ವಿ.ಜಿ.ಸಿದ್ಧಾರ್ಥ ಸೇತುವೆ ಮೇಲಿನ ಪಯಣ; 24 ಗಂಟೆಗಳು
ಮಂಗಳೂರು, ಜುಲೈ 30 : ಮಂಗಳವಾರ ಮಂಗಳೂರಿನಿಂದ ಮುಂಬೈ ಷೇರು ಮಾರುಕಟ್ಟೆ ತನಕ ಕೇಳಿ ಬರುತ್ತಿರುವ ಒಂದೇ ಹೆಸರು ವಿ. ಜಿ. ಸಿದ್ಧಾರ್ಥ. ಅವರು ವಿ. ಜಿ. ಸಿದ್ಧಾರ್ಥ, ಕೆಫೆ ಕಾಫಿ ಡೇ ಮಾಲೀಕರು, ಕರ್ನಾಟಕದ ಶ್ರೀಮಂತ ಉದ್ಯಮಿ, ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವ ಎಸ್. ಎಂ. ಕೃಷ್ಣ ಅಳಿಯ.
ಮಲೆನಾಡಿನ ಕಾಫಿ ಘಮವನ್ನು ದೇಶ ವಿದೇಶದಲ್ಲಿ ಪಸರಿಸಿದವರು. ಕೆಫೆ ಕಾಫಿ ಡೇ ಎಂಬ ಸಾಮಾಜ್ಯ ಕಟ್ಟಿದವರು ಶ್ರೀಮಂತ ಉದ್ಯಮಿಯಾದರೂ ರಾಜಕೀಯ, ಮಾಧ್ಯಮಗಳಿಂದ ಸದಾ ದೂರವಿದ್ದರು. ಆದರೆ, ನಿಗೂಢವಾಗಿ ನಾಪತ್ತೆಯಾಗುವ ಮೂಲಕ ಮಂಗಳವಾರ ಮಾಧ್ಯಮಗಳ ಸುದ್ದಿ ಕೇಂದ್ರವಾಗಿದ್ದಾರೆ.
ಮಂಗಳೂರು ಹೊರವಲಯದ ನೇತ್ರಾವತಿ ನದಿ ಸೇತುವೆ ಮೇಲಿನಿಂದ ವಿ. ಜಿ. ಸಿದ್ಧಾರ್ಥ ನಾಪತ್ತೆಯಾಗಿದ್ದಾರೆ. 24 ಗಂಟೆಗಳು ಕಳೆದರೂ ಅವರ ಬಗ್ಗೆ ಯಾವುದೇ ಸುಳಿವು ಪತ್ತೆಯಾಗಿಲ್ಲ. ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಶಂಕೆಯೂ ಇದ್ದು, ಹುಡುಕಾಟ ತೀವ್ರವಾಗಿ ಸಾಗಿದೆ.

ವಿ. ಜಿ. ಸಿದ್ಧಾರ್ಥ ನಾಪತ್ತೆ ಪ್ರಕರಣದ ತನಿಖೆ ನಡೆಸಲು 4 ವಿಶೇಷ ತಂಡಗಳನ್ನು ರಚನೆ ಮಾಡಲಾಗಿದೆ.
ಅವರ ಮೊಬೈಲ್ನ ಕೊನೆಯ ಲೊಕೇಷನ್ ಸಹ ನೇತ್ರಾವತಿ ಸೇತುವೆ ಮಧ್ಯದಲ್ಲಿ ತೋರಿಸುತ್ತಿದೆ. ನೇತ್ರಾವತಿ ನದಿ ಸಮುದ್ರವನ್ನು ಸೇರುವ ಜಾಗದಲ್ಲಿ ಎನ್ಡಿಆರ್ಎಫ್, ಅಗ್ನಿಶಾಮಕ ದಳ, ಭಾರತೀಯ ತಟರಕ್ಷಣಾ ಪಡೆ ಶೋಧ ಕಾರ್ಯಾಚರಣೆ ನಡೆಸುತ್ತಿವೆ. ಮಾಜಿ ಸಚಿವ ಯು. ಟಿ. ಖಾದರ್ ಕಾರ್ಯಾಚರಣೆಯ ಕ್ಷಣ-ಕ್ಷಣದ ಮಾಹಿತಿ ಪಡೆಯುತ್ತಿದ್ದಾರೆ.
ಜುಲೈ 29ರ ಸೋಮವಾರ ಬೆಂಗಳೂರಿನಿಂದ ಕಪ್ಪು ಬಣ್ಣದ ಇನ್ನೋವಾ ಕ್ರಿಸ್ಟಾ ಕಾರಿನಲ್ಲಿ ವಿ. ಜಿ. ಸಿದ್ಧಾರ್ಥ ಸಕಲೇಶಪುರಕ್ಕೆ ಹೊರಟಿದ್ದರು. ಕಾರನ್ನು ಚಾಲಕ ಬಸವರಾಜ್ ಓಡಿಸುತ್ತಿದ್ದರು. ಸಕೇಶಪುರದಿಂದ ಅವರು ಮಂಗಳೂರಿಗೆ ತೆರಳಿದ್ದರು.
ಸೋಮವಾರ ಸಂಜೆ 8 ಗಂಟೆ ಬಳಿಕ ವಿ. ಜಿ. ಸಿದ್ಧಾರ್ಥ ನಿಗೂಢವಾಗಿ ನಾಪತ್ತೆಯಾದರು. ಕಾರು ಚಾಲಕ ನೀಡಿದ ದೂರಿನ ಅನ್ವಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಅವರಿಗಾಗಿ ಹುಡುಕಾಟ ನಡೆಸುತ್ತಿವೆ.

ವಿವಿಧ ಇಲಾಖೆಗಳ ಸುಮಾರು 200 ಅಧಿಕಾರಿಗಳು ಹಾಗೂ ಸಿಬ್ಬಂದಿ ಹುಡುಕಾಟದಲ್ಲಿ ಭಾಗಿಯಾಗಿದ್ದಾರೆ. ಆದರೆ, 24 ಗಂಟೆಗಳು ಕಳೆದರೂ ವಿ. ಜಿ. ಸಿದ್ಧಾರ್ಥ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಬೆಂಗಳೂರಿನ ಸದಾಶಿವ ನಗರದ ನಿವಾಸದಲ್ಲಿನ ಎಸ್. ಎಂ. ಕೃಷ್ಣ ಮನೆಯಲ್ಲಿ ಆತಂಕದ ಕಾರ್ಮೋಡ ಆವರಿಸಿದೆ.
ವಿ. ಜಿ. ಸಿದ್ಧಾರ್ಥ ನಿಗೂಢ ನಾಪತ್ತೆಗೆ ಸಂಬಂಧಿಸಿದಂತೆ ಮೀನುಗಾರನೊಬ್ಬ ನೀಡಿದ ಹೇಳಿಕೆ ಆತಂಕಕ್ಕೆ ಕಾರಣವಾಗಿತ್ತು. ಸೈಮನ್ ಡಿಸೋಜಾ ಎಂಬವರು, "ರಾತ್ರಿ ವ್ಯಕ್ತಿ ಯೊಬ್ಬರು ಸೇತುವೆ ಯಿಂದ ಜಿಗಿದಿದ್ದನ್ನು ತಾನು ನೋಡಿರುವುದಾಗಿ" ಮಾಹಿತಿ ನೀಡಿದ್ದರು.

ಸೇತುವೆಯ 6 ನಂಬರ್ ಪಿಲ್ಲರ್ ಹತ್ತಿರ ಇವರು ಮೀನು ಹಿಡಿಯುತ್ತಿದ್ದರು. ಮೇಲಿನಿಂದ ಬೀಳುವುದು ಇವರಿಗೆ ಕಾಣಿಸಿದ್ದು 8 ಕಂಬದ ಹತ್ತಿರ. ಸೇತುವೆ ಮೇಲಿನಿಂದ ಯಾರೋ ನದಿಗೆ ಹಾರಿದ್ದಾರೆ ಎಂದು ಸೈಮನ್ ಹೇಳಿದ್ದರು .ಈ ಹಿನ್ನೆಲೆಯಲ್ಲಿ ಪೊಲೀಸರು ಅವರ ವಿಚಾರಣೆ ತೀವ್ರಗೊಳಿಸಿದ್ದಾರೆ.
ನೇತ್ರಾವತಿ ನದಿಯಲ್ಲಿ ಕರಾವಳಿ ಪಡೆ, ಮುಳುಗು ತಜ್ಞರು ಶೋಧ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಸಮುದ್ರದಲ್ಲಿ ಹೋವರ್ ಕ್ರಾಫ್ಟ್ ಮೂಲಕ ಶೋಧ ಕಾರ್ಯಾಚರಣೆ ನಡೆಸಲಾಗಿದೆ. ಸತತ ಹುಡುಕಾಟದ ನಡುವೆಯೂ ಈವರೆಗೂ ಯಾವುದೇ ಸುಳಿವು ಸಿಕ್ಕಿಲ್ಲ.

ಕೋಸ್ಟ್ ಗಾರ್ಡ್ ಇದೀಗ ಹಳೆ ಮಂಗಳೂರು ಬಂದರಿನಿಂದ ಐಸಿಜಿಎಸ್ ರಾಜ್ ದೂತ್ ಹಡಗನ್ನು ಬಳಸಿಕೊಂಡು ಕಾರ್ಯಾಚರಣೆ ನಡೆಸಿದೆ. ಮತ್ತೊಂದು ಕಡೆ ಕಂಕನಾಡಿ ಪೊಲೀಸರು ಕಾರು ಚಾಲಕ ಬಸವರಾಜ್ ಅವರನ್ನು ವಿಚಾರಣೆ ನಡೆಸುತ್ತಿದ್ದಾರೆ.
ಸ್ಥಳಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಮಂಗಳೂರು ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಮುಂತಾದವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಉಳ್ಳಾಲ ಶಾಸಕ, ಮಾಜಿ ಸಚಿವ ಯು. ಟಿ. ಖಾದರ್ ಸ್ಥಳಕ್ಕೆ ತೆರಳಿ ಹಿರಿಯ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದರು.












Click it and Unblock the Notifications