ಉದ್ಯೋಗ ನೀಡುವ ಉದ್ಯಮಿಗಳಾಗಿ: ಕಾರ್ಣಿಕ್
ಮಂಗಳೂರು, ಜೂ.20: ಜಗತ್ತಿನಲ್ಲಿ ಇಂದು ಎಲ್ಲೆಡೆ ಗುಣಮಟ್ಟ ಮತ್ತು ಕೌಶಲದಿಂದ ಕೂಡಿದ ಮಾನವ ಸಂಪನ್ಮೂಲಕ್ಕೆ ಹೆಚ್ಚಿನ ಬೇಡಿಕೆ ಇದೆ. ಯುವ ರಾಷ್ಟ್ರವೆಂಬ ಖ್ಯಾತಿ ಇರುವ ಭಾರತದಲ್ಲಿ ಇಂತಹ ಜಾಗತಿಕ ಸವಾಲನ್ನು ಎದುರಿಸುವ ಯುವ ಸಮೂಹದ ಅಗತ್ಯವಿದೆ ಎಂದು ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹೇಳಿದ್ದಾರೆ.
ಅವರು ಗುರುವಾರ ಸಂಜೆ ಇಲ್ಲಿನ ಟಿ.ವಿ.ರಮಣ ಪೈ ಕನ್ವೆನ್ಷನ್ ಸೆಂಟರ್ನಲ್ಲಿ ನಡೆದ ಬೆಂಜನಪದವು ಕೆನರಾ ಎಂಜಿನಿಯರಿಂಗ್ ಕಾಲೇಜಿನ ಹತ್ತನೇ ವರ್ಷದ ಪದವಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘಟನೆಯನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಜಾಪ್ರಭುತ್ವದಂತಹ ಶ್ರೇಷ್ಠ ಆಡಳಿತ ವ್ಯವಸ್ಥೆ ನಮ್ಮಲ್ಲಿದ್ದರೂ ನಮ್ಮ ಸಾಧನೆ ಮಾತ್ರ ನಿರೀಕ್ಷಿತ ಮಟ್ಟಕ್ಕೆ ಇನ್ನೂ ಮುಟ್ಟಿಲ್ಲ, ಉದ್ಯೋಗಾಕಾಂಕ್ಷಿಗಳೇ ಹೆಚ್ಚಿರುವ ನಮ್ಮ ನಡುವೆ ಶಿಕ್ಷಿತ ಯುವ ಜನತೆ ಉದ್ಯೋಗಿಗಳಾಗುವುದಕ್ಕಿಂತ ಉದ್ಯೋಗ ನೀಡುವ ಉದ್ಯಮಿಗಳಾಗುವತ್ತ ಹೆಚ್ಚಿನ ಗಮನ ನೀಡಬೇಕಾಗಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ಕೆನರಾ ಹೈಸ್ಕೂಲ್ ಅಸೋಸಿಯೇಶನ್ ಅಧ್ಯಕ್ಷ ಎಸ್.ಎಸ್. ಕಾಮತ್ ಅಧ್ಯಕ್ಷತೆವಹಿಸಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಚನವನ್ನು ಬೋಧಿಸಿದರು. ಕಾಲೇಜಿನ ವಿವಿಧ ಅಂತಿಮ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಪ್ರದಾನ ಮಾಡಲಾಯಿತು. ಕಾಲೇಜಿನ ಅತ್ಯುತ್ತಮ ವಿದ್ಯಾರ್ಥಿ ಗೌರವಕ್ಕೆ ಪಾತ್ರರಾದ ಶ್ರವಣ್ ಶೆಣೈ ಅವರಿಗೆ ಚಿನ್ನದ ಪದಕ ಸಹಿತ ಗೌರವಿಸಲಾಯಿತು.

ವಿದ್ಯಾರ್ಥಿಗಳಲ್ಲಿ ಉದ್ಯಮಶೀಲತೆ ಬೆಳೆಯಬೇಕು
"ವಿಶ್ವವಿದ್ಯಾಲಯಗಳಿಂದ ಹೊರ ಬರುತ್ತಿರುವ ಶೇ 70 ಮಂದಿ ಪದವೀಧರರಿಗೆ ಸೂಕ್ತ ಉದ್ಯೋಗ ಸಿಕ್ಕಿಲ್ಲ ಎನ್ನುವ ಸಮಸ್ಯೆ ಇದೆ. ಹಾಗಾಗಿ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳನ್ನು ಡಿಗ್ರಿಗಳಿಗಾಗಿ ಸಿದ್ಧಪಡಿಸುವ ಬದಲು ಉದ್ಯಮಶೀಲತೆಯನ್ನು ಅವರಲ್ಲಿ ಬೆಳೆಸುವಂತಾಗಬೇಕು"
ಕ್ಯಾಪ್ಟನ್ ಗಣೇಶ್ ಕಾರ್ಣಿಕ್

ನಮ್ಮ ಕನಸುಗಳು ಒಂದಾಗಬೇಕು
"ನನ್ನ ದೇಶ ಮೊದಲು ಎನ್ನುವ ಸಾಮಾಜಿಕ ಪ್ರಜ್ಞೆ ನಮ್ಮೆಲ್ಲರಲ್ಲಿ ಜಾಗೃತವಾಗಿದ್ದಾಗ ಮಾತ್ರ ದೇಶ ನಿಜವಾದ ಪ್ರಗತಿ ಸಾಧಿಸುತ್ತದೆ. ಇದಕ್ಕಾಗಿ ನಮ್ಮೆಲ್ಲರ ಕನಸುಗಳು ಒಂದಾಗಬೇಕು. ಮೌಲ್ಯಗಳೇ ಮುಖ್ಯವಾಗಬೇಕು. ನಾನು ಉತ್ತಮನಾಗಬೇಕು ಎನ್ನುವ ನಿರಂತರ ತುಡಿತ ನಮ್ಮಲ್ಲಿರಬೇಕು"
ಕ್ಯಾಪ್ಟನ್.ಗಣೇಶ್ ಕಾರ್ಣಿಕ್

ನೈತಿಕ ಮೌಲ್ಯಗಳನ್ನು ಬೆಳೆಸಿಕೊಳ್ಳಿ
"ಅವಕಾಶಗಳ ಸಾಗರವೇ ಇಂದಿನ ಯುವ ಸಮೂಹದ ಮುಂದಿದೆ. ಶಿಸ್ತು, ಸೃಜನಶೀಲತೆಯ ಜತೆಗೆ ನೈತಿಕ ಮೌಲ್ಯಗಳನ್ನೂ ಉಳಿಸಿಕೊಂಡು ಯಶಸ್ಸು ದಾಖಲಿಸುವತ್ತ ಯುವ ಶಿಕ್ಷಿತರು ಗಮನ ಹರಿಸಬೇಕು"
ಡಾ.ನಿರಂಜನ ಎನ್.ಚಿಪ್ಳೂನ್ಕರ್,ನಿಟ್ಟೆ ಎನ್.ಎಂ.ಎ.ಎಂ.ಐ.ಟಿ ಪ್ರಾಂಶುಪಾಲ

ಪದವಿ ಪ್ರಮಾಣ ಪತ್ರ ಪ್ರದಾನ
ಕಾಲೇಜಿನ ವಿವಿಧ ಅಂತಿಮ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಪ್ರದಾನ ಮಾಡಲಾಯಿತು.











Click it and Unblock the Notifications