ಪಜೀರಿನ ಗೋವನಿತಾಶ್ರಮದಲ್ಲಿ ಬಿಎಸ್ ವೈ 74ನೇ ಹುಟ್ಟ ಹಬ್ಬ ಆಚರಣೆ
ಮಂಗಳೂರು, ಫೆಬ್ರವರಿ. 27 : ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಅವರ 74ನೇ ಹುಟ್ಟು ಹಬ್ಬವನ್ನು ಸೋಮವಾರ ಅವರ ಅಭಿಮಾನಿಗಳು ರಾಜ್ಯಾದ್ಯಂತ ವಿಶೇಷ ಪೂಜೆ ಸಲ್ಲಿಸುವ ಮೂಲಕ ಆಚರಿಸಿದರು.
ಅದರಂತೆ ಮಂಗಳೂರು ಬಿಜೆಪಿ ಕಾರ್ಯಕರ್ತರು ಪಜೀರಿನ ಗೋವನಿತಾಶ್ರಮಕ್ಕೆ ಭೇಟಿ ನೀಡಿ ಗೋವುಗಳಿಗೆ ಮೇವು ತಿನಿಸುವ ಮೂಲಕ (ಗೋಗ್ರಾಸ) ಬಿಎಸ್ ವೈ ಅವರ 74ನೇ ಹುಟ್ಟು ಹಬ್ಬವನ್ನು ಆಚರಿಸಿದರು.

ಈ ವೇಳೆ ಮಾತನಾಡಿದ ಬಿಜೆಪಿ ರಾಜ್ಯಕಾರ್ಯಕಾರಿಣಿ ಸದಸ್ಯ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು ಅವರು, ಕಲ್ಯಾಣ ಕರ್ನಾಟಕದ ಕನಸುಗಾರ ಮಾಜಿ ಮುಖ್ಯಮಂತ್ರಿ ಬಿಎಸ್ ವೈ ಅವರು ಈಗಾಗಲೇ ಬಿಜೆಪಿಯ ರಾಜ್ಯಾಧ್ಯಕ್ಷ ಸ್ಥಾನ ಅಲಂಕರಿಸಿದ್ದು, ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದು ಮತ್ತೆ ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ ಎಂದರು.
ಗೋವಿಗೆ ಮೇವನ್ನು ಕೊಡುವುದರಲ್ಲಿ ಪುಣ್ಯ ಪ್ರಾಪ್ತಿಯಾಗುವುದೆಂಬ ನಂಬಿಕೆ ಪುರಾಣದಲ್ಲಿದ್ದು, ಅದರಲ್ಲೂ ತಮ್ಮ ನೆಚ್ಚಿನ ನಾಯಕನ ಉಜ್ವಲ ಭವಿಷ್ಯಕ್ಕಾಗಿ ಪ್ರಾರ್ಥಿಸಿ ಮೇವನ್ನು ದಾನಗೈದದ್ದು ಅತೀ ಶ್ರೇಷ್ಠ ಕೆಲಸವೆಂದು ಗೋವನಿತಾಶ್ರಮ ಟ್ರಸ್ಟ್ ನ ಮುಖ್ಯಸ್ಥ ಅನಂತಕೃಷ್ಣ ಭಟ್ ಹೇಳಿದರು.
ಇದಕ್ಕೂ ಮೊದಲು ಇತಿಹಾಸ ಪ್ರಸಿದ್ಧ ಸೋಮೇಶ್ವರ ಸೋಮನಾಥೇಶ್ವರ ದೇವಸ್ಥಾನಕ್ಕೆ ಉಳಿದೊಟ್ಟು ದಂಪತಿಗಳು ಬೆಂಬಲಿಗರೊಂದಿಗೆ ತೆರಳಿ ರುದ್ರಾಭಿಷೇಕ ಪೂಜೆ ಸಲ್ಲಿಸಿ ಬಿಎಸ್ ವೈ ಉಜ್ವಲ ಭವಿಷ್ಯಕ್ಕಾಗಿ ಪ್ರಾರ್ಥಿಸಿದರು.












Click it and Unblock the Notifications