ಇರ್ದೆಯಲ್ಲಿ ಬತ್ತಿದ ಬೆಂದ್ರೆ ತೀರ್ಥ; ಜಲಕ್ಷಾಮದ ಆತಂಕ
ಮಂಗಳೂರು ಜೂನ್ 03: ಕಳೆದ ವರ್ಷ ಈ ಹೊತ್ತಿಗೆ ಕಡಲ ನಗರಿ ಮಂಗಳೂರಿನಲ್ಲಿ ದಶಕದಲ್ಲಿಯೇ ದಾಖಲೆಯ ಮಳೆ ಸುರಿದಿತ್ತು. ಕಳೆದ ಬಾರಿ ಮೇ 29ರಂದು 24 ಗಂಟೆಯಲ್ಲಿ ಬರೋಬ್ಬರಿ 360 ಮಿ.ಮೀ. ಮಳೆಯಾಗಿತ್ತು. ರಾಷ್ಟ್ರೀಯ ಹೆದ್ದಾರಿ 66ರ ಪಂಪ್ ವೆಲ್ ಜಂಕ್ಷನ್ ನಲ್ಲಿ ಮತ್ತು ರಾಷ್ಟ್ರೀಯ ಹೆದ್ದಾರಿ 75ರ ಪಡೀಲ್ ರೈಲ್ವೇ ಅಂಡರ್ ಪಾಸ್ನಲ್ಲಿ ಮತ್ತು ಕೊಟ್ಟಾರ ಚೌಕಿಯಲ್ಲಿ ಓವರ್ ಬ್ರಿಜ್ ಬಳಿ ರಸ್ತೆಗೆ ನೆರೆ ನೀರು ನುಗ್ಗಿದ್ದ ಪರಿಣಾಮ ನಗರ ಪ್ರವೇಶಿಸುವ ಮತ್ತು ನಗರದಿಂದ ಹೊರ ಹೋಗುವ ವಾಹನಗಳು ಸಂಚರಿಸಲಾಗದೆ ನಗರದ ಸಂಪರ್ಕ ಕಡಿತಗೊಂಡಿತ್ತು. ಕೇವಲ ಆರು ತಾಸಿನವರೆಗೆ ನಿರಂತರವಾಗಿ ಸುರಿದ ಮಹಾ ಮಳೆಗೆ 20.74 ಕೋಟಿ ರೂಪಾಯಿ ನಷ್ಟವಲ್ಲದೆ, 2 ಪ್ರಾಣಹಾನಿ ಉಂಟಾಗಿತ್ತು.
ಆದರೆ ಒಂದೇ ವರ್ಷದಲ್ಲಿ ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಈ ವರ್ಷ ಜಿಲ್ಲೆಯಲ್ಲಿ ಬರದ ವಾತಾವರಣ ಸೃಷ್ಠಿಯಾಗಿದೆ. ರಾಜ್ಯದಲ್ಲಿ ಅತೀ ಕಡಿಮೆ ಮಳೆ ಬಂದಂತಹ ಜಿಲ್ಲೆಗಳ ಪಟ್ಟಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯೂ ಇದೆ ಎನ್ನುವುದು ವಾಸ್ತವ. ಈ ಬಾರಿ ಕರಾವಳಿಯಲ್ಲಿ ಜಲಕ್ಷಾಮದ ಆತಂಕ ಎದುರಾಗಿದೆ. ಕರಾವಳಿಯ ಜಿಲ್ಲೆಗಳಲ್ಲಿ ಬಾವಿಗಳಲ್ಲಿನ ನೀರಿನ ಮಟ್ಟ ದಿಢೀರ್ ಕುಸಿತ ಕಂಡಿದ್ದು, ಜನರ ಆತಂಕಕ್ಕೆ ಕಾರಣವಾಗಿದೆ. ಮಳೆಯಾಗದೆ ಮೇಲ್ಮಟ್ಟದ ಭೂಮಿಯ ಪದರದಲ್ಲಿ ನೀರಿನ ಪಸೆ ಕೂಡ ಆರಿರುವುದರಿಂದ ತೋಟ, ಗದ್ದೆಗಳಿಗೆ ಬಾವಿಯಿಂದಲೇ ನೀರು ಹಾಯಿಸಲಾಗುತ್ತಿದ್ದು, ಅಂತರ್ಜಲ ಇನ್ನಷ್ಟು ಕುಸಿಯುತ್ತಿದೆ.
ಈ ನಡುವೆ ದಕ್ಷಿಣ ಭಾರತದ ಏಕೈಕ ಬಿಸಿನೀರಿನ ಬುಗ್ಗೆಯ ತಾಣವೂ ಬಿಸಿ ಆರಿದೆ. ಇದರಿಂದ ಸಾವಿರಾರು ಮಂದಿ ಪ್ರವಾಸಿಗರ ಆಕರ್ಷಣೆಯ ಕೇಂದ್ರವೂ ಆಗಿದ್ದ ಇರ್ದೆ - ಬೆಟ್ಟಂಪಾಡಿ ಗ್ರಾಮದ ಬೆಂದ್ರೆ ತೀರ್ಥ ನೀರಿಲ್ಲದೇ ಬತ್ತಿ ಹೋಗಿದೆ. ಒಂದು ಕಾಲದಲ್ಲಿ ಬೆಂದ್ರೆ ತೀರ್ಥಕ್ಕೆ ಪ್ರವಾಸಿಗರು ಗಣನೀಯ ಸಂಖ್ಯೆಯಲ್ಲಿ ಬರುತ್ತಿದ್ದರು.

ಬೆಂದ್ರೆ ತೀರ್ಥ ಬಿಸಿನೀರ ಬುಗ್ಗೆ ಇರುವ ಸ್ಥಳ 'ಇರ್ದೆ'. ಇದು ದಕ್ಷಿಣ ಕನ್ನಡ ಜಿಲ್ಲೆಯ, ಪುತ್ತೂರು ಸಮೀಪದಲ್ಲಿದೆ. ಪುತ್ತೂರಿನಿಂದ 15 ಕಿಲೋ ಮೀಟರ್ ದೂರದಲ್ಲಿದೆ. ಈ ಬುಗ್ಗೆಯಲ್ಲಿ ಗಂಟೆಗೆ 1350 ರಿಂದ 4600 ಲೀಟರ್ ಗಳಷ್ಟು ನೀರು ಚಿಮ್ಮುತ್ತಿತ್ತು. ಇಲ್ಲಿ ನೀರಿನ ಉಷ್ಣಾಂಶ 90 ರಿಂದ 106 ಫಾರನ್ ಹೀಟ್ ಇರುವುದಾಗಿ ದಾಖಲಿಸಲಾಗಿತ್ತು. ಆದರೆ ಈಗ ನೀರಿಲ್ಲದೆ ಬೆಂದ್ರೆ ತೀರ್ಥ ಸತ್ತು ಹೋಗಿದೆ.
ಈ ಹಿಂದೆ ಕೊಳದಲ್ಲಿರುವ ನೀರು ಬಿಸಿಯಾಗಿರುತ್ತಿದ್ದು, ಬೇಸಿಗೆಯಲ್ಲೂ ನೀರು ಧಾರಾಳವಾಗಿ ಇದ್ದು, ಮಳೆಗಾಲದಲ್ಲಿ ಕೊಳ ತುಂಬಿದರೂ ನೀರು ಮಾತ್ರ ಬಿಸಿಯಾಗಿಯೇ ಇರುತ್ತಿತ್ತು. ನೀರಿಗಾಗಿ ಯಾವಾಗ ಕೆರೆಯ ಪರಿಸರದಲ್ಲಿ ಕೊಳವೆ ಬಾವಿಯನ್ನು ತೆಗೆದರೋ ಅಂದಿನಿಂದ ಕೊಳದ ನೀರು ತಂಪಾಗಿ ಹೋಗಿತ್ತು. ಈಗ ಅಂತರ್ಜಲ ಕುಸಿದ ಪರಿಣಾಮ ಬೆಂದ್ರೆ ತೀರ್ಥ ಬತ್ತಿಹೋಗಿದೆ. ಇದಕ್ಕೆ ಅಂತರ್ಜಲ ಕುಸಿತ ನೇರ ಕಾರಣ ಎಂದು ಹೇಳಲಾಗಿದೆ.
ಅಂತರ್ಜಲ ನಿರ್ದೇಶನಾಲಯದ ಅಧ್ಯಯನ ಬಾವಿಗಳ ಮೀಟರ್ ರೀಡಿಂಗ್ ಆಧರಿಸಿ ದಕ್ಷಿಣ ಕನ್ನಡದಲ್ಲಿ 2014 ಆಗಸ್ಟ್ನಲ್ಲಿ, ಬೆಳ್ತಂಗಡಿಯಲ್ಲಿ ನೆಲಮಟ್ಟದಿಂದ 5.12 ಮೀ. ಕೆಳಗೆ ಇದ್ದ ಅಂತರ್ಜಲ ಮಟ್ಟ 2018 ಆಗಸ್ಟ್ಗೆ 8.63 ಮೀಟರ್ ಕೆಳಗೆ ಕುಸಿದಿದೆ. ಈ ವರ್ಷ ಮತ್ತಷ್ಟು ಕುಸಿತ ಕಂಡಿದೆ.












Click it and Unblock the Notifications