ಮಂಗಳೂರಲ್ಲಿ ಹಲ್ಲೆಗೊಳಗಾದ ಬಷೀರ್ ಸ್ಥಿತಿ ಅತ್ಯಂತ ಗಂಭೀರ
ಮಂಗಳೂರು, ಜನವರಿ 06: ನಗರದ ಕೊಟ್ಟಾರ ಚೌಕಿಯ ಬಳಿ ಆಗಂತುಕರಿಂದ ಹಲ್ಲೆಗೆ ಒಳಗಾಗಿ ಮಂಗಳೂರಿನ ಎ.ಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಶೀರ್ ಅತ್ಯಂತ ಗಂಭೀರ ಸ್ಥಿತಿಯಲ್ಲಿದ್ದಾರೆ.
ದೀಪಕ್ ರಾವ್ ಕೊಲೆ ನಡೆದ ದಿನವೇ ಸಂಜೆ ವೇಳೆ ಅಂಗಡಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಬಷೀರ್ ಅವರ ಮೇಲೆ ಅಗಂತುಕರು ಕತ್ತಿಗಳೊಂದಿಗೆ ದಾಳಿ ಸತತ 17 ಬಾರಿ ಅವರ ಮೇಲೆ ಹಲ್ಲೆ ನಡೆಸಿದ್ದರು.
ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತಿದ್ದ ಬಷೀರ್ ಅವರನ್ನು ಶೇಖರ್ ಮತ್ತು ರಾಹುಲ್ ಎಂಬ ಹಿಂದೂ ಯುವಕರು ಆಸ್ಪತ್ರೆಗೆ ಸೇರಿಸಿದ್ದರು. ಬಷೀರ್ ಕೊಲೆ ಯತ್ನಕ್ಕೂ ಕೋಮು ದ್ವೇಷವೇ ಕಾರಣ ಎನ್ನಲಾಗುತ್ತಿದೆ.
ಬಷೀರ್ ಸ್ಥಿತಿ ತೀರಾ ಚಿಂತಾಜನಕವಾಗಿದ್ದು, ಅವರ ತಲೆಗೆ, ಕುತ್ತಿಗೆಗೆ ತೀರ್ವ ಪೆಟ್ಟು ಬಿದ್ದಿದೆ, ಜೊತೆಗೆ ಅವರ ಮೂತ್ರಪಿಂಡ, ಅನ್ನನಾಳ ಮತ್ತು ಶ್ವಾಸಕೋಶಗಳು ಕತ್ತರಿಸಿಹೋಗಿವೆ ಎಂದು ವೈದ್ಯರು ಹೇಳಿದ್ದು, ಪ್ರಸ್ತುತ ಬಷೀರ್ ಅವರಿಗೆ ಕೃತಕ ಉಸಿರಾಟದ ವ್ಯವಸ್ಥೆ ನೀಡಲಾಗಿದೆ ಎಂದಿದ್ದಾರೆ.

ತೀರ್ವ ನಿಗಾ ಘಟಕದಲ್ಲಿರುವ ಬಷೀರ್ ಚಿಕಿತ್ಸೆಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಆಗಾಗ ಕಣ್ಣು ತೆರೆಯುತ್ತಾರೆ, ಕಾಲು ಅಲುಗಿಸುತ್ತಿದ್ದಾರೆ ಅಷ್ಟೆ, ಆದರೆ ವೈದ್ಯರ ತಂಡ ಇನ್ನೂ ಭರವಸೆ ಕೈಚೆಲ್ಲಿಲ್ಲ, ಬಷೀರ್ ಜೀವ ಉಳಿಸಲು ಸತತ ಪ್ರಯತ್ನ ಮಾಡುತ್ತಿದ್ದೇವೆ ಎಂದಿದ್ದಾರೆ.
ಸಚಿವರಾದ ಯು.ಟಿ.ಖಾದರ್ ಮತ್ತು ಶಾಸಕ ಮೊಯಿದ್ದೀನ್ ಬಾವಾ ಅವರು ಎ.ಜೆ.ಆಸ್ಪತ್ರೆಗೆ ಭೇಟಿ ನಿಡಿದ್ದು, ಬಷೀರ್ ಅವರ ಆರೋಗ್ಯ ಸ್ಥಿತಿಯ ಬಗ್ಗೆ ವೈದ್ಯರಿಂದ ಮಾಹಿತಿ ಪಡೆದಿದ್ದಾರೆ. ಬಷೀರ್ ಅವರ ಚಿಕಿತ್ಸಾವೆಚ್ಚವನ್ನು ಸರ್ಕಾರದ ವತಿಯಿಂದ ಭರಿಸಲಾಗುವುದು ಎಂದು ಬಾವಾ ಅವರು ತಿಳಿಸಿದ್ದಾರೆ.
ಬಷೀರ್ ಕೊಲೆ ಯತ್ನದ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಬಾವಾ ಅವರು ಕರಾವಳಿಯಲ್ಲಿ ಆಗುತ್ತಿರುವ ಸರಣಿ ಕೊಲೆಗಳ ಬಗ್ಗೆ ತೀರ್ವ ಬೇಸರ ವ್ಯಕ್ತಪಡಿಸಿದ್ದಾರೆ. ಬಷೀರ್ ಕೊಲೆಯ ಬಗ್ಗೆ ಯಾವುದೇ ಪಕ್ಷ, ಸಂಘಟನೆಯ ಬಗ್ಗೆ ಆರೋಪ ಮಾಡುವುದಿಲ್ಲ, ತನಿಖೆ ಮುಗಿದ ನಂತರವಷ್ಟೆ ಆ ಬಗ್ಗೆ ಪ್ರತಿಕ್ರಿಯಿಸುತ್ತೇನೆ ಎಂದು ಜವಾಬ್ದಾರಿಯುತ ಹೇಳಿಕೆ ನೀಡಿದ್ದಾರೆ.
ಇದೇ ಸಮಯದಲ್ಲಿ ದೀಪಕ್ ರಾವ್ ಕೊಲೆಯ ಬಗ್ಗೆಯೂ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಬಾವಾ ಅವರು, ದೀಪಕ್ ಅವರ ಕೊಲೆ ದುರಾದೃಷ್ಟ ರಕ್ತದಲ್ಲಿ ರಾಜಕೀಯ ಮಾಡುವ ಪ್ರವೃತ್ರಿ ಯಾವ ಪಕ್ಷಕ್ಕೂ ಬೇಡ, ನಾನು ದೀಪಕ್ ಅವರ ಶವಯಾತ್ರೆಯಲ್ಲಿ ಪಾಲ್ಗೊಳ್ಳಲು ಹೊರಟಿದ್ದೆ ಆದರೆ ಪೊಲೀಸರು ಬೇಡವೆಂದ ಕಾರಣ ನಾನು ಹೋಗಲಾಗಲಿಲ್ಲ, ಆದರೆ ಆ ನಂತರ ಅವರ ಕುಟುಂಬದವರನ್ನು ಭೇಟಿ ಆಗಿ ಸಾಂತ್ವಾನ ಹೇಳಿದ್ದೇನೆ ಎಂದರು.












Click it and Unblock the Notifications