ಕತಾರ್ನಲ್ಲಿ ಸಂಕಷ್ಟದಲ್ಲಿದ್ದ ಯುವಕ ಬೆಳ್ತಂಗಡಿಗೆ ವಾಪಸ್
ಮಂಗಳೂರು, ಆ.08 : ಕತಾರ್ನಲ್ಲಿ ಉದ್ಯೋಗದಲ್ಲಿದ್ದಾತನಿಂದ ವಂಚನೆಗೊಳಗಾಗಿ ಸಂಕಷ್ಟದಲ್ಲಿದ್ದ ಬೆಳ್ತಂಗಡಿ ಯುವಕ ತಾಯ್ನಾಡಿಗೆ ಸುರಕ್ಷಿತವಾಗಿ ಮರಳಿದ್ದಾನೆ. ಹೆಚ್ಚು ಸಂಬಳ ನೀಡುವ ಉದ್ಯೋಗದ ಆಮಿಷವೊಡ್ಡಿ ಯುವಕನನ್ನು ಕತಾರ್ ಗೆ ಕರೆಸಿಕೊಳ್ಳಲಾಗಿತ್ತು.
ಬೆಳ್ತಂಗಡಿ ತಾಲೂಕಿನ ಕಿಲ್ಲೂರು ನಾಡದ ಅಬ್ದುಲ್ ಹಮೀದ್ ತಾಯ್ನಾಡಿಗೆ ಮರಳಿದ ಯುವಕ. ಕತಾರ್ ಕೆಸಿಎಫ್ ತಂಡದ ಸದಸ್ಯರು ಅಬ್ದುಲ್ ನನ್ನು ರಕ್ಷಿಸಿ ಸುರಕ್ಷಿತವಾಗಿ ತಾಯ್ನಾಡಿಗೆ ಕಳುಹಿಸಿಕೊಟ್ಟಿದ್ದಾರೆ.
ಅಬ್ದುಲ್ ಹಮೀದ್ ಕತಾರ್ ನಲ್ಲಿ ಚಾಲಕನಾಗಿ ಕೆಲ ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಅಲ್ಲಿನ ಪರಿಚಯದ ವ್ಯಕ್ತಿಯೋರ್ವ ಹೆಚ್ಚಿನ ವೇತನ ನೀಡುವ ಅಮಿಷವೊಡ್ಡಿ ಘನವಾಹನ ಚಾಲನೆ ಉದ್ಯೋಗಕ್ಕೆ ಕರೆಸಿಕೊಂಡಿದ್ದ.
ಆರಂಭದಲ್ಲಿ ಸುಲಭವಾಗಿದ್ದ ಕೆಲಸ ಬಳಿಕ 20 ಗಂಟೆಗಳಷ್ಟು ಕಾಲ ದುಡಿಯಬೇಕಾದ ಪರಿಸ್ಥಿತಿ ಎದುರಾಗಿತ್ತು. ಕಂಪೆನಿಯವರಲ್ಲಿ ಅಂಗಲಾಚಿದರೂ ಕೆಲಸದಿಂದ ಬಿಡುಗಡೆ ಮಾಡಲಿಲ್ಲ.ರಾಯಭಾರಿ ಕಚೇರಿಗೆ ಅಲೆದಾಡಿದರೂ ಪ್ರಯೋಜನವಾಗಲಿಲ್ಲ.
ಅಬ್ದುಲ್ ಹಮೀದ್ ಅವರ ಸಂಕಷ್ಟ ಕೆಸಿಎಫ್ ನಾಯಕರ ಗಮನಕ್ಕೆ ಬಂದಿತ್ತು. ತಕ್ಷಣ ಕಾರ್ಯ ಪ್ರವೃತ್ತರಾದ ಕೆಸಿಎಫ್ ತಂಡದ ಕಾರ್ಯದರ್ಶಿ ಅಬ್ದುಲ್ ರಹೀಮ್ ಮತ್ತು ಸಾಂತ್ವನ ವಿಭಾಗದ ನಾಯಕ ಅಬ್ದುಲ್ ರಝಾಕ್ ಮುಂಡ್ಕೂರು ಸೇರಿಕೊಂಡು ಫಾರೂಕ್ ಕೃಷ್ಣಾಪುರ ಮತ್ತು ಇಮ್ರಾನ್ ಕೂಳೂರು ಅವರ ಸಹಕಾರದೊಂದಿಗೆ ಅಬ್ದುಲ್ ಹಮೀದ್ ಅವರನ್ನು ತಾಯ್ನಾಡಿಗೆ ಕಳುಹಿಸಿಕೊಟ್ಟಿದ್ದಾರೆ.