ಮಂಗಳೂರು: ಪ್ರಾಧ್ಯಾಪಕಿಯ ಮಾನಹಾನಿ ಮಾಡಿ ಜೈಲು ಸೇರಿದ ಪ್ರಾಧ್ಯಾಪಕರು!
ಮಂಗಳೂರು, ಏಪ್ರಿಲ್ 20: ಮಹಿಳಾ ಪ್ರಾಧ್ಯಾಪಕಿಯ ವಿರುದ್ಧ ಅತ್ಯಂತ ಕೀಳುಮಟ್ಟದ ಮಾನಹಾನಿಗೆ ಯತ್ನಿಸಿದ ಕಾಲೇಜಿನ ಇಬ್ಬರು ಪ್ರಾಧ್ಯಾಪಕರು ಮತ್ತು ಕಾಲೇಜಿನ ಸಂಚಾಲಕನನ್ನು ಮಂಗಳೂರಿನ ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಪ್ರತಿಷ್ಠಿತ ಕಾಲೇಜಿನ ಸಂಚಾಲಕ ಮತ್ತು ಇಬ್ಬರು ಪ್ರಾಧ್ಯಾಪಕರನ್ನು ಮಂಗಳೂರು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ವಿಚಾರಣೆ ವೇಳೆ ಆರೋಪಿಗಳ ಅತೀ ನೀಚ ಪ್ರವೃತ್ತಿ ಬಯಲಾಗಿದೆ.

ಮಹಿಳಾ ಪ್ರಾಧ್ಯಾಪಕಿ ನಾಗವೇಣಿ ಎಂಬುವವರನ್ನು ಟಾರ್ಗೆಟ್
ಬಂಟ್ವಾಳದ ಪ್ರತಿಷ್ಠಿತ ಕಾಲೇಜಿನ ಆಡಳಿತ ಮಂಡಳಿ ಮತ್ತು ಶಿಕ್ಷಕ ವೃಂದ ನಡುವೆ ಪ್ರಾಧ್ಯಾಪಕರ ನೇಮಕಾತಿ ಹಾಗೂ ಆಡಳಿತ ವಿಚಾರದ ನಡುವೆ ಉಂಟಾದ ವೈಮನಸ್ಸಿನ ಹಿನ್ನಲೆಯಲ್ಲಿ ಮಹಿಳಾ ಪ್ರಾಧ್ಯಾಪಕಿ ನಾಗವೇಣಿ ಎಂಬುವವರನ್ನು ಟಾರ್ಗೆಟ್ ಮಾಡಿದ ಅದೇ ಕಾಲೇಜಿನ ಇಬ್ಬರು ಪ್ರಾಧ್ಯಾಪಕರು ಮತ್ತು ಕಾಲೇಜಿನ ಸಂಚಾಲಕ ಮಹಿಳೆಯ ವಿರುದ್ಧ ಮಾನಹಾನಿಕಾರಕ ಪೋಸ್ಟ್ಗಳನ್ನು ರಚಿಸಿ ಹಂಚಿದ್ದಾರೆ.
ಅಲ್ಲದೇ ಕರಾವಳಿ ಸುತ್ತಮುತ್ತ ಪಟ್ಟಣಗಳ ಬಸ್ ಸ್ಟ್ಯಾಂಡ್ನ ಸಾರ್ವಜನಿಕ ಬಸ್ ನಿಲ್ದಾಣಗಳ ಶೌಚಾಲಯದಲ್ಲಿ ಮಹಿಳೆಯ ವಾಟ್ಸಪ್ ನಂಬರ್ ಮತ್ತು ಈಮೇಲ್ ವಿಳಾಸ ಹಾಕಿ ಕಡಿಮೆ ಬೆಲೆಗೆ ಲೈಂಗಿಕ ಕ್ರಿಯೆಗೆ ಕರೆ ಮಾಡಿ ಎಂದು ಪೋಸ್ಟರ್ ತಯಾರಿಸಿ ಅಂಟಿಸಿದ್ದಾರೆ.
ಮಹಿಳಾ ಪ್ರಾಧ್ಯಾಪಕಿಗೆ ನಿರಂತರ ಕರೆಗಳು ಬರಲಾರಂಭಿಸಿದ ಹಿನ್ನಲೆಯಲ್ಲಿ ಮಹಿಳಾ ಪ್ರಾಧ್ಯಾಪಕಿ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ರನ್ನು ಸಂಪರ್ಕಿಸಿ ದೂರು ನೀಡಿದ್ದಾರೆ.

ಸಿದ್ಧಕಟ್ಟೆ ನಿವಾಸಿ ಪ್ರದೀಪ್ ಪೂಜಾರಿ, ಹೆಬ್ರಿ ನಿವಾಸಿ ತಾರಾನಾಥ ಶೆಟ್ಟಿ ಬಂಧನ
ಮಹಿಳಾ ಪ್ರಾಧ್ಯಾಪಕಿ ನಾಗವೇಣಿ ನೀಡಿದ ದೂರಿನ ಹಿನ್ನಲೆಯಲ್ಲಿ ಕಾರ್ಯಪ್ರವೃತರಾದ ಮಂಗಳೂರು ಪೊಲೀಸರು, ಆರೋಪಿ ಪ್ರಾಧ್ಯಾಪಕರಾದ ಬಂಟ್ವಾಳ ಸಿದ್ಧಕಟ್ಟೆ ನಿವಾಸಿ ಪ್ರದೀಪ್ ಪೂಜಾರಿ, ಉಡುಪಿಯ ಹೆಬ್ರಿ ನಿವಾಸಿ ತಾರಾನಾಥ ಬಿ.ಎಸ್. ಶೆಟ್ಟಿ ಮತ್ತು ಕಾಲೇಜು ಸಂಚಾಲಕರಾದ ಬೆಳ್ತಂಗಡಿ ನಿವಾಸಿ ಪ್ರಕಾಶ್ ಶೆಣೈರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳು ಮಹಿಳಾ ಪ್ರಾಧ್ಯಾಪಕಿಯ ವಿರುದ್ಧ ಅವಹೇಳನಕಾರಿ ಪೋಸ್ಟರ್ ತಯಾರಿಸಿ ಅಂಚೆ ಮೂಲಕ ಸಹೋದ್ಯೋಗಿ ಪ್ರಾಧ್ಯಾಪಕರಿಗೆ, ಕಾಲೇಜಿನ ಮುಖ್ಯಸ್ಥರಿಗೆ, ಶಿಕ್ಷಣ ಇಲಾಖೆಯ ಉನ್ನತ ದರ್ಜೆಯ ಅಧಿಕಾರಿಗಳಿಗೆ ಪೋಸ್ಟ್ ಮಾಡಿದ್ದಾರೆ.
ಮಾನಹಾನಿಕರವಾದ ಬರಹವನ್ನು ಪ್ರಾರಂಭದಲ್ಲಿ ಪೋಸ್ಟ್ ಕಾರ್ಡ್, ಇನ್ಲ್ಯಾಂಡ್ ಲೆಟರ್ ಮೂಲಕ ಪ್ರಾಧ್ಯಾಪಕಿ ಫೋಟೋ ಬಳಸಿ ಪೋಸ್ಟ್ ಮಾಡಲಾಗಿದೆ. ಜೊತೆಗೆ ಪ್ರಾಧ್ಯಾಪಕಿಯ ಮೊಬೈಲ್ ನಂಬರ್ ಹಾಗೂ ಇ-ಮೇಲ್ ಐಡಿಯನ್ನು ನಮೂದಿಸಿ ಅಶ್ಲೀಲವಾಗಿ ಬರೆದು ಪೋಸ್ಟರ್ ಮಾಡಲಾಗಿದೆ.

ಬಸ್ ಸ್ಟಾಂಡ್ಗಳ ಸಾರ್ವಜನಿಕ ಶೌಚಾಲಯಗಳಲ್ಲಿ ಪೋಸ್ಟರ್
ಸುಳ್ಯ, ಸುಬ್ರಹ್ಮಣ್ಯ, ಸಂಪಾಜೆ, ಮಡಿಕೇರಿ, ಮೈಸೂರು, ಚಿಕ್ಕಮಗಳೂರು, ಮೂಡಿಗೆರೆ, ಬಾಳೆಹೊನ್ನೂರು, ಎನ್.ಆರ್. ಪುರ, ಶಿವಮೊಗ್ಗ ಮುಂತಾದ ಬಸ್ ಸ್ಟಾಂಡ್ಗಳ ಸಾರ್ವಜನಿಕ ಶೌಚಾಲಯಗಳಲ್ಲಿ ಪೋಸ್ಟರ್ ಹಾಕಲಾಗಿದೆ.
ಪ್ರದೀಪ್ ಪೂಜಾರಿ ಕಾಲೇಜಿನ ಎಕನಾಮಿಕ್ ಪ್ರಾಧ್ಯಾಪಕನಾಗಿದ್ದ. ಈತನಿಗೆ ಕಾಲೇಜಿನಲ್ಲಿ ಪ್ರಾಧ್ಯಾಪಕಿ ಜೊತೆ ಇದ್ದ ಮನಸ್ತಾಪದ ಹಿನ್ನೆಲೆಯಲ್ಲಿ ಕೃತ್ಯ ಮಾಡಿದ್ದಾನೆ ಅಂತಾ ಹೇಳಲಾಗಿದೆ. ಈತನ ವಿರುದ್ಧ 2019ರಲ್ಲಿ ಮಹಿಳಾ ಪ್ರಾಧ್ಯಾಪಕಿಯ ಮೇಲೆ ಮಾನಹಾನಿಯ ಪ್ರಕರಣವೂ ಈ ಹಿಂದೆ ದಾಖಲಾಗಿತ್ತು.
ಪ್ರಕರಣದ ಬಗ್ಗೆ ಮಾಹಿತಿ ನೀಡಿದ ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್, ಮಹಿಳಾ ಪ್ರಾಧ್ಯಾಪಕಿ ನೀಡಿದ ದೂರಿನ ಹಿನ್ನಲೆಯಲ್ಲಿ ಆರೋಪಿಗಳನ್ನು ಬಂಧಿಸಿದ್ದೇವೆ. ಆದರೆ ಪ್ರಾರಂಭದಲ್ಲಿ ಆರೋಪಿಗಳು ತಾವು ಈ ತಪ್ಪು ಮಾಡಿಲ್ಲ ಅಂತಾ ಹೇಳಿದ್ದಾರೆ. ಆದರೆ ತನಿಖೆ ವೇಳೆ ಆರೋಪಿಗಳು ಕೃತ್ಯ ಎಸಗಿರುವ ಬಗ್ಗೆ ಸಾಕ್ಷ್ಯ ಲಭ್ಯವಾಗಿದೆ. ಆರೋಪಿಗಳ ಮೊಬೈಲ್ನಲ್ಲಿ ಬೇಕಾದ ಸಾಕ್ಷ್ಯ ಲಭ್ಯವಾಗಿದೆ. ಸಾರ್ವಜನಿಕ ಶೌಚಾಲಯದಲ್ಲಿ ಪೋಸ್ಟರ್ ಅಂಟಿಸಿದ ದಿನದಂದೇ ಅದೇ ಸ್ಥಳದಲ್ಲಿ ಆರೋಪಿಗಳ ಮೊಬೈಲ್ ಲೋಕೇಶನ್ ಪತ್ತೆಯಾಗಿದೆ ಅಂತಾ ಹೇಳಿದ್ದಾರೆ.

ಪ್ರಾಧ್ಯಾಪಕರು, ಕಾಲೇಜಿನ ಸಂಚಾಲಕರಿಂದ ಮಾನಸಿಕ ಕಿರುಕುಳ
ಇನ್ನು ಘಟನೆ ಬಗ್ಗೆ ಪ್ರಾಧ್ಯಾಪಕಿ ನಾಗವೇಣಿ ಕೂಡಾ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಕಳೆದ ಐದು ವರ್ಷಗಳ ಹಿಂದೆ ಬಂಟ್ವಾಳದ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕಿಯಾಗಿ ಕರ್ತವ್ಯ ನಿರ್ವಹಿಸಿದ್ದೆ. ಈ ವೇಳೆ ಇಬ್ಬರು ಪ್ರಾಧ್ಯಾಪಕರು ಮತ್ತು ಕಾಲೇಜಿನ ಸಂಚಾಲಕ ಮಾನಸಿಕ ಕಿರುಕುಳ ನೀಡಿದ್ದಾರೆ. ಅವರ ಕಿರುಕುಳ ತಾಳಲಾರದೇ ಅಲ್ಲಿಂದ ಮಂಗಳೂರು ಕಾಲೇಜಿಗೆ ವರ್ಗಾವಣೆಗೊಂಡಿದ್ದೆ. ಆದರೆ ಅವರ ಕಿರುಕುಳ ಮತ್ತೆ ಆರಂಭವಾಗಿದೆ ಎಂದು ಆರೋಪಿಸಿದರು.
ಇನ್ಲ್ಯಾಂಡ್ ಪೋಸ್ಟರ್ ಮೂಲಕ ನನ್ನ ಮತ್ತು ಕುಟುಂಬದವರ ಮಾನಹಾನಿ ಮಾಡಿದ್ದಾರೆ. ಶೌಚಾಲಯದಲ್ಲಿ ಪೋಸ್ಟರ್ ಹಾಕಿ ಪ್ರತಿದಿನ ನನಗೆ 30-40 ಕರೆಗಳು ಬರಲಾರಂಭಿಸಿತು. ಇದರಿಂದ ಮನನೊಂದ ಕುಟುಂಬ ಆತ್ಮಹತ್ಯೆಯ ನಿರ್ಧಾರ ಮಾಡಿದೆವು. ಆದರೆ ಕೊನೆಯ ಆಶಾವಾದ ಎಂಬಂತೆ ಮಂಗಳೂರು ಕಮೀಷನರ್ ಎನ್. ಶಶಿಕುಮಾರ್ರನ್ನು ಭೇಟಿಯಾಗಿ ಆದ ಅನ್ಯಾಯದ ಬಗ್ಗೆ ಮಾಹಿತಿ ನೀಡಿದ್ದೇನೆ. ಕಮೀಷನರ್ ನ್ಯಾಯ ಒದಗಿಸಿದ್ದಾರೆ ಎಂದು ಪ್ರಾಧ್ಯಾಪಕಿ ನಾಗವೇಣಿ ಹೇಳಿದ್ದಾರೆ.












Click it and Unblock the Notifications