ಮಂಗಳೂರಿನಲ್ಲಿ ಬಾಂಬ್ ಪ್ರಕರಣ; ಆರೋಪಿ ಮಂಪರು ಪರೀಕ್ಷೆ ಪೂರ್ಣ
ಮಂಗಳೂರು, ಸೆಪ್ಟೆಂಬರ್ 5: ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಫೋಟಕ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಆದಿತ್ಯ ರಾವ್ ಮಂಪರು ಪರೀಕ್ಷೆ ಪೂರ್ಣಗೊಂಡಿದೆ.
ಬೆಂಗಳೂರಿನ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಗುರುವಾರ ಹಾಗೂ ಶುಕ್ರವಾರ ಎರಡು ದಿನ ಆರೋಪಿ ಆದಿತ್ಯ ರಾವ್ನನ್ನುಮಂಪರು ಪರೀಕ್ಷೆಗೆ ಒಳಪಡಿಸಲಾಯಿತು. ಮಂಪರು ಪರೀಕ್ಷೆ ಪೂರ್ಣಗೊಂಡಿದ್ದು, ಆರೋಪಿಯನ್ನು ಮತ್ತೆ ಮಂಗಳೂರಿಗೆ ಕರೆ ತರಲಾಗುತ್ತದೆ.
ಆರೋಪಿ ಆದಿತ್ಯ ರಾವ್ ಜನವರಿ 2ರಂದು ಮಂಗಳೂರಿನ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಫೋಟಕ ಇರಿಸಿದ್ದ. ಆನಂತರ ತಾನೇ ಸ್ಫೋಟಕ ಇರಿಸಿದ್ದಾಗಿ ಬೆಂಗಳೂರಿನಲ್ಲಿ ಶರಣಾಗಿದ್ದ. ಬಳಿಕ ಆತನನ್ನು ಮಂಗಳೂರು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸಿದ್ದರು. ಆದಿತ್ಯ ರಾವ್ ವಿರುದ್ಧ ಪೊಲೀಸರು 306 ಪುಟಗಳ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಕೆಲವು ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ದೊರಕದ ಹಿನ್ನೆಲೆ ಮಂಪರು ಪರೀಕ್ಷೆ ನಡೆಸಲು ನ್ಯಾಯಾಲಯಕ್ಕೆ ಮನವಿ ಸಲ್ಲಿಸಲಾಗಿತ್ತು. ನ್ಯಾಯಾಲಯ ಈ ಮನವಿಯನ್ನು ಪುರಸ್ಕರಿಸಿ ಮಂಪರು ಪರೀಕ್ಷೆಗೆ ಅನುಮತಿ ನೀಡಿತ್ತು.












Click it and Unblock the Notifications