ನೆರೆ ಸಂತ್ರಸ್ತರಿಗೆ 1 ಲಕ್ಷ ರುಪಾಯಿ ದೇಣಿಗೆ ನೀಡಿದ ಬೆಳ್ತಂಗಡಿ ಆಟೋ ಚಾಲಕ
ಮಂಗಳೂರು, ಅಗಸ್ಟ್ 13: ಮಹಾರಾಷ್ಟ್ರ ಕನ್ನಡಿಗ ಪತ್ರಕರ್ತರ ಸಂಘ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಗಳ ಸಹಭಾಗಿತ್ವದಲ್ಲಿ ಕದ್ರಿಯ ಕೆಪಿಟಿಯಲ್ಲಿ ಜಿಲ್ಲಾಡಳಿತದಿಂದ ಆರಂಭಿಸಿರುವ ನೆರೆ ಸಾಮಗ್ರಿ ಸಂಗ್ರಹಣಾ ಕೇಂದ್ರಕ್ಕೆ ಒಂದು ಲಕ್ಷ ಮೌಲ್ಯದ ಮಿನರಲ್ ವಾಟರ್ ಹಾಗೂ ಆಹಾರ ಸಾಮಗ್ರಿಗಳನ್ನು ಭಾನುವಾರ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಹಸ್ತಾಂತರಿಸಲಾಯಿತು.
ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನೆರೆ ಸಂತ್ರಸ್ತರಿಗೆ ಅಗತ್ಯವಿರುವ ಬಿಸ್ಕೆಟ್, ಕುಕೀಸ್, ಮಿನರಲ್ ವಾಟರ್ ಸೇರಿದಂತೆ ಆಹಾರ ಸಾಮಗ್ರಿಗಳನ್ನು ನೆರೆ ಸಾಮಗ್ರಿ ಸಂಗ್ರಹಣಾ ಕೇಂದ್ರಕ್ಕೆ ಹಸ್ತಾಂತರ ಮಾಡಲಾಗಿದೆ.
ಈ ಮಧ್ಯೆ ಆಟೋ ಚಾಲಕರೊಬ್ಬರು ನೆರೆ ಸಂತ್ರಸ್ತರಿಗೆ 1 ಲಕ್ಷ ರುಪಾಯಿ ದೇಣಿಗೆ ನೀಡಿದ ಪ್ರಸಂಗ ಬೆಳಕಿಗೆ ಬಂದಿದೆ. ಬೆಳ್ತಂಗಡಿಯ ಆಟೋ ಚಾಲಕ ನೆರೆ ಸಂತ್ರಸ್ತರಿಗೆ ಬರೋಬ್ಬರಿ 1 ಲಕ್ಷ ರುಪಾಯಿ ದೇಣಿಗೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ವೃತ್ತಿಯಲ್ಲಿ ಆಟೋ ಚಾಲಕರಾಗಿರುವ ಹೊನ್ನಪ್ಪ ಗೌಡ ನೆರೆ ಸಂತ್ರಸ್ತರಿಗೆ ಸಹಾಯ ಹಸ್ತ ಚಾಚಿದವರು. ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು ನೆರ ಸಂತ್ರಸ್ತರಿಗೆ ನೆರವಾಗಲು ಸಾರ್ವಜನಿಕರಲ್ಲಿ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಶಾಸಕರ ಮನವಿಗೆ ಸ್ಪಂದಿಸಿದ ಆಟೋ ಚಾಲಕ ಹೊನಪ್ಪ ಗೌಡ ಅವರು 1 ಲಕ್ಷ ರುಪಾಯಿ ಸಹಾಯವನ್ನು ಶಾಸಕರ ಕಚೇರಿಯಲ್ಲಿ ನೀಡಿದ್ದಾರೆ.












Click it and Unblock the Notifications