ಸುರತ್ಕಲ್ ಟೋಲ್ ವಿವಾದ: ಕೈಲಾಗದ ಯುಟಿ ಖಾದರ್ ಟೀಕೆ ಹಾಸ್ಯಾಸ್ಪದ ಎಂದ ಶಾಸಕ ಭರತ್ ಶೆಟ್ಟಿ
ಮಂಗಳೂರು, ನವೆಂಬರ್ 17: ಸುರತ್ಕಲ್ ಟೋಲ್ ವಿಚಾರವಾಗಿ ಕಾಂಗ್ರೆಸ್-ಬಿಜೆಪಿ ನಡುವೆ ಮಾತಿನ ಸಮರ ಮುಂದುವರಿದಿದೆ. ಯುಟಿ ಖಾದರ್ ಮಾತಿಗೆ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ.ವೈ ಭರತ್ ಶೆಟ್ಟಿ ತಿರುಗೇಟು ನೀಡಿದ್ದು, ಅಧಿಕಾರದಲ್ಲಿದ್ದಾಗ ಟೋಲ್ ತೆರವು ಮಾಡದ ಖಾದರ್ ಈಗ ಆರೋಪ ಮಾಡುತ್ತಿರುವುದು ಹಾಸ್ಯಾಸ್ಪದ ಹೇಳಿದ್ದಾರೆ.
ಖಾದರ್ ಆರೋಪಕ್ಕೆ ಹೇಳಿಕೆ ಬಿಡುಗಡೆ ಮಾಡಿರುವ ಶಾಸಕ ಭರತ್ ಶೆಟ್ಟಿ,ಅಧಿಕಾರದಲ್ಲಿದ್ದಾಗ ಟೋಲ್ ಗೇಟ್ ತೆರವು ಮಾಡುವ ಮಾತು ನೀಡಿ ಹೋರಾಟಗಾರರ ಜೊತೆ ಭಾಗವಹಿಸಿ, ಪ್ರಚಾರ ಪಡೆದುಕೊಂಡು ಎದ್ದು ಹೋಗಿರುವ ಶಾಸಕ ಯು ಟಿ ಖಾದರ್, ಟೋಲ್ ಗೇಟ್ ತೆರವಿಗೆ ಪ್ರಕ್ರಿಯೆ ಆರಂಭಿಸಲೂ ವಿಫಲರಾಗಿ, ಇದೀಗ ನನ್ನ ವಿರುದ್ಧ ಮಾತನಾಡುತ್ತಿರುವುದು ಹಾಸ್ಯಸ್ಪದ ಎಂದು ತಿರುಗೇಟು ನೀಡಿದ್ದಾರೆ.
ರಾಜ್ಯ ಸರಕಾರದ ಪ್ರಧಾನ ಕಾರ್ಯದರ್ಶಿ ಅವರೊಂದಿಗೆ ಮಾತುಕತೆ ಮಾಡಿರುವೆ ಎಂದು ಯು.ಟಿ ಖಾದರ್ ಹೇಳಿಕೊಂಡು ಬಂದಿದ್ದರು. ಆದರೆ ರಾಜ್ಯದಿಂದ ಕೇಂದ್ರದ ಹೆದ್ದಾರಿ ಇಲಾಖೆಗೆ ಕಾನೂನಾತ್ಮಕವಾಗಿ ಅಧಿಕೃತ ಪತ್ರವನ್ನು ಕಳಿಸಲು ಕೂಡ ಇವರಿಗೆ ಸಾಧ್ಯವಾಗಿರಲಿಲ್ಲ. ಇದೀಗ ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರಕಾರ ಇರುವುದರಿಂದ ವೈಫಲ್ಯವನ್ನು ಮರೆಮಾಚಲು ಯತ್ನಿಸುತ್ತಿದ್ದಾರೆ . ಚುನಾವಣೆ ಹತ್ತಿರ ಬಂದಾಗ ಕಾಂಗ್ರೆಸ್ನಿಂದ ಇಂತಹ ಆರೋಪಗಳು ನಿರೀಕ್ಷಿತ ಎಂದು ಶಾಸಕ ಭರತ್ ಶೆಟ್ಟಿ ತಿಳಿಸಿದ್ದಾರೆ.

ಇರ್ಕಾನ್ ಸಂಸ್ಥೆ ಹಾಗೂ ನವಯುಗ ಖಾಸಗಿ ಸಂಸ್ಥೆಯು ಟೋಲ್ ಗೇಟ್ ಸ್ಥಾಪಿಸಲು ಅವಕಾಶ ನೀಡುವ ಸಲುವಾಗಿ 2013ರ ಮಾರ್ಚ್ನಲ್ಲಿ ಹೆಜಮಾಡಿ ಟೋಲ್ಗೇಟ್, ಜೂನ್ ನಲ್ಲಿ ಸುರತ್ಕಲ್ನಲ್ಲಿ ಟೋಲ್ ಗೇಟ್ ನಿರ್ಮಿಸಲು ಈ ಹಿಂದಿನ ಯುಪಿಎ ಸರಕಾರವೇ ರಾಜ್ಯ ಪತ್ರದಲ್ಲಿ ಅಧಿಕೃತವಾಗಿ ಪ್ರಕಟಿಸಿ ಕೊಡುಗೆ ನೀಡಿದೆ. ಅಂದೇ ಹಿಂಪಡೆಯಲು ಇದ್ದ ಅವಕಾಶವನ್ನು ಕೈ ಚೆಲ್ಲಿರುವ ಕಾಂಗ್ರೆಸ್ ರಾಜಕೀಯಕ್ಕಾಗಿ ಇದೀಗ ಲಾಭ ಪಡೆಯಲು ಮುಂದಾಗಿದೆ ಎಂದು ಭರತ್ ಶೆಟ್ಟಿ ಆರೋಪಿಸಿದ್ದಾರೆ.
ಆಗ 60 ಕಿಲೋಮೀಟರ್ ಒಳಗೆ ಟೋಲ್ ಗೇಟ್ ನಿರ್ಮಾಣ ಕಾನೂನಾತ್ಮಕವಾಗಿ ಸರಿಯಲ್ಲ ಎಂದು ಈ ಹಿಂದೆ ಆಡಳಿತ ನಡೆಸಿದ್ದ ಯುಪಿಎ ಸರಕಾರದ ಹೆದ್ದಾರಿ ಮಂತ್ರಿಗಳಿಗೆ ತಿಳಿದಿರಲಿಲ್ಲವೇ? ಈಗಿನ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಸಂಸತ್ತಿನಲ್ಲಿಯೇ 60 ಕಿಲೋ ಮೀಟರ್ ವ್ಯಾಪ್ತಿಗಳಲ್ಲಿ ಒಂದು ಟೋಲ್ ಗೇಟ್ ಇರುವುದು ಸರಿಯಾದ ಕ್ರಮ ಎಂದು ಒಪ್ಪಿಕೊಂಡು ದೇಶದಾದ್ಯಂತ ಇರುವ ಟೋಲ್ ಗೇಟ್ಗಳ ವಿಲೀನಕ್ಕೆ ಮುಂದಾಗಿರುವುದನ್ನು ಶಾಸಕ ಯು ಟಿ ಖಾದರ್ ಅವರು ಮುಕ್ತ ಮನಸ್ಸಿನಿಂದ ಪ್ರಶಂಶಿಸುವ ಮನಸ್ಸು ಮಾಡಬೇಕು ಎಂದು ಸಲಹೆಯನ್ನು ನೀಡಿದ್ದಾರೆ.

ನನಗೆ ಕೇವಲ ಆಶ್ವಾಸನೆ ನೀಡಿ ಹಿಂದೆ ಹೋಗುವುದರಲ್ಲಿ ಆಸಕ್ತಿ ಇಲ್ಲ. ಗಂಭೀರವಾದ ಪ್ರಯತ್ನವನ್ನು ನಡೆಸಿ ಸಂಸದರ ಮುತುವರ್ಜಿಯಲ್ಲಿ ಟೋಲ್ ಗೇಟ್ ತೆರವುಗೊಳಿಸಲು ಯಶಸ್ವಿಯಾಗಿದ್ದೇವೆ ಎಂದು ತಿಳಿಸಿದ್ದಾರೆ.












Click it and Unblock the Notifications