ವಕ್ಫ್ ಆಸ್ತಿ ಭ್ರಷ್ಟಾಚಾರ ತನಿಖೆ ಬಿಡುವಂತೆ ಬಿಜೆಪಿಯಿಂದ ಕೋಟಿಗಟ್ಟಲೇ ಆಫರ್: ಅನ್ವರ್ ಮಾಣಿಪ್ಪಾಡಿ
ಮಂಗಳೂರು, ಜೂನ್ 27: ವಕ್ಫ್ ಆಸ್ತಿ ಭ್ರಷ್ಟಾಚಾರ ವಿಚಾರದಲ್ಲಿ ರಾಜ್ಯ ಸರ್ಕಾರದಿಂದ ಸಕರಾತ್ಮಕ ಸ್ಪಂದನೆ ಸಿಗದ ಕಾರಣಕ್ಕಾಗಿ ರಾಜ್ಯ ಬಿಜೆಪಿ ಸಹವಕ್ತಾರ ಪಕ್ಷದ ವಿರುದ್ದ ಸಿಡಿದಿದಿದ್ದಾರೆ.
"ವಕ್ಫ್ ಆಸ್ತಿ ವಿಚಾರದಲ್ಲಿ ಬಿಜೆಪಿ ಸರಕಾರದಿಂದ ಸಕಾರಾತ್ಮಕ ಸ್ಪಂದನೆ ದೊರಕಿಲ್ಲ ಹಾಗೂ ಬಿಜೆಪಿಯು ಮುಸ್ಲಿಂ ಸಮುದಾಯ ವಿರೋಧಿ ಧೋರಣೆಯನ್ನು ಅನುಸರಿಸುತ್ತಿದೆ" ಎಂದು ಅನ್ವರ್ ಮಾಣಿಪ್ಪಾಡಿ ರಾಜ್ಯ ಬಿಜೆಪಿ ವಿರುದ್ಧ ಸುದ್ದಿಗೋಷ್ಠಿ ನಡೆಸಿ ಬಹಿರಂಗವಾಗಿ ಹರಿಹಾಯ್ದರು.
ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಅನ್ವರ್ ಮಾಣಿಪ್ಪಾಡಿ, "ನಾನು ಬಿಜೆಪಿ ತೊರೆಯದೆ, ಪಕ್ಷದೊಳಗೆ ಇದ್ದುಕೊಂಡೇ ಈ ವಿಚಾರಗಳ ವಿರುದ್ಧ ಧ್ವನಿಯೆತ್ತಲಿದ್ದೇನೆ. ಅಲ್ಲದೆ ಬಿಜೆಪಿ ಸರಕಾರ ನನಗೆ ನೀಡಿರುವ ಗನ್ ಮ್ಯಾನ್ ಹಾಗೂ ಸರಕಾರದ ಇತರ ಸವಲತ್ತುಗಳನ್ನು ಹಿಂದಿರುಗಿಸಲಿದ್ದೇನೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

"ವಕ್ಫ್ ಆಸ್ತಿಯಲ್ಲಿನ ಅಕ್ರಮ ಹಾಗೂ ಭ್ರಷ್ಟಾಚಾರದ ಬಗ್ಗೆ 10 ವರ್ಷಗಳ ಕಾಲ ಅಧ್ಯಯನ ನಡೆಸಿ ನಾನು ವರದಿ ಸಲ್ಲಿಸಿದ್ದೇನೆ. ಆದರೆ ಇದಕ್ಕೆ ಬಿಜೆಪಿಗಿಂತ ಹಿಂದಿದ್ದ ಸರಕಾರದಿಂದ ಯಾವುದೇ ಸ್ಪಂದನೆ ದೊರಕಿರಲಿಲ್ಲ. ಆದರೆ ಬಿಜೆಪಿ ಸರಕಾರ ಅಧಿಕಾರ ಹಿಡಿದ ಬಳಿಕ ತನಗೆ ಪ್ರೋತ್ಸಾಹ ದೊರಕಬಹುದು ಎಂಬ ನಿರೀಕ್ಷೆಯಲ್ಲಿದ್ದೆ. ಆದರೆ ಬಿಜೆಪಿ ಸರಕಾರದಿಂದ ತನ್ನ ಈ ಪ್ರಯತ್ನವನ್ನು ಹತ್ತಿಕ್ಕುವ ಯತ್ನ ನಡೆಯಿತು" ಎಂದು ದೂರಿದರು.
"ಅಲ್ಲದೆ ಯಡಿಯೂರಪ್ಪ ಹಾಗೂ ಅವರ ಪುತ್ರ ವಿಜಯೇಂದ್ರರಿಂದ ವಕ್ಫ್ ಆಸ್ತಿ ವಿಚಾರದಿಂದ ಹೊರ ಬರುವಂತೆ ಕೋಟ್ಯಂತರ ರೂ. ಆಮಿಷ ಬಂದಿತ್ತು. ಆದರೆ ನಾನು ಯಾವುದೇ ಆಮಿಷಗಳಿಗೆ ಬಲಿಯಾಗದೇ ನನ್ನ ಸೈದ್ಧಾಂತಿಕ ವಿಚಾರಗಳ ಬಗ್ಗೆ ಅಚಲನಾಗಿದ್ದೇನೆ" ಎಂದು ಹೇಳಿದ್ದಾರೆ.

"ಪ್ರಧಾನಿ ಮೋದಿಯವರ ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಉತ್ತಮವಾದ ಪರಿಕಲ್ಪನೆಯಾಗಿದೆ. ಆದರೆ ಅದನ್ನು ಅನುಷ್ಠಾನಗೊಳಿಸುವಲ್ಲಿ ರಾಜ್ಯ ಬಿಜೆಪಿ ಸರಕಾರ ವಿಫಲಗೊಂಡಿದೆ. ಹಿಂದೂ ದೇವಾಲಯಗಳ ಜಾತ್ರೋತ್ಸವಗಳಲ್ಲಿ ಹಿಂದೂಯೇತರರಿಗೆ ವ್ಯಾಪಾರ ನಿರಾಕರಣೆ, ಹಿಜಾಬ್ ವಿವಾದ, ಮಳಲಿ ಮಸೀದಿ, ಹಲಾಲ್ ವಿಚಾರದಲ್ಲಿ ಬಿಜೆಪಿ ಸರಕಾರ ಮುಸ್ಲಿಂ ಸಮುದಾಯದ ವಿರೋಧಿ ಧೋರಣೆಯನ್ನು ತಳೆದಿದೆ. ಈ ಮೂಲಕ ಮುಸ್ಲಿಮರ ಸಂವಿಧಾನಾತ್ಮಕ ಹಕ್ಕುಗಳನ್ನು ಮೊಟಕುಗೊಳಿಸುವ ಯತ್ನ ಮಾಡುತ್ತಿದೆ. ಈ ಎಲ್ಲಾ ಕಾರಣದಿಂದ ನಾನು ಈ ನಿರ್ಧಾರವನ್ನು ತಳೆದಿದ್ದೇನೆ" ಎಂದು ಅನ್ವರ್ ಮಾಣಿಪ್ಪಾಡಿಯರು ಹೇಳಿದರು.
"ನನಗೆ ಭ್ರಷ್ಟಾಚಾರದಲ್ಲಿ ಹೊಂದಾಣಿಕೆ ಮಾಡಲು ಸಾಧ್ಯವಿಲ್ಲ. ಸಾಕಷ್ಟು ಸಮಯದಲ್ಲಿ ಉತ್ತಮ ಸ್ಪಂದನೆಗಾಗಿ ಕಾದಿದ್ದೇನೆ. ಆದರೆ ಬಿಜೆಪಿ ಯಿಂದ ಯಾವುದೇ ಸ್ಪಂದನೆ ದೊರಕಿಲ್ಲ. ಭ್ರಷ್ಟಾಚಾರ ವಿರುದ್ಧದ ತನಿಖೆಯಿಂದ ಹಿಂದೆ ಬರುವಂತೆ ಕೋಟ್ಯಾಂತರ ರೂಪಾಯಿ ಆಫರ್ನ್ನು ಬಿಜೆಪಿ ನಾಯಕರೇ ನನಗೆ ನೀಡಿದ್ದಾರೆ" ಎಂದು ಅನ್ವರ್ ಮಾಣಿಪ್ಪಾಡಿ ಆರೋಪಿಸಿದ್ದಾರೆ.












Click it and Unblock the Notifications