ತತ್ವ ನಿಷ್ಠೆಗೆ ಪಕ್ಷದಲ್ಲಿ ಬೆಲೆ ಇಲ್ಲ; ಅಂಗಾರ ಬೇಸರ
ಮಂಗಳೂರು, ಆಗಸ್ಟ್ 20: ರಾಜ್ಯದ ನೂತನ ಸಚಿವ ಸಂಪುಟದಲ್ಲಿ ಮಂತ್ರಿ ಸ್ಥಾನ ಕೈತಪ್ಪಿರುವುದಕ್ಕೆ ಸುಳ್ಯ ಶಾಸಕ ಎಸ್ ಅಂಗಾರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, "ತತ್ವ ನಿಷ್ಠತೆಗೆ ಬೆಲೆ ಇಲ್ಲ" ಎಂದು ಬಿಜೆಪಿ ಹಿರಿಯರ ವಿರುದ್ಧ ಪರೋಕ್ಷವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
"6 ಬಾರಿ ಶಾಸಕನಾದ ನನಗೆ ಈ ಬಾರಿ ಮಂತ್ರಿ ಸ್ಥಾನ ಸಿಗಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲೆ ಹಾಗು ಸುಳ್ಯ ಕ್ಷೇತ್ರದ ಜನರು ಅಪೇಕ್ಷಿಸಿದ್ದರು. ಆದರೆ ಈ ಬಾರಿಯೂ ಸ್ಥಾನ ಸಿಕ್ಕಿಲ್ಲ. ಅನೇಕ ವರ್ಷಗಳಿಂದ ಸಂಘಟನೆಯಲ್ಲಿ ಪಕ್ಷದ ತತ್ವ ಸಿದ್ಧಾಂತಗಳನ್ನು ಒಪ್ಪಿ ಕೆಲಸ ಮಾಡುತ್ತಿದ್ದೇನೆ. ವೈಯಕ್ತಿಕ ಜೀವನದಲ್ಲಿಯೂ ಹಾಗೇ ಇದ್ದೇನೆ. ಈಗ ತತ್ವ ನಿಷ್ಠೆಗೆಲ್ಲ ಬೆಲೆ ಇಲ್ಲ" ಎಂದು ವಿಷಾದ ವ್ಯಕ್ತಪಡಿಸಿದರು.
"ಬೆಲೆ ಇಲ್ಲ ಎಂದ ಮಾತ್ರಕ್ಕೆ ತತ್ವ ನಿಷ್ಠೆಯನ್ನು ಬಿಡಲು ಸಾಧ್ಯವಿಲ್ಲ. ಸಂಘಟನೆ ಯಶಸ್ವಿಯಾಗಬೇಕಾದರೆ ತತ್ವ ನಿಷ್ಠೆಯೇ ಅತ್ಯಂತ ಮುಖ್ಯ. ಇವತ್ತು ನನಗೆ ಸಚಿವ ಸ್ಥಾನ ಸಿಕ್ಕದೇ ಇರಬಹುದು, ಆದರೆ ಸಂಘಟನೆ ವಿಚಾರದಲ್ಲಿ ಯಾವುದೇ ಮನಸ್ತಾಪವಿಲ್ಲ" ಎಂದು ಅವರು ಸ್ಪಷ್ಟಪಡಿಸಿದರು.

ಈ ನಡುವೆ ಸುಳ್ಯ ಬಿಜೆಪಿ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ ಪ್ರತಿಕ್ರಿಯಿಸಿದ್ದು, "ಕ್ಷೇತ್ರದ ಶಾಸಕ ಎಸ್. ಅಂಗಾರ ಅವರಿಗೆ ಸಚಿವ ಸ್ಥಾನ ಸಿಗಬೇಕು. ಕಳೆದ 26 ವರ್ಷಗಳಿಂದ ಸುಳ್ಯದಲ್ಲಿ ಬಿಜೆಪಿ ಶಾಸಕರಾಗಿದ್ದಾರೆ. ಸಚಿವ ಸ್ಥಾನ ಲಭ್ಯವಾಗದೇ ಇರುವುದು ಕ್ಷೇತ್ರದ ಕಾರ್ಯಕರ್ತರಿಗೆ ಮಾಡಿದ ಅನ್ಯಾಯ. ಸಚಿವ ಸ್ಥಾನ ಲಭ್ಯವಾಗುವವರೆಗೆ ಸುಳ್ಯದಲ್ಲಿ ಪಕ್ಷದ ಎಲ್ಲಾ ಚಟುವಟಿಕೆ ಸ್ಥಗಿತಗೊಳಿಸಲಾಗುವುದು" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.












Click it and Unblock the Notifications