ಅದು ಜಾಮೀನಲ್ಲ, ನೋಟೀಸ್; ಆದರೂ ಬಿಡುಗಡೆಯಾದ ಆರೋಪಿಗಳು
ಮಂಗಳೂರು, ಜುಲೈ 15: ಕೋರ್ಟ್ ನೋಟೀಸ್ ಅನ್ನು ಜಾಮೀನು ಆದೇಶ ಪ್ರತಿ ಎಂದು ಭಾವಿಸಿದ ಜೈಲು ಅಧಿಕಾರಿಗಳು ಇಬ್ಬರು ಕೊಲೆ ಆರೋಪಿಗಳನ್ನು ಬಿಡುಗಡೆಗೊಳಿಸಿದ ಪ್ರಸಂಗ ಮಂಗಳೂರು ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಬೆಳಕಿಗೆ ಬಂದಿದೆ.
ಇಲ್ಲಿನ ಜಿಲ್ಲಾ ಕಾರಾಗೃಹದ ಅಧಿಕಾರಿಗಳು ಮಾಡಿದ ಎಡವಟ್ಟಿನಿಂದ ಇಬ್ಬರು ಕೊಲೆ ಆರೋಪಿಗಳು ಜಾಮೀನು ಸಿಗದಿದ್ದರೂ ಬಿಡುಗಡೆಯಾಗಿದ್ದರು.
ಮಂಗಳೂರಿನ ಬಿಜೈ ಕೆಎಸ್ ಆರ್ ಟಿಸಿ ಬಳಿ ನಿಲ್ದಾಣದ ಬಳಿ 2016ರ ಮೇ 15ರಂದು ನಡೆದ ಕದ್ರಿ ರೋಹಿತ್ ಕೋಟ್ಯಾನ್ ಕೊಲೆ ಪ್ರಕರಣದ ಆರೋಪಿಗಳಾಗಿರುವ ಶಿವಾಜಿ ಮತ್ತು ಜಗದೀಶ್ ಎಂಬುವರನ್ನು ಜೈಲು ಅಧಿಕಾರಿಗಳು ಬಿಡುಗಡೆಗೊಳಿಸಿದ್ದರು.

ಇವರಿಬ್ಬರಿಗೆ ಕೋರ್ಟ್ನಿಂದ ನೋಟೀಸ್ ಬಂದಿದ್ದು, ಇದನ್ನು ಜಾಮೀನು ಬಿಡುಗಡೆ ಆದೇಶ ಎಂದು ಭಾವಿಸಿದ ಜೈಲರ್ಗಳು ಜೈಲು ಅಧೀಕ್ಷಕರ ಅನುಮತಿ ಪಡೆದು ಜುಲೈ 9ರಂದು ಬಿಡುಗಡೆಗೊಳಿಸಿದ್ದರು. ಜೈಲಿನ ಎಲ್ಲ ದಾಖಲಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಜಾಮೀನಿನ ನಿಯಮದ ಪ್ರಕಾರವೇ ಬಿಡುಗಡೆ ಮಾಡಲಾಗಿತ್ತು.
ಬಿಡುಗಡೆಯಾದ ಆರೋಪಿಗಳು ಬಳಿಕ ತಮ್ಮ ವಕೀಲರ ಬಳಿ ಹೋಗಿದ್ದರು. ಈ ಸಂದರ್ಭ ಗೊಂದಲಕ್ಕೀಡಾದ ವಕೀಲರು ಜೈಲಿನಲ್ಲಿ ಆದ ಎಡವಟ್ಟಿನ ಬಗ್ಗೆ ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ. ಜೈಲಧಿಕಾರಿಗಳು ಆರೋಪಿಗಳ ಮನೆಗೆ ತೆರಳಿ ಅವರನ್ನು ಪುನಃ ವಶಕ್ಕೆ ಪಡೆದು ಜೈಲಿಗೆ ಸೇರಿಸಿದ್ದಾರೆ.
ಆದರೆ ಈ ವಿಚಾರವನ್ನು ಅತ್ಯಂತ ಗೋಪ್ಯವಾಗಿ ಇರಿಸಲಾಗಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕಾರಾಗೃಹ ಇಲಾಖೆ ಹಾಗು ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.












Click it and Unblock the Notifications