ಮಂಗಳೂರು; ಗೌರಿ ಹೊಳೆಗೆ ಬಿದ್ದ ಕಾರು, ಯುವಕರು ನಾಪತ್ತೆ
ಮಂಗಳೂರು, ಜುಲೈ 10; ಆ ಇಬ್ಬರು ಯುವಕರು ವೃತ್ತಿಯಲ್ಲಿ ಟಿಂಬರ್ ಕೆಲಸಗಾರರು. ಶನಿವಾರ ರಾತ್ರಿ ಜಡಿ ಮಳೆಯಲ್ಲಿಯೇ ಕೆಲಸ ಇದೆ ಎಂದು ಮನೆಯಿಂದ ಹೊರಟವರು ಬೆಳಗ್ಗಿನ ವೇಳೆಗೆ ನಿಗೂಢವಾಗಿ ನಾಪತ್ತೆಯಾಗಿದ್ದಾರೆ.
ತುಂಬಿ ಹರಿಯುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಯ ಕಾಣಿಯೂರಿನ ಗೌರಿ ಹೊಳೆಯ ಒಡಲು ನಿಗೂಢತೆಯ ಗೂಡಾಗಿದೆ. ಶನಿವಾರ ನಡುರಾತ್ರಿ ವೇಗವಾಗಿ ಬಂದ ಮಾರುತಿ-800 ಕಾರು, ಕಡಬ ತಾಲೂಕಿನ ಬೈತಡ್ಕದ ಮಸೀದಿ ಪಕ್ಕ ಹರಿಯುವ ಗೌರಿ ಹೊಳಗೆ ಚಾಲಕನ ನಿಯಂತ್ರಣ ತಪ್ಪಿ ಬಿದ್ದಿದೆ.
ನಾಪತ್ತೆಯಾದ ಯುವಕರು ಇದೇ ಕಾರಿನಲ್ಲಿ ಸಂಚಾರ ನಡೆಸುತ್ತಿದ್ದರು. ಕಾರು ಮಾತ್ರ ಭಾನುವಾರ ಪತ್ತೆಯಾಗಿದೆ. ಆದರೆ ಯುವಕರು ನಾಪತ್ತೆಯಾಗಿದ್ದಾರೆ. ಈ ಪ್ರಕರಣ ಈಗ ಕುತೂಹಲಕ್ಕೆ ಕಾರಣವಾಗಿದೆ. ಮಸೀದಿಯ ಸಿಸಿಟಿವಿಯ ದೃಶ್ಯಾವಳಿಗಳನ್ನು ಆಧರಿಸಿ ಹೊಳೆಯಲ್ಲಿ ಕಾರ್ಯಾಚರಣೆಗಿಳಿದ ಅಗ್ನಿಶಾಮಕದಳ ಸಿಬ್ಬಂದಿ ಮತ್ತು ಸ್ಥಳೀಯರು ಸತತ ಪರಿಶ್ರಮದ ಬಳಿಕ ಸಂಪೂರ್ಣ ನಜ್ಜುಗುಜ್ಜಾದ ಕಾರನ್ನು ಪತ್ತೆ ಹಚ್ಚಿದ್ದಾರೆ.
ಘಟನಾ ಸ್ಥಳದ 60 ಮೀಟರ್ ದೂರದಲ್ಲಿ ಪತ್ತೆಯಾಗಿದೆ. ಆದರೆ ಕಾರಿನಲಿದ್ದ ಯುವಕರು ನಾಪತ್ತೆಯಾಗಿದ್ದಾರೆ.
ಜಡಿಮಳೆಯಲ್ಲಿ ಸಾಗುತ್ತಿದ್ದ ಕಾರಿನಲ್ಲಿ ವಿಟ್ಲದ ಕುಂಡಡ್ಕ ನಿವಾಸಿ ಧನುಷ್ ಮತ್ತು ಆತನ ಸಂಬಂಧಿ ಧನುಷ್ ಇದ್ದರು. ಕಾರು ಬೈತಡ್ಕದ ಮಸೀದಿ ಬಳಿಕ ಹೊಳೆಯ ತಡೆಗೋಡೆ ದಾಟಿ ಹೊಳೆಗೆ ಬಿದ್ದಿದೆ.

ಘಟನೆ ಬೆಳಕಿಗೆ ಬಂದಿದ್ದು ಹೇಗೆ?
ಭಾನುವಾರ ಬೆಳಗ್ಗೆ ವೇಳೆಗೆ ಮಸೀದಿ ಸಿಸಿ ಕ್ಯಾಮೆರಾ ಪರಿಶೀಲನೆ ವೇಳೆ ಕಾರು ನದಿಗೆ ಬಿದ್ದಿರುವ ಘಟನೆಗೆ ಬಂದಿದೆ. ಸ್ಥಳೀಯರು ಮತ್ತು ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ಆರಂಭ ಮಾಡಿದ್ದಾರೆ. ವೇಗವಾಗಿ ಹರಿಯುವ ಹೊಳೆಯಲ್ಲಿ ಸತತ ಕಾರ್ಯಾಚರಣೆ ಬಳಿಕ ನಜ್ಜುಗುಜ್ಜಾದ ಸ್ಥಿತಿಯಲ್ಲಿ ಕಾರು ಪತ್ತೆಯಾಗಿದೆ. ಆದರೆ ಯುವಕರು ಮಾತ್ರ ನಿಗೂಢವಾಗಿ ನಾಪತ್ತೆಯಾಗಿದ್ದಾರೆ.

ಅಚ್ಚರಿ ಮೂಡಿಸಿದ ಫೋನ್ ಕರೆ
ಇಲ್ಲಿ ಅಚ್ಚರಿ ವಿಷಯ ಅಂದರೆ ಕಾರಿನಲ್ಲಿದ್ದ ಧನುಷ್ ರಾತ್ರಿ 12:01ಕ್ಕೆ ತನ್ನ ಮಾವನಿಗೆ ಕರೆ ಮಾಡಿ ಲಾರಿಯೊಂದು ನಮ್ಮ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಬೆಳಗ್ಗೆ ವಾಹನ ರಿಪೇರಿ ಮಾಡಿಸಿಕೊಂಡು ಬರುತ್ತೇವೆ ಎಂದು ಹೇಳಿದ್ದಾರೆ. ಆದರೆ ಆ ಬಳಿಕ ಕರೆ ಮಾಡಿದ ನಂಬರ್ ಸ್ವಿಚ್ ಆಫ್ ಬರುತ್ತಿದೆ. ಯುವಕರು ಎಲ್ಲಿ ಹೋಗಿದ್ದಾರೆ? ಎಂಬ ಸುಳಿವು ಸಹ ಯಾರಿಗೂ ಇಲ್ಲ. ಹೀಗಾಗಿ ಪೊಲೀಸರು ಕರೆ ಬಂದ ನಂಬರ್ ಬೆನ್ನತ್ತಿದ್ದಾರೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೇ?
ಸ್ಥಳೀಯ ಆಸ್ಪತ್ರೆಗಳಲ್ಲಿಯೂ ಯುವಕರು ಬಂದು ಚಿಕಿತ್ಸೆ ಪಡೆದಿದ್ದಾರೆಯೇ? ಎಂಬ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ ಪೊಲೀಸರು. ಅಪಘಾತಕ್ಕೂ ಮುನ್ನ ಸವಣೂರು ಚೆಕ್ ಪೋಸ್ಟ್ ನಲ್ಲಿ ಈ ಯುವಕರ ಕಾರನ್ನು ಪೊಲೀಸರು ತಡೆದಿದ್ದಾರೆ. ಒಂದೇ ಹೆಡ್ ಲೈಡ್ ಹಾಕಿಕೊಂಡು ಬಂದಿದಕ್ಕೆ ಪೊಲೀಸರು ತಡೆದು ನಿಲ್ಲಿಸಿ ಎಲ್ಲಿಂದ?, ಎಲ್ಲಿಗೆ ಹೋಗುತ್ತಿದ್ದೀರಿ? ಎಂದು ವಿಚಾರಿಸಿದ್ದಾರೆ.

ನಿಧಾನವಾಗಿ ಹೋಗಲು ಎಚ್ಚರಿಕೆ
ಚಾಲಕ ಧನುಷ್ ನಿದ್ದೆಯ ಮಂಪರಿನಲ್ಲಿ ಇದ್ದಿದನ್ನು ಕಂಡು ನಿಧಾನವಾಗಿ ಹೋಗಿ ಎಂದು ಎಚ್ಚರಿಸಿದ್ದಾರೆ. ಆದರೆ ಪೊಲೀಸ್ ಚೆಕ್ ಪೋಸ್ಟ್ ದಾಟಿ ಸುಮಾರು ಐದು ಕಿ.ಮೀ ದೂರದಲ್ಲಿ ಕಾರು ನದಿಗೆ ಬಿದ್ದಿದೆ.
ಕಾರು ಹೊಳೆಯ ತಡೆಗೋಡೆಗೆ ಡಿಕ್ಕಿ ಹೊಡೆಯುವ ಮುನ್ನ ಅಪಘಾತವೊಂದು ನಡೆದಿರುವ ಸಾಧ್ಯತೆ ಇದೆ. ಆ ಬಳಿಕ ಮುಂದಕ್ಕೆ ಚಲಿಸುತ್ತಿದ್ದಂತೆ ಹೊಳೆಗೆ ಬಿದ್ದು ಅವಘಡ ನಡೆದಿರುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಈ ಅಪಘಾತ ಪ್ರಕರಣ ಸಾಕಷ್ಟು ಸಂಶಯಕ್ಕೆ ಕಾರಣವಾಗಿದ್ದು ಪೊಲೀಸ್ ತನಿಖೆಯಿಂದ ಸತ್ಯಾಂಶ ಹೊರ ಬರಬೇಕಿದೆ.












Click it and Unblock the Notifications