ಸೆ. 29 ರಂದು ಮಂಗಳೂರಿನಲ್ಲಿ ಆತ್ಯಾಕರ್ಷಕ ಹುಲಿವೇಷ ನರ್ತನ ಸ್ಪರ್ಧೆ
ಮಂಗಳೂರು, ಸೆಪ್ಟೆಂಬರ್ 28: ನವರಾತ್ರಿ, ಮಹಾನವಮಿ ಎಂದರೆ ಸಾಕು ಕರಾವಳಿ ಜನರಿಗೆ ಥಟ್ಟನೆ ನೆನಪಾಗುವುದು 'ಪಿಲಿ ನಲಿಕೆ' (ಹುಲಿ ಕುಣಿತ) ಕುಣಿತ. ನವರಾತ್ರಿ ಆರಂಭವಾಗುತ್ತಿದ್ದಂತೆ ಥೇಟ್ ಹುಲಿಯಂತೇ ಕಾಣುವ ವೇಷಧಾರಿಗಳಿಂದ ರಸ್ತೆ-ವೃತ್ತಗಳಲ್ಲಿ ವಿಶಿಷ್ಟ ನರ್ತನ ಕಾಣಬಹುದು.
ಮಂಗಳೂರು ದಸರಾ ವೇಳೆ ರಥಬೀದಿ ವೆಂಕಟರಮಣ ದೇವಸ್ಥಾನ, ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನ, ಬೋಳಾರ ಮಂಗಳಾದೇವಿ ದೇವಸ್ಥಾನಗಳಲ್ಲಿ ನವರಾತ್ರಿ ಆರಂಭ ಮತ್ತು ದಸರಾ ಮೆರವಣಿಗೆಯಲ್ಲಿ ಹುಲಿ ಕುಣಿತ ಆಕರ್ಷಣೆಯಾಗಿರುತ್ತದೆ.
ಹುಲಿವೇಷ ತುಳುನಾಡಿನ ಸಂಪ್ರದಾಯಿಕ ಕಲೆಯಲ್ಲಿ ಒಂದಾಗಿದೆ. ಹುಲಿವೇಷ ನರ್ತನವನ್ನು ಪರಿಚಯಿಸುವ, ಬೆಳೆಸುವ, ಉಳಿಸುವ ನಿಟ್ಟಿನಲ್ಲಿ ವೇದಿಕೆಯೊಂದು ಸಿದ್ದಗೊಂಡಿದೆ.
ಹುಲಿವೇಷ ನರ್ತನ ಸ್ಪರ್ಧೆ
ಹೌದು, ಮಂಗಳೂರಿನಲ್ಲಿ ಒಂದು ಕಡೆ ವೈಭವದ ದಸರಾ ಮಹೋತ್ಸವ ನಡೆಯುತ್ತಿದ್ದರೆ ಇನ್ನೊಂದು ಕಡೆ ಹುಲಿವೇಷ ನರ್ತನ ಕಾರ್ಯಕ್ರಮಕ್ಕೆ ಅದ್ದೂರಿಯ ವೇದಿಕೆ ಸಿದ್ದಗೊಳ್ಳುತ್ತಿದೆ. ಮಂಗಳೂರು ಯುವ ಕಾಂಗ್ರೆಸ್ ಮುಖಂಡ ಮಿಥುನ್ ರೈ ಅವರ ಸಾರಥ್ಯದಲ್ಲಿ ಸತತ ನಾಲ್ಕನೇ ವರ್ಷ ಈ ಹುಲಿವೇಷ ನರ್ತನ ಸ್ಪರ್ಧೆ ನಡೆಯುತ್ತಿದೆ.
ಒಟ್ಟು ಹತ್ತು ಹುಲಿವೇಷ ತಂಡವನ್ನು ಆಹ್ವಾನಿಸಿ ಪಿಲಿನಲಿಕೆ (ಹುಲಿವೇಷ ನರ್ತನ) ಸ್ಪರ್ಧೆಯನ್ನು ನಡೆಸಲಾಗುತ್ತಿದೆ.
ಮಂಗಳಾ ಕ್ರೀಡಾಂಗಣದಲ್ಲಿ ಸ್ಪರ್ಧೆ
ನಗರದ ಮಂಗಳಾ ಕ್ರೀಡಾಂಗಣದ ವಾಲಿಬಾಲ್ ಮೈದಾನದಲ್ಲಿ ಇದೇ ಸೆಪ್ಟೆಂಬರ್ 29 ರಂದು ಕಾರ್ಯಕ್ರಮ ಅಯೋಜಿಸಲಾಗಿದೆ. ಈಗಾಗಲೇ ಮೂರು ಆವೃತಿಯ ಹುಲಿವೇಷ ಸ್ಪರ್ಧೆಯನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದು, ಕರಾವಳಿಯಾದ್ಯಂತ ಉತ್ತಮ ಸ್ಪಂದನೆ ದೊರೆತಿದೆ.
ಪ್ರಸಿದ್ಧಿ ಪಡೆದ ಹುಲಿವೇಷ
ಈ ಸ್ಪರ್ಧೆಯಿಂದಾಗಿ ತುಳುನಾಡಿನಲ್ಲಿ ಹುಲಿವೇಷ ನರ್ತನ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಸೆಪ್ಟೆಂಬರ್ 29 ಬೆಳಗ್ಗೆ11 ಗಂಟೆಗೆ ಹುಲಿವೇಷ ಸ್ಪರ್ಧೆ ಆರಂಭಗೊಳ್ಳಲಿದೆ. ಸಂಜೆಯ ಹೊತ್ತಿನಲ್ಲಿ ಸ್ಪರ್ಧೆ ಸಮಾರೋಪಗೊಳ್ಳಲಿದೆ.
2 ಲಕ್ಷ ರೂಪಾಯಿ ಪುರಸ್ಕಾರ
ಪ್ರತಿ ತಂಡಕ್ಕೆ 22 ನಿಮಿಷಗಳ ಕಾಲಾವಕಾಶ ಕೊಡಲಾಗಿದ್ದು ವಿಜೇತ ತಂಡಕ್ಕೆ ಪ್ರಶಸ್ತಿಯ ಜೊತೆಗೆ ಸುಮಾರು 2 ಲಕ್ಷ ರೂ. ಪುರಸ್ಕಾರ ದೊರೆಯಲಿದೆ. ಅಲ್ಲದೆ ಇತರ ವಿಭಾಗದಲ್ಲಿ ಅತ್ಯುತ್ತಮ ಮರಿಹುಲಿ, ಬಣ್ಣಗಾರಿಕೆ, ಅಕ್ಕಿ ಮುಡಿ ಹಾರಿಸುವುದು, ತಾಸೆ ವಿಭಾಗಕ್ಕೂ ವಿಶೇಷ ಬಹುಮಾನ ನೀಡಲಾಗುವುದು.
ಕಾರ್ಯಕ್ರಮದಲ್ಲಿ ಉಡುಪಿ ಶೀರೂರು ಮಠಧೀಶರಾದ ಲಕ್ಷ್ಮೀವರ ತೀರ್ಥ ಶ್ರೀ ಪಾದರು, ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ , ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ. ಚಲನಚಿತ್ರ ತಾರೆಯರು ಈ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ತುಂಬಲಿದ್ದಾರೆ. ಒಟ್ಟಿನಲ್ಲಿ ನಾಲ್ಕನೇ ಆವೃತ್ತಿಯ ಪಿಲಿನಲಿಕೆ ಸ್ಪರ್ಧೆ ಸಾಕಷ್ಟು ಕುತೂಹಲ ಮೂಡಿಸಿದೆ.