ಮಂಗಳೂರು: ಸಾಮಾಜಿಕ ಜಾಲತಾಣದಲ್ಲಿ ನಳಿನ್ ಕುಮಾರ್ ಕಟೀಲ್ ವಿರುದ್ಧ ಕಾರ್ಯಕರ್ತರ ವಾರ್!
ಮಂಗಳೂರು, ಆಗಸ್ಟ್, 26: ಪ್ರಧಾನಿ ನರೇಂದ್ರ ಮೋದಿ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸುವ ಮುನ್ಸೂಚನೆ ಸಿಗುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರಲ್ಲಿ ಹುಮ್ಮಸ್ಸು ಜೋರಾಗಿದೆ. ಅದರಲ್ಲೂ ಪ್ರಧಾನಿ ಮೋದಿ ಬಳಿ ಜಿಲ್ಲೆಯ ಸಮಸ್ಯೆಗಳನ್ನು ಹೇಳಿಕೊಳ್ಳುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವೇದಿಕೆಗಳನ್ನು ಸಜ್ಜುಗೊಳಿಸಲಾಗಿದೆ. ಈಗಾಗಲೇ ಬಿಜೆಪಿಯ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿರುದ್ಧ ಕಾರ್ಯಕರ್ತರು ಕ್ಯಾಂಪೇನ್ ಮಾಡುತ್ತಿದ್ದಾರೆ. ರಾಜ್ಯಾಧ್ಯಕ್ಷ ಬದಲಾವಣೆ ಮತ್ತು ಮುಂದಿನ ಚುನಾವಣೆಯಲ್ಲಿ ಬಿಜೆಪಿ ಸಂಸದ ಅಭ್ಯರ್ಥಿಯನ್ನು ಬದಲಾವಣೆ ಮಾಡುವಂತೆ ಅಭಿಯಾನ ಆರಂಭಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಗಮನ ಸೆಳೆಯಲು ಕರಾವಳಿಯಲ್ಲಿ ದೊಡ್ಡಮಟ್ಟದ ಅಭಿಯಾನ ಆರಂಭ ಆಗಿದೆ.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಕ್ಯಾಂಪೇನ್ ಜೋರಾಗಿದ್ದು, ಈ ಕ್ಯಾಂಪೇನ್ ಬಿಜೆಪಿಗೆ ಮುಳ್ಳಾಗುವ ಸಾಧ್ಯತೆಗಳಿವೆ. ಮತ್ತೊಂದೆಡೆ ಅಭಿಮಾನಿಗಳು ನಳಿನ್ ಕುಮಾರ್ ಕಟೀಲ್ ಪರವಾಗಿ ಬ್ಯಾಟಿಂಗ್ ಮಾಡಲು ತೀರ್ಮಾನಿಸಿದ್ದಾರೆ. ಬಿಜೆಪಿಯ ಸಾಮಾಜಿಕ ಜಾಲತಾಣಗಳ ಪೋಸ್ಟ್ಗಳ ಕಮೆಂಟ್ ವಿಭಾಗದಲ್ಲಿ ನಳಿನ್ ಕುಮಾರ್ ಕಟೀಲ್ ವಿರುದ್ಧದ ಕಮೆಂಟ್ಗಳು ಹೆಚ್ಚಾಗಿ ಬರುತ್ತಿವೆ. ಇದನ್ನು ತಡೆಯುವ ನಿಟ್ಟಿನಲ್ಲಿ ಬಿಜೆಪಿ ಹೊಸ ಯೋಜನೆ ರೂಪಿಸಿದೆ. ಬಿಜೆಪಿಯ ಯುವ ಮೋರ್ಚಾದ ಪದಾಧಿಕಾರಿಗಳಿಗೆ ಗುಪ್ತವಾಗಿ ಟಾಸ್ಕ್ ಅನ್ನು ನೀಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ನಳಿನ್ ಪರವಾಗಿ ಪೋಸ್ಟ್ ಹಾಕಲು ಸೂಚನೆ ನೀಡಲಾಗಿದೆ.

ಕಾರ್ಯಕರ್ತರಿಂದಲೇ ಕಟೀಲ್ ವಿರುದ್ಧ ವಾರ್
ಬಿಜೆಪಿ ಕರ್ನಾಟಕ, ದಕ್ಷಿಣ ಕನ್ನಡ ಬಿಜೆಪಿ ಮುಂತಾದ ಪೇಸ್ಬುಕ್ ಪೇಜ್ಗಳಲ್ಲಿ ನಳಿನ್ ಕುಮಾರ್ ಕಟೀಲ್ ಪರವಾಗಿ ಪೋಸ್ಟ್ಗಳು ಬರುತ್ತಿವೆ. ಈ ಪೋಸ್ಟ್ಗಳಿಗೆ ಬಿಜೆಪಿಯ ಕಾರ್ಯಕರ್ತರೇ ವಿರುದ್ಧವಾಗಿ ಕಮೆಂಟ್ಗಳನ್ನ ಹಾಕುತ್ತಿದ್ದು, ಇದು ಪಕ್ಷಕ್ಕೆ ತೀವ್ರ ಮುಜುಗುರವನ್ನು ತಂದಿದೆ. ಇದನ್ನು ತಡೆಯಲು ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿಯ ನಾಯಕರುಗಳೇ ನೇರವಾಗಿ ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್ ವಾರ್ಗೆ ಧುಮುಕಿದ್ದಾರೆ. ಯಾವತ್ತೂ ಪೋಸ್ಟ್ಗಳಿಗೆ ಕಮೆಂಟ್ ಹಾಕದ ಪ್ರತಿನಿಧಿಗಳು ಇದೀಗ ನಳಿನ್ ಪರವಾಗಿ ಜೈಕಾರ ಹಾಕುತ್ತಿರುವುದು ಬಿಜೆಪಿಯನ್ನು ಮತ್ತೆ ಅಪಹಾಸ್ಯಕ್ಕೆ ತಳ್ಳಿದೆ. ನಳಿನ್ ಕುಮಾರ್ ಕಟೀಲ್ ಪರವಾಗಿ "ಜೈ ನಳಿನ್ ಅಣ್ಣ, ನಳಿನ್ ಕುಮಾರ್ ಕಟೀಲ್ ನಮ್ಮ ಹೆಮ್ಮೆ," ಎಂಬ ಪೋಸ್ಟ್ಗಳನ್ನು ಹಾಕುತ್ತಿರುವುದು ಬಿಜೆಪಿಯನ್ನು ಮತ್ತೆ ಅಪಹಾಸ್ಯಕ್ಕೆ ತಳ್ಳಿದೆ.

ಟ್ವೀಟ್ ಅಭಿಯಾನಕ್ಕೆ ಕರಾವಳಿಗರ ಸಜ್ಜು
ಸೆಪ್ಟೆಂಬರ್ 2ರಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳೂರಿಗೆ ಆಗಮಿಸಲಿದ್ದು, ನವಮಂಗಳೂರು ಬಂದರಿನಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಬಳಿಕ ಮಂಗಳೂರು ನಗರ ಹೊರವಲಯದ ಬಂಗ್ರ ಕೂಳೂರು ಗೋಲ್ಡ್ ಫಿಂಚ್ ಸಿಟಿ ಮೈದಾನದಲ್ಲಿ ಸಾರ್ವಜನಿಕ ಸಭೆ ಮಾಡಲಿದ್ದಾರೆ. ಈ ವೇಳೆ ಒಂದು ಲಕ್ಷಕ್ಕೂ ಅಧಿಕ ಜನರನ್ನು ಸೇರಿಸುವ ಯೋಜನೆಯನ್ನು ಬಿಜೆಪಿ ರೂಪಿಸಿದೆ. ಕಾರ್ಯಕ್ರಮದಲ್ಲಿ ನಳಿನ್ ಕುಮಾರ್ ಕಟೀಲ್ ವಿರುದ್ಧ ಘೋಷಣೆಗಳನ್ನು ಕೂಗುವ ಸಾಧ್ಯತೆಗಳು ಹೆಚ್ಚಾಗಿವೆ.

ಮತ್ತೊಂದೆಡೆ ಕಟೀಲ್ ಪರ ಪೋಸ್ಟರ್
ಈ ಹಿನ್ನೆಲೆಯಲ್ಲಿ ನಳಿನ್ ಕುಮಾರ್ ಕಟೀಲ್ ವಿರೋಧಿಗಳನ್ನು ಪ್ರತ್ಯೇಕಿಸುವ ಕಾರ್ಯತಂತ್ರಕ್ಕೆ ಬಿಜೆಪಿ ಮುಂದಾಗಿದೆ. ಜಿಲ್ಲೆಯ ಅಭಿವೃದ್ಧಿಗೆ ಉತ್ತಮ ಆಡಳಿತ ನಡೆಸುವ ಸಂಸದರ ಅಗತ್ಯ ಇದೆ ಎಂದು ಒತ್ತಾಯಗಳು ಜೋರಾಗಿದೆ. ಇದರ ನಡುವೆ ತುಳು ಭಾಷೆಗೆ ಸಾಂವಿಧಾನಿಕ ಮಾನ್ಯತೆ ಸಿಗಬೇಕು. ಅಧಿಕೃತ ರಾಜ್ಯ ಭಾಷೆ ಎಂದು ಘೋಷಣೆ ಆಗಬೇಕು ಎನ್ನುವ ಕೂಗುಗಳು ಕೇಳಿ ಬರುತ್ತಿವೆ.

ತುಳು ಸಂಘಟನೆಗಳ ಒಕ್ಕೂಟದ ಪ್ಲಾನ್
ಸೆಪ್ಟೆಂಬರ್ 2ರಂದು ಪ್ರಧಾನಿ ಮೋದಿ ಅವರು ಮಂಗಳೂರಿಗೆ ಭೇಟಿ ನೀಡಿದ ವೇಳೆ ತುಳು ಟ್ವೀಟ್ ಅಭಿಯಾನ ಮಾಡಲು ಸಿದ್ಧತೆ ನಾಡಿಕೊಂಡಿದ್ದಾರೆ. ಈ ಅಭಿಯಾನವು ಎಲ್ಲಾ ತುಳು ಸಂಘಟನೆಗಳ ಒಕ್ಕೂಟದ ವತಿಯಿಂದ ನಡೆಯಲಿದೆ.
#TuluOfficialinKA_KL_#TuluTo8thShedule ಹ್ಯಾಷ್ ಟ್ಯಾಗ್ನಲ್ಲಿ ಈ ಟ್ವೀಟ್ ಅಭಿಯಾನ ನಡೆಯಲಿದೆ. ಸೆಪ್ಟೆಂಬರ್ 1ರ ಮಧ್ಯರಾತ್ರಿ 12 ರಿಂದ ಸೆಪ್ಟೆಂಬರ್ 2ರ ಮಧ್ಯರಾತ್ರಿ 12 ಗಂಟೆಯವರೆಗೆ ಈ ಟ್ವೀಟ್ ಅಭಿಯಾನ ನಡೆಯಲಿದೆ. ಪ್ರಧಾನಿ ಅವರ ಗಮನ ಸೆಳೆಯಲು ಈ ಟ್ವೀಟ್ ಅಭಿಯಾನಕ್ಕೆ ಈಗಿನಿಂದಲೇ ಭರ್ಜರಿ ಸಿದ್ಧತೆಯನ್ನು ಮಾಡಿಕೊಂಡಿದ್ದಾರೆ.












Click it and Unblock the Notifications