ಮಂಗಳೂರು: 11ರ ಪೋರ ವೈಶಾಖ್ ಗೆ ಕಚ್ಚಿದ್ದ ಹೆಬ್ಬಾವು ಸೆರೆ
ಮಂಗಳೂರು, ಅಕ್ಟೋಬರ್. 20 : ಸಜಿಪ ಸಮೀಪ ಕೊಳಕೆ ಕಡೂರು ಆಸುಪಾಸಿನಲ್ಲಿ ಹಲವು ದಿನಗಳಿಂದ ಬೀಡು ಬಿಟ್ಟಿದ್ದ ಹೆಬ್ಬಾವೊಂದನ್ನು ಬುಧವಾರ ರಾತ್ರಿ ಗ್ರಾಮಸ್ಥರು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದ ಅಲ್ಲಿನ ನಿವಾಸಿಗಳು ನಿಟ್ಟುಸಿರು ಬಿಟ್ಟಿದ್ದಾರೆ.
ಸಜಿಪ ಸಮೀಪ ಕೊಳಕೆ ಕಡೂರು ಎಂಬಲ್ಲಿ 11ರ ಪೋರ ವೈಶಾಖ್ ಹೆಬ್ಬಾವಿನೊಂದಿಗೆ ಸೆಣಸಾಡಿ ಪ್ರಾಣಾಪಾಯದಿಂದ ಪಾರಾಗಿ ಬಂದಿದ್ದನ್ನು ನೀವು ಈಗಾಗಲೇ ಓದಿರಬಹುದು. ಅದೇ ಹಾವು ಅಲ್ಲಿಯೇ ಸುಳಿದಾಡುತಿದ್ದನ್ನು ಕಂಡ ಗ್ರಾಮಸ್ಥರು ಹೆಬ್ಬಾವನ್ನು ಯಶಸ್ವಿಯಾಗಿ ಹಿಡಿದು ಅರಣ್ಯ ಇಲಾಖೆ ಒಪ್ಪಿಸಿದ್ದಾರೆ. [ಹೆಬ್ಬಾವಿನೊಂದಿಗೆ ಕಾದಾಡಿ ಗೆದ್ದ 11ರ ಪೋರ!]

ಹಿಂದಿನ ಘಟನೆ: ಅಕ್ಟೋಬರ್ 14 ರಂದು ವೈಶಾಕ್ ತನ್ನ ಅಜ್ಜಿ ಮನೆಗೆ ಕಾಲು ದಾರಿಯಲ್ಲಿ ಹೋಗುತ್ತಿದ್ದ ವೇಳೆ ಪೊದೆಯಲ್ಲಿದ್ದ ಹೆಬ್ಬಾವೊಂದು ದಾಳಿಮಾಡಿತ್ತು. ಇನ್ನೇನು ಹೆಬ್ಟಾವು ಬಾಲಕನ ಕೈ, ಕಾಲುಗಳಿಗೆ ಬಾಯಿ ಹಾಕಿ ನುಂಗಲು ಪ್ರಯತ್ನಿಸುತ್ತಿದ್ದಂತಯೇ ವೈಶಾಕ್ ಧೈರ್ಯದಿಂದ ಪಕ್ಕದಲ್ಲಿದ್ದ ಕಲ್ಲೊಂದನ್ನು ಕೈಗೆತ್ತಿಕೊಂಡು ಹಾವಿನ ಮುಖಕ್ಕೆ ಜಜ್ಜಿದ್ದಾನೆ.
ಈ ಪೋರ ಕೊಟ್ಟ ಏಟಿಗೆ ಹೆಬ್ಬಾವು ತೀವ್ರ ಗಾಯಗೊಂಡು ಈತನ ಕೈಯನ್ನು ಬಿಟ್ಟಿದೆ. ಹೀಗೆ ಸಾಹಸ ಮೆರೆದ ಬಾಲಕ ಪ್ರಾಣಾಪಾಯದಿಂದ ಪಾರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ.

ಇಷ್ಟಾಗಿದ್ದಲ್ಲದೆ ಬಾಲಕನ ಮನೆ ಸಮೀಪ ಅದೇ ಹೆಬ್ಬಾವು ಕಾಣಿಸಿಕೊಂಡಿದೆ. ಇದರಿಂದ ವೈಶಾಖ್ ಮನೆಯವರು ಹಾಗೂ ಗ್ರಾಮಸ್ಥರು ಭಯ ಬೀತರಾಗಿದ್ದರು. ಕೊನೆಗೆ ಗ್ರಾಮಸ್ಥರು ಹೆಬ್ಬಾವನ್ನು ಹಿಡಿಯಲು ಮುಂದಾಗಿದ್ದಾರೆ.
ಈ ವೇಳೆ ಜಗದೀಶ್ ಮತ್ತು ಬಾಲಕೃಷ್ಣ ಎಂಬವರಿಗೆ ಹಾವು ಕಚ್ಚಿದ್ದು ಅವರು ಬಂಟವಾಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶತಾಯಗತಾಯವಾಗಿ ಹೆಬ್ಬಾವನ್ನು ಹಿಡಿದ ಗ್ರಾಮಸ್ಥರು ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ. ಇದರಿಂದ ವೈಶಾಖ್ ಮತ್ತು ಗ್ರಾಮದ ಜನರು ನಿಟ್ಟುಸಿರು ಬಿಟ್ಟಿದ್ದಾರೆ.












Click it and Unblock the Notifications