'ದ.ಕ.ದಲ್ಲಿ ಕಾಂಗ್ರೆಸ್ ಗೆಲ್ಲಲ್ಲ, ಆದರೂ ತಿರುಕನ ಕನಸು ಕಾಣುತ್ತಿದೆ'
ಮಂಗಳೂರು, ಏಪ್ರಿಲ್ 10: ಕಾಂಗ್ರೆಸ್ ಸೇರಿದಂತೆ ಜೆಡಿಎಸ್ ನಾಯಕರು ಪ್ರಸ್ತಾಪಿಸುತ್ತಿರುವ ಬ್ಯಾಂಕ್ ಖಾತೆಗೆ 15 ಲಕ್ಷ ರೂ.ಹಾಕುತ್ತೇನೆ ಎಂದು ನರೇಂದ್ರ ಮೋದಿ ಹೇಳಿದ್ದರ ಬಗ್ಗೆ ದಾಖಲೆ ನೀಡಿದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ್ ಸವಾಲು ಹಾಕಿದರು.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪ್ರತಿಯೊಬ್ಬ ಭಾರತೀಯನ ಬ್ಯಾಂಕ್ ಖಾತೆಗೆ 15 ಲಕ್ಷ ರೂಪಾಯಿ ಹಾಕುವಷ್ಟು ಕಪ್ಪು ಹಣ ಸ್ವಿಸ್ ಬ್ಯಾಂಕ್ನಲ್ಲಿದೆ ಎಂದು ಮೋದಿ ಹೇಳಿದ್ದರು. ಆದರೆ ಕಾಂಗ್ರೆಸ್ ಹಾಗೂ ಪ್ರತಿಪಕ್ಷದ ನಾಯಕರು ಅದನ್ನು ತಿರುಚಿ 15 ಲಕ್ಷ ರೂಪಾಯಿಯನ್ನು ಪ್ರತಿಯೊಬ್ಬ ಭಾರತೀಯನ ಬ್ಯಾಂಕ್ ಖಾತೆಗೆ ಹಾಕುತ್ತೇನೆ ಎಂದು ಮೋದಿ ಹೇಳಿದ್ದರು ಎಂದು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
60 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ಗೆ ಆಗದ್ದು, 5 ವರ್ಷ ಆಡಳಿತ ನಡೆಸಿದ ಮೋದಿಗೆ ಸಾಕಾದೀತೇ? ಸ್ವಲ್ಪ ಸಮಯ ಕೊಡಿ. ಸ್ವಿಸ್ ಬ್ಯಾಂಕ್ ನಲ್ಲಿರುವ ಕಪ್ಪು ಹಣವನ್ನ ಮೋದಿ ತರಲಿದ್ದಾರೆ ಎಂದು ಹೇಳಿದರು. ಈಗ ದೇಶಾದ್ಯಂತ ಮೋದಿಯ ಹವಾ ಎದ್ದಿದೆ. ಕಾಂಗ್ರೆಸ್-ಜೆಡಿಎಸ್ ನವರು ಮೋದಿ ಹವಾದಿಂದ ತತ್ತರಿಸಿದ್ದಾರೆ ಎಂದು ಹರಿಕೃಷ್ಣ ತಿಳಿಸಿದರು.

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಲ್ಲ. ಆದರೂ ತಿರುಕನ ಕನಸನ್ನು ಕಾಣುತ್ತಿದೆ ಎಂದು ವ್ಯಂಗ್ಯವಾಡಿದ ಹರಿಕೃಷ್ಣ, ಜನಾರ್ದನ ಪೂಜಾರಿಯಂತಹ ಬಲಿಷ್ಠ ನಾಯಕರನ್ನು ಸೋಲಿಸಿದ ನಳಿನ್ ಗೆ ಮಿಥುನ್ ರೈ ಸರಿಸಾಟಿಯಾದ ಅಭ್ಯರ್ಥಿಯಲ್ಲ. ಈ ಬಾರಿ ನಳಿನ್ 2 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದರು.












Click it and Unblock the Notifications