ಪರಿವರ್ತನಾ ಯಾತ್ರೆಯಲ್ಲಿ ಬಿಜೆಪಿ ನಾಯಕರ ಎಡವಟ್ಟುಗಳು
ಮಂಗಳೂರು, ನವೆಂಬರ್ 12: ಬಿಜೆಪಿ ನವಕರ್ನಾಟಕ ಪರಿವರ್ತನಾ ಯಾತ್ರೆಯಲ್ಲಿ ಕೇಸರಿ ಪಕ್ಷದ ನಾಯಕರು ಎಡವಟ್ಟಿನ ಮೇಲೆ ಎಡವಟ್ಟನ್ನು ಮಾಡಿಕೊಳ್ಳುತ್ತಿದ್ದಾರೆ.
ಯಾತ್ರೆ ಸಂದರ್ಭದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡುವ ಭರದಲ್ಲಿ ಕಾಂಗ್ರೆಸ್ ಮುಖಂಡರನ್ನು ಟಾರ್ಗೆಟ್ ಮಾಡುವ ಬದಲು ಬಾಯ್ತಪ್ಪಿನಿಂದ ತಮ್ಮ ಪಕ್ಷದ ನಾಯಕರನ್ನೇ ಬೈದು ಬಿಜೆಪಿಯನ್ನು ಮುಜುಗರಕ್ಕೀಡು ಮಾಡುತ್ತಿದ್ದಾರೆ.
Bjp ಪರಿವರ್ತನಾ ಯಾತ್ರೆಗೆ ಭಾರೀ ಜನ ಬೆಂಬಲ
ಶುಕ್ರವಾರ ಸುಳ್ಯದಲ್ಲಿ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಶ್ರೀರಾಮುಲು ಭಾಷಣ ಮಾಡುವ ಆತುರದಲ್ಲಿ ಯಡವಟ್ಟು ಮಾಡಿಕೊಂಡಿದ್ದರು.
ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸುವ ಭರದಲ್ಲಿ ರಾಜ್ಯದಲ್ಲಿ ಅಧಿಕಾರದಲ್ಲಿರುವ ಸರಕಾರ ಹಿಂದೂ ಕಾರ್ಯಕರ್ತರನ್ನು ಕೊಲ್ಲುವ ಕೆಲಸ ಮಾಡುತ್ತಿದೆ. ಯಡಿಯೂರಪ್ಪ, ಸದಾನಂದ ಗೌಡ, ಶೋಭಾ ಕರಂದ್ಲಾಜೆ ಸೇರಿಕೊಂಡು ಹಿಂದೂ ಕಾರ್ಯಕರ್ತರ ಹತ್ಯೆ ಮಾಡಿದ್ದಾರೆ ಎಂದು ಹೇಳಿ ಮುಜುಗರಕ್ಕೆ ಒಳಗಾದರು. ಶ್ರೀ ರಾಮಲು ಅವರ ಈ ಹೇಳಿಕೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಬಿಜೆಪಿ ಕಾರ್ಯಕರ್ತರಲ್ಲಿ ಅಸಮಧಾನ ಮೂಡಿಸಿದೆ.

'ನರೇಂದ್ರ ಮೋದಿಯವರಿಗೆ ನಾಚಿಕೆಯಾಗಬೇಕು'
ಈ ನಡುವೆ ಶನಿವಾರ ಕೂಡ ಬಿಜೆಪಿ ಮುಖಂಡರಿಂದ ಎಡವಟ್ಟಾಗಿದೆ. ಶನಿವಾರ ಬಂಟ್ವಾಳದಲ್ಲಿ ಪರಿವರ್ತನಾ ಯಾತ್ರೆಯ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವ ಡಿವಿ ಸದಾನಂದ ಗೌಡ ಭಾಷಣದ ಭರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಾಚಿಕೆಯಾಗಬೇಕು ಎಂದು ಹೇಳಿಕೆ ನೀಡುವ ಮೂಲಕ ಎಡವಟ್ಟು ಮಾಡಿಕೊಂಡಿದ್ದಾರೆ.

ರೈ ಕುರ್ಚಿಯಿಂದ ಕೆಳಗೆ ಬಿದ್ದಿದ್ದಾರೆ
ಕಾರ್ಯಕ್ರಮದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವ ಡಿವಿ ಸದಾನಂದ ಗೌಡ ಸಮಾವೇಶದಲ್ಲಿ ಸೇರಿದ ಜನಸಾಗರ ಕಂಡು ರಮಾನಾಥ್ ರೈ ಅವರಿಗೆ ನಡುಕ ಉಂಟಾಗಿದೆ. ಬಿಜೆಪಿ ಕಾರ್ಯಕರ್ತರ ಘೋಷಣೆಗೆ ರೈ ಅವರು ಕುರ್ಚಿಯಿಂದ ಕೆಳಗೆ ಬಿದ್ದಿದ್ದಾರೆ ಎಂಬ ಸಂದೇಶ ರವಾನೆಯಾಗುತ್ತಿದೆ ಎಂದು ವ್ಯಂಗ್ಯವಾಡಿದರು.

ರೈಗೆ ಲೆಕ್ಕ ಗೊತ್ತಿಲ್ಲ
ಅಭಿವೃದ್ಧಿಯ ಬಗ್ಗೆ ಗಂಧ ಗಾಳಿಯೇ ಗೊತ್ತಿಲ್ಲದ ರೈಯವರಿಗೆ ಲೆಕ್ಕ ಗೊತ್ತಿಲ್ಲ. 8 ಗುಣಿಸು 8 ಎಷ್ಟೆಂದರೆ "ಪದಿನೆಟ್ "ಎಂದು ಹೇಳುತ್ತಾರೆ. ನಾಚಿಕೆಯಾಗಬೇಕು ನರೇಂದ್ರ ಮೋದಿ ಅವರಿಗೆ ಎಂದು ಹೇಳಿದರು. ಈ ಸಂದರ್ಭದಲ್ಲಿ ತಾನು ತಪ್ಪು ಹೇಳಿಕೆ ನೀಡುವುದನ್ನು ಮಾನಗಂಡ ಸದಾನಂದ ಗೌಡ ಮುಜುಗರಕ್ಕೆ ಒಳಗಾದರು.

ಸಿಎಂ ಜಾರ್ಜ್ ಫರ್ನಾಂಡಿಸ್!
ಮಂಗಳೂರಿನಲ್ಲಿ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಯ ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಕೂಡ ಮಾತಿನ ಭರದಲ್ಲಿ ಎಡವಟ್ಟು ಮಾಡಿಕೊಂಡರು. ನಗರದ ಕೇಂದ್ರ ಮೈದಾನದಲ್ಲಿ ಆಯೋಜಿಸಲಾಗಿದ್ದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಬಿ.ಎಸ್. ಯಡಿಯೂರಪ್ಪ, 'ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುವ ಬದಲು ಸಿಎಂ ಜಾರ್ಜ್ ಫರ್ನಾಂಡೀಸ್ ಎಂದು ಹೇಳುವ ಮೂಲಕ ಕಾರ್ಯಕರ್ತರನ್ನು ಅಚ್ಚರಿಗೆ ಕೆಡವಿದರು.
ಪರಿವರ್ತನಾ ಯಾತ್ರೆಯಲ್ಲಿ ಬಿಜೆಪಿ ಮುಖಂಡರ ಈ ಎಡವಟ್ಟು ಬಿಜೆಪಿ ಕಾರ್ಯಕರ್ತರಿಗೆ ಇರಿಸು ಮುರುಸು ಮೂಡಿಸುತ್ತಿದ್ದರೆ ಇನ್ನೊಂದೆಡೆ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರಿಗೆ ಮನರಂಜನೆ ನೀಡುತ್ತಿದೆ.












Click it and Unblock the Notifications