ನೇತ್ರಾವತಿ ನದಿಯಲ್ಲಿ ಮುಳುಗಿದ ಮರಳು ಸಾಗಾಟದ ದೋಣಿ
ಮಂಗಳೂರು, ಜುಲೈ 30 : ನೇತ್ರಾವತಿ ನದಿಯಲ್ಲಿ ಮರಳುಗಾರಿಕೆ ನಡೆಸಿ ವಾಪಸಾಗುತ್ತಿದ್ದ ದೋಣಿಯೊಂದು ಮುಳುಗಿದ ಘಟನೆ ನಡೆಸಿದೆ. ದೋಣಿಯಲ್ಲಿದ್ದ ಒಬ್ಬರು ನೀರು ಪಾಲಾದರೆ, ಉಳಿದ ಐವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮೃತಪಟ್ಟವರನ್ನು ಹರೇಕಳ ರಾಜಗುಡ್ಡೆ ನಿವಾಸಿ ಲುಕ್ ಮಾನ್ ಎಂದು ಗುರುತಿಸಲಾಗಿದೆ. ತಂಝೀಲ್, ಅಝೀಜ್, ಬದ್ರುದ್ದೀನ್, ಸಲೀಂ ಅವರನ್ನು ರಕ್ಷಿಸಲಾಗಿದೆ. ಕಳೆದ 7 ವರ್ಷಗಳಿಂದ ಮರಳುಗಾರಿಕೆ ಮಾಡುತ್ತಿದ್ದ ಸಲೀಂ ಅವರ ಕುಟುಂಬ ಸದಸ್ಯರು ಬುಧವಾರವೂ ಮರಳು ತುಂಬಿಸಿಕೊಂಡು ವಾಪಸ್ ಆಗುತ್ತಿದ್ದಾಗ ಈ ಘಟನೆ ನಡದಿದೆ.

ದೇರಿಕಟ್ಟೆಯ ನೇತ್ರಾವತಿ ನದಿ ತೀರದಿಂದ ಅಡ್ಯಾರು ಸಹ್ಯಾದ್ರಿ ಕಾಲೇಜು ಸಮೀಪದ ನದಿಯ ಮಧ್ಯಭಾಗಕ್ಕೆ ತೆರಳಿದ್ದರು. ಮರಳು ತುಂಬಿಸಿಕೊಂಡು ವಾಪಸಾಗುತ್ತಿದ್ದ ವೇಳೆ ನದಿ ಮಧ್ಯ ಭಾಗದಲ್ಲಿ ಜೋರಾಗಿ ಗಾಳಿ ಬೀಸಿದ್ದು, ನಿಯಂತ್ರಣ ತಪ್ಪಿದ ದೋಣಿ ಮುಳುಗಿದೆ.
ಮಲ್ಪೆಯಲ್ಲಿ ಪ್ರವಾಸಿಗ ನೀರು ಪಾಲು : ಬೆಂಗಳೂರಿನಿಂದ ಮಲ್ಪೆಗೆ ಪ್ರವಾಸಕ್ಕೆ ಬಂದಿದ್ದ ಯುವಕನೊಬ್ಬ ಸಮುದ್ರಪಾಲಾದ ಘಟನೆ ಬುಧವಾರ ಸಂಜೆ ನಡೆದಿದೆ. ಮೃತಪಟ್ಟವರನ್ನು ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲುಕಿನ ಶಿವಕುಮಾರ್ (22) ಎಂದು ಗುರುತಿಸಲಾಗಿದೆ.
ಶಿವಕುಮಾರ್ ಬೆಂಗಳೂರಿನಲ್ಲಿ ಎಲೆಕ್ಟ್ರಿಶಿಯನ್ ಆಗಿ ಕೆಲಸ ಮಾಡುತ್ತಿದ್ದರು. ಮಂಗಳವಾರ ಸಂಜೆ ಗೆಳೆಯರ ಜತೆ ಮಲ್ಪೆಗೆ ಬಂದಿದ್ದರು. 6 ಮಂದಿ ಮಹಿಳೆಯರು 7 ಮಂದಿ ಪುರುಷರು ಸೇರಿಕೊಂಡು ಪ್ರವಾಸಕ್ಕೆ ಆಗಮಿಸಿದ್ದರು.

ಎಚ್ಚರಿಕೆ ನೀಡಲಾಗಿತ್ತು : ಪ್ರವಾಸಕ್ಕೆ ಬಂದವರು ನೀರಿಗೆ ಇಳಿದು ಆಟವಾಡುತ್ತಿರುವುದನ್ನು ಜೀವರಕ್ಷಕ ತಂಡದವರು ನೋಡಿ ಎಲ್ಲರಿಗೂ ಎಚ್ಚರಿಕೆಕೊಟ್ಟಿದ್ದರು. ಶಿವಕುಮಾರ್ ಆಟವಾಡುತ್ತಾ ಮುಂದೆ ಹೋದಾಗ ನೀರಿನ ಸೆಳೆತಕ್ಕೆ ಸಿಲುಕಿಕೊಂಡು, ಕೊಚ್ಚಿ ಹೋಗಿದ್ದಾರೆ.












Click it and Unblock the Notifications