ದಕ್ಷಿಣ ಕನ್ನಡದಲ್ಲಿ ಕಳೆಗಟ್ಟಿದ ಮತದಾನ ಸಂಭ್ರಮ, ಗಣ್ಯರಿಂದ ಮತ ಚಲಾವಣೆ
ಮಂಗಳೂರು ಮೇ 12: ಕರಾವಳಿ ಜಿಲ್ಲೆಗಳಲ್ಲಿ ವಿಧಾನಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಬಿರುಸಿನಿಂದ ಸಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1858 ಮತಗಟ್ಟೆಗಳಲ್ಲಿಯೂ ಬಿಗಿ ಭದ್ರತೆಯಲ್ಲಿ ಶಾಂತಿಯುತ ಮತದಾನ ನಡೆಯುತ್ತಿದೆ.
ಪುತ್ತೂರಿನ ಹಾರಾಡಿ ಶಾಲೆಯಲ್ಲಿ ಕುಟುಂಬ ಸಮೇತರಾಗಿ ಆಗಮಿಸಿ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು.
In Pics: ಮತದಾನ ಪರ್ವದಲ್ಲಿ ಮತದಾರ ಮಹಾಪ್ರಭು
ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಸಚಿವ ಯು.ಟಿ. ಖಾದರ್ ಮಂಗಳೂರು ಹೊರವಲಯದ ರಂತಡ್ಕ ಸರಕಾರಿ ಶಾಲೆಯಲ್ಲಿರುವ ಮತಗಟ್ಟೆಯಲ್ಲಿ ಮತದಾನ ಮಾಡಿದರು. ತಮ್ಮ ಬೆಂಬಲಿಗರೊಂದಿಗೆ ಆಗಮಿಸಿದ ಖಾದರ್ ಜನಸಾಮಾನ್ಯರ ನಡುವೆ ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸಿದರು.

ಪೂಜಾರಿ-ಜೈನ್ ಮತಚಲಾವಣೆ
ಮುಲ್ಕಿ - ಮೂಡಬಿದ್ರೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಶಾಸಕ ಅಭಯಚಂದ್ರ ಜೈನ್ ಮೂಡಬಿದ್ರೆಯ ಮೂಡಬಿದ್ರೆ ಡಿಜೆ ಶಾಲೆಯಲ್ಲಿ ಮತದಾನ ಮಾಡಿದರು. ಮೂಡಬಿದ್ರೆ ಜೈನ ಮಠ ಭಟ್ಟಾರಕ ಚಾರುಕೀರ್ತಿ ಸ್ವಾಮೀಜಿ ಕೂಡ ಡಿಜೆ ಶಾಲೆಯ ಕೇಂದ್ರದಲ್ಲಿ ಮತ ಚಲಾಯಿಸಿದರು.
ಹಿರಿಯ ಕಾಂಗ್ರೆಸ್ ನಾಯಕ ಬಿ. ಜನಾರ್ದನ ಪೂಜಾರಿ ಬಂಟ್ವಾಳದಲ್ಲಿ ಮತದಾನ ಮಾಡಿದರು. ಅನಾರೋಗ್ಯದ ನಡುವೆಯೂ ಮತಕೇಂದ್ರಕ್ಕೆ ಆಗಮಿಸಿದ ಜನಾರ್ದನ ಪೂಜಾರಿ ತಮ್ಮ ಹಕ್ಕು ಚಲಾಯಿಸಿದರು.

ಮಂಗಳೂರು ಅಭ್ಯರ್ಥಿಗಳಿಂದ ಮತದಾನ
ಮಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೇದವ್ಯಾಸ್ ಕಾಮತ್ ಮಣ್ಣಗುಡ್ಡ ಸರಕಾರಿ ಶಾಲೆಯಲ್ಲಿ ಮತ ಚಲಾಯಿಸಿದರು. ಮಂಗಳೂರು ದಕ್ಷಿಣ ಕ್ಷೆತ್ರದ ಕಾಂಗ್ರೆಸ್ ಆಭ್ಯರ್ಥಿ ಶಾಸಕ ಜೆಆರ್ ಲೋಬೋ ಕೂಡ ತಮ್ಮ ಮತ ಚಲಾಯಿಸಿದರು. ನಗರದ ಬೆಂದೂರ್ ನಲ್ಲಿರುವ ಸಂತ ಸೆಬಾಸ್ಟಿನ್ ಶಾಲೆಯಲ್ಲಿ ಅವರು ಹಕ್ಕು ಚಲಾಯಿಸಿದರು.
ಬಂಟ್ವಾಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಚಿವ ಬಿ. ರಮಾನಾಥ್ ರೈ ತಡಂಬಿಲದ ಸೇಕ್ರೆಡ್ ಹಾರ್ಟ್ ಅನುದಾನಿತ ಶಾಲೆಯ ಮತ ಕೇಂದ್ರಕ್ಕೆ ತೆರಳಿ ಮತದಾನ ಮಾಡಿದರು. ಮತದಾನಕ್ಕೂ ಮುನ್ನ ಬಂಟ್ವಾಳ ವೆಂಕಟರಮಣ ದೇವಸ್ಥಾನಕ್ಕೆ ತರಳಿದ ರಮಾನಾಥ್ ರೈ ವಿಶೇಷ ಪೂಜೆ ಸಲ್ಲಿಸಿದರು.

ರಮಾನಾಥ ರೈ ಪಾಲಿಗೆ ಮಹತ್ವದ ಚುನಾವಣೆ
ಬಂಟ್ವಾಳ ಕ್ಷೇತ್ರದಲ್ಲಿ 6 ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಸಚಿವ ರೈ ಪಾಲಿಗೆ ಈ ಬಾರಿ ಚುನಾವಣೆ ಅತ್ಯಂತ ಮಹತ್ವದ್ದಾಗಿದೆ ಬಂಟ್ವಾಳ ಕ್ಷೇತ್ರ ಕಾಂಗ್ರೆಸ್ ಹಾಗೂ ಬಿಜೆಪಿ ಪಾಲಿಗೆ ಪ್ರತಿಷ್ಠೆಯ ಕಣವಾಗಿದ್ದು ರಮಾನಾಥ ರೈ ವಿರುದ್ಧ ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ ಸ್ಪರ್ಧಿಸಿದ್ದಾರೆ.
ಮುಲ್ಕಿ - ಮೂಡಬಿದ್ರೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಉಮಾನಾಥ್ ಕೊಟ್ಯಾನ್ ಪುತ್ತಿಗೆ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಹಂಡೇಲ್ ನ ಮತಕೇಂದ್ರದಲ್ಲಿ ಮತದಾನ ಮಾಡಿದರು.
ಉಪ್ಪಿನಂಗಡಿಯ ಹೀರೆಬಂಡಾಡಿ ಶಾಲೆಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಂಜೀವ ಮಠಂದೂರು ಮತ ಚಲಾವಣೆ ಮಾಡಿದರು.

ಬೆಳ್ತಂಗಡಿಯಲ್ಲಿ ಹಕ್ಕು ಚಲಾಯಿಸಿದ ಅಭ್ಯರ್ಥಿಗಳು
ಮಂಗಳೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಂತೋಷ್ ಕುಮಾರ್ ಬೊಳ್ಯಾರ್ ಪಾನೆಲ ಹಿರಿಯ ಪ್ರಾಥಮಿಕ ಶಾಲೆಗೆ ತಮ್ಮ ಬೆಂಬಲಿಗರೊಂದಿಗೆ ಆಗಮಿಸಿ ಮತದಾನ ಮಾಡಿದರು.
ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜಾ ಕುಟುಂಬ ಸಮಾತರಾಗಿ ಬಂದು ಮತ ಚಲಾಯಿಸಿದರು. ಬೆಳ್ತಂಗಡಿಯ ಗರ್ಡಾಡಿ ಶಾಲೆಯಲ್ಲಿ ಹರೀಶ್ ಪೂಂಜಾ ತಮ್ಮ ತಂದೆ, ತಾಯಿ ಮತ್ತು ಹೆಂಡತಿ ಜೊತೆ ಬಂದು ಸರತಿ ಸಾಲಿನಲ್ಲಿ ನಿಂತು ಮತ ಹಾಕಿದರು.
ಬೆಳ್ತಂಗಡಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಆಗಮಿಸಿದ ಬೆಳ್ತಂಗಡಿ ಶಾಸಕ ವಸಂತ ಬಂಗೇರಾ ತಮ್ಮ ಹಕ್ಕು ಚಲಾಯಿಸಿದರು.

ವೀರೇಂದ್ರ ಹೆಗ್ಗಡೆ ಮತ ಚಲಾವಣೆ
ಶ್ರೀ ಕ್ಷೇತ್ರ ಧರ್ಮಸ್ಥಳ ದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ದಂಪತಿ ಧರ್ಮಸ್ಥಳದ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಗೆ ಮುಂಜಾನೆ ಆಗಮಿಸಿ ಮತ ಚಲಾವಣೆ ಮಾಡಿದರು.
ಸುಳ್ಯ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್ ಅಂಗಾರ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಡಾ. ರಘು ಸುಳ್ಯ ಸರಕಾರಿ ಹಿರಿಯ ಪ್ರರ್ಥಮಿಕ ಶಾಲೆಯಲ್ಲಿ ಮತ ಚಲಾಯಿಸಿದರು.
ಮಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಭರತ್ ಶೆಟ್ಟಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಮೊಯ್ದೀನ್ ಬಾವಾ ತಮ್ಮ ಬೆಂಬಲಿಗರೊಂದಿಗೆ ಆಗಮಿಸಿ ಮತ ಚಲಾಯಿಸಿದರು.












Click it and Unblock the Notifications