ಜನಸ್ನೇಹಿ ಪೊಲೀಸ್ ವ್ಯವಸ್ಥೆ: ಮಂಗಳೂರು ಎಸ್ಪಿ ಭರವಸೆ
ಮಂಗಳೂರು, ಮೇ.24: ದಕ್ಷಿಣ ಕನ್ನಡ ಜಿಲ್ಲೆಯ ನೂತನ ಎಸ್ಪಿಯಾಗಿ ಸೋಮವಾರ ಅಧಿಕಾರ ಸ್ವೀಕರಿಸಿದ ಭೂಷಣ ಗುಲಾಬ್ ರಾವ್ ಬೊರಾಸೆ ಅವರು, 'ತಂತ್ರಜ್ಞಾನದ ಮೂಲಕ ಜನಸ್ನೇಹಿ ಪೊಲೀಸ್ ವ್ಯವಸ್ಥೆ ರೂಪಿಸುವುದಾಗಿ' ಹೇಳಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ಅನುಸರಿಸಿದ ಸುಧಾರಣಾ ಕ್ರಮಗಳನ್ನು ಮಂಗಳೂರಿನಲ್ಲೂ ಅಳವಡಿಸುವ ಆಶಯ ಹೊಂದಿದ್ದಾರೆ.
ಭೂಷಣ ಗುಲಾಬ್ ರಾವ್ ಬೊರಾಸೆ ಅವರು ಎಸ್ಪಿ ಡಾ. ಶರಣಪ್ಪ ಅವರಿಂದ ಅಧಿಕಾರ ಸ್ವೀಕರಿಸಿದರು. ಈ ಸಂದರ್ಭ ಎಎಸ್ಪಿ ವಿನ್ಸೆಂಟ್ ಶಾಂತರಾಜು ಉಪಸ್ಥಿತರಿದ್ದರು. ಮಾರ್ಚ್ 5, 2014ರಿಂದ ಜಿಲ್ಲಾ ಎಸ್ಪಿಯಾಗಿದ್ದ ಶರಣಪ್ಪ ಅವರು ಈಗ ಬೆಂಗಳೂರು ದಕ್ಷಿಣ ವಲಯದ ಡಿಸಿಪಿಯಾಗಿ ವರ್ಗಾವಣೆಯಾಗಿದ್ದಾರೆ.

2009ರ ಐಪಿಎಸ್ ಬ್ಯಾಚಿನ ಭೂಷಣ ಗುಲಾಬ್ ರಾವ್ ಬೊರಾಸೆ ಅವರು ಈ ಮೊದಲು ಬೆಂಗಳೂರು ಸಿಐಡಿ ಎಸ್ಪಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಮಹಾರಾಷ್ಟ್ರದ ಧುಲೆ ಜಿಲ್ಲೆಯವರಾದ ಬೊರಾಸೆ ಅವರು ಪುಣೆ ವಿಶ್ವ ವಿದ್ಯಾಲಯದಿಂದ ಕೆಮಿಕಲ್ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಜೆಮ್ಶೆಡ್ ಪುರದ ಎನ್ ಐಟಿಯಿಂದ ಎಂ ಟೆಕ್ ಗಳಿಸಿದ್ದಾರೆ. ಕಲಬುರಗಿಜಿಲ್ಲೆಯಲ್ಲಿ ಎಸಿಪಿಯಾಗಿ, ಮಂಡ್ಯ ಜಿಲ್ಲಾ ಎಸ್ಪಿಯಾಗಿ ಅನೇಕ ಸುಧಾರಣಾ ಕ್ರಮಗಳನ್ನು ಕೈಗೊಂಡಿದ್ದಾರೆ.
ಡಿಜಿಪಿ ಓಂ ಪ್ರಕಾಶ್ ಅವರ ಅಣತಿಯಂತೆ ಪೊಲೀಸ್ ಇಲಾಖೆಯಲ್ಲಿ ಸಾಫ್ಟ್ ವೇರ್ ಸ್ಪರ್ಶ ನೀಡಲು ಶ್ರಮಿಸಿದ್ದಾರೆ. ರಾಜ್ಯದ ಕ್ರೈಂ ರೆಕಾರ್ಡ್ಸ್ ಬ್ಯೂರೋ, ವೆಹಿಕಲ್ ಡಾಟಾ ಬೇಸ್, ಸಾರ್ವಜನಿಕರಿಂದ ದೂರು ಸ್ವೀಕಾರಕ್ಕಾಗಿ ಪ್ರತ್ಯೇಕ ವಾಟ್ಸಪ್ ನಂಬರ್ ಹೀಗೆ ಅನೇಕ ಪರಿಣಾಮಕಾರಿ ನಡೆ ಮೂಲಕ ಮಂಡ್ಯ ಜಿಲ್ಲೆಗೆ ಕೇಂದ್ರ ಸರ್ಕಾರ ನೀಡುವ 'ಚಿನ್ನದ ಪದಕ' ದೊರೆಯುವಂತೆ ಮಾಡಿದ್ದರು. ಈಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದೇ ರೀತಿ ತಂತ್ರಜ್ಞಾನ ಬಳಕೆ ಮಾಡಲು ಮುಂದಾಗಿದ್ದಾರೆ.












Click it and Unblock the Notifications