ಕೇಂದ್ರ ಶಬರಿಮಲೆಯ ಸಂಪ್ರದಾಯ ಕಾಪಾಡಬೇಕಿತ್ತು: ಯುಟಿ ಖಾದರ್
Recommended Video

ಮಂಗಳೂರು, ಜನವರಿ 03: ಶಬರಿಮಲೆ ಹಿಂದೂ-ಮುಸ್ಲಿಂ ಸೌಹಾರ್ದತೆಯ ಕ್ಷೇತ್ರ. ಅಲ್ಲಿಯ ಧಾರ್ಮಿಕ ವಿಧಿವಿಧಾನಗಳಿಗೆ ಸಂಬಂಧಪಟ್ಟಂತೆ ಸಂಪ್ರದಾಯ ಉಳಿಸಿಕೊಳ್ಳಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯುಟಿ ಖಾದರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು ಶಬರಿಮಲೆಗೆ ಮಹಿಳೆಯರ ಪ್ರವೇಶ ವಿಚಾರವಾಗಿ ಪ್ರತಿಕ್ರಿಯಿಸಿದರು. ಕೇಂದ್ರಕ್ಕೆ ನಿಜವಾದ ಕಾಳಜಿ ಇದ್ದಲ್ಲಿ ಶಬರಿಮಲೆಯ ಸಂಪ್ರದಾಯ ಕಾಪಾಡಬೇಕಿತ್ತು. ಕೇಂದ್ರ ಸರಕಾರ ಅದಕ್ಕೊಂದು ತೀರ್ಮಾನ ತೆಗೆದುಕೊಳ್ಳಬೇಕು.
ಹಿರಿಯರ ಜೊತೆಗೆ ಗುರು ಸ್ವಾಮೀಜಿಗಳನ್ನು ಪ್ರಧಾನಿ ಮಾತುಕತೆಗೆ ಕರೆದು ನಿರ್ಣಯ ತೆಗೆದುಕೊಳ್ಳಬೇಕು ಎಂದು ಹೇಳಿದ ಖಾದರ್ ಶಬರಿಮಲೆಯ ಸಂಪ್ರದಾಯವನ್ನು ಸುಪ್ರೀಂ ಕೋರ್ಟ್ ಗೆ ಮನವರಿಕೆ ಮಾಡಬೇಕು. ಕಂಬಳ, ಜಲ್ಲಿಕಟ್ಟುವಿಗೆ ತಂದಂತೆ ಇದಕ್ಕೆ ಸುಗ್ರಿವಾಜ್ಞೆ ತರಬೇಕು. ಆದರೆ ಶಬರಿಮಲೆ ವಿಚಾರವಾಗಿ ಕೇಂದ್ರ ಸರಕಾರ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದರು.

ಶಬರಿಮಲೆ ವಿಚಾರವಾಗಿ ಪಾರ್ಲಿಮೆಂಟ್ ನಲ್ಲಿ ಬಿಜೆಪಿ ಸಂಸದರು ಮಾತನಾಡಲಿಲ್ಲ. ಶಬರಿಮಲೆ ವಿವಾದ ಬಗೆಹರಿಸುವುದು ಕೇಂದ್ರ ಸರಕಾರದ ಜವಾಬ್ದಾರಿ. ಆದರೆ ಅವರೇ ಕೇರಳದಲ್ಲಿ ಗಲಾಟೆ ಮಾಡಿಸುತ್ತಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು. ಸುಪ್ರೀಂ ಕೋರ್ಟ್ ಆದೇಶವನ್ನು ಕೇರಳ ರಾಜ್ಯ ಪಾಲಿಸಬೇಕಾದ ಅನಿವಾರ್ಯತೆ ಇದೆ. ಆದರೆ ಕೊನೆಯ ನಿರ್ಧಾರ ಕೇಂದ್ರದ್ದು ಎಂದು ಖಾದರ್ ಸ್ಪಷ್ಟಪಡಿಸಿದರು.












Click it and Unblock the Notifications