಪರಾರಿಯಾಗದಂತೆ ಪೊಲೀಸರು ಬೇಹುಗಾರಿಕಾ ಸಂಸ್ಥೆಯ (ಐಬಿ) ಮೂಲಕ ದೇಶದ ಎಲ್ಲ ವಿಮಾನ ನಿಲ್ದಾಣಗಳಿಗೆ ಲುಕ್ ಔಟ್ ನೋಟಿಸ್ ಜಾರಿ ಮಾಡಿದ್ದರು. ಅಲ್ಲದೇ ಅವರ 12 ಬ್ಯಾಂಕ್ ಅಕೌಂಟ್ಗಳನ್ನು ತಡೆ ಹಿಡಿಯಲಾಗಿತ್ತು. ಜೊತೆಗೆ ಆರೋಪಿ ವಕೀಲರಿಗೆ ಸಹಕಾರ ನೀಡಿದ ಕಾರಣಕ್ಕೆ ವಕೀಲನ ಪತ್ನಿ ಸೇರಿದಂತೆ ಹಲವರನ್ನು ಬಂಧಿಸಲ್ಪಟ್ಟಿದ್ದರೂ ಆರೋಪಿ ಪತ್ತೆಯಾಗಿರಲಿಲ್ಲ. 2021 ಡಿಸೆಂಬರ್ 20ರಂದು ಆರೋಪಿ ನ್ಯಾಯಾಲಯದ ಮುಂದೆ ತಾನಾಗಿಯೇ ಶರಣಾಗಿದ್ದ.