ವೇಣೂರಿನ ಮಹಾವೈರಾಗಿಗೆ ಮಹಾಮಜ್ಜನ ಸಂಭ್ರಮ: 12 ವರ್ಷಗಳ ಬಳಿಕ ಅದ್ಧೂರಿ ಮಹಾಮಸ್ತಕಾಭಿಷೇಕ
ಮಂಗಳೂರು, ಫೆಬ್ರವರಿ 23: ನೂರಾರು ವರ್ಷಗಳ ಇತಿಹಾಸವನ್ನು ಹೊಂದಿರುವ ವೇಣೂರು ಬಾಹುಬಲಿ ಸ್ವಾಮಿಗೆ ಮಹಾ ಮಸ್ತಕಾಭಿಷೇಕ ಆರಂಭವಾಗಿದೆ.ವೈರಾಗಿಗೆ ಮಹಾಮಜ್ಜನ ಮಾರ್ಚ್ 1 ತನಕ ವಿಜೃಂಭಣೆಯಿಂದ ನಡೆಯಲಿದ್ದು, ಪ್ರಥಮ ದಿನವೇ ಸಾವಿರಾರು ಜಿನ ಭಕ್ತರು ಈ ಸಂಭ್ರಮದಲ್ಲಿ ಭಾಗವಹಿಸಿದ್ದಾರೆ.
ವಿಶ್ವದ ಏಕೈಕ ಮಂದಸ್ಮಿತ ಬಾಹುಬಲಿ ಎಂದೇ ಖ್ಯಾತಿಯಾಗಿರುವ ವೇಣೂರು ಬಾಹುಬಲಿಗೆ ಪರಿಶುದ್ಧ ಅಷ್ಟದ್ರವ್ಯಗಂಧ ಅಭಿಷೇಕ ನಡೆಯಲಿದೆ. ಕರ್ನಾಟಕದ ಪ್ರಸಿದ್ದ ಏಕಶೀಲಾ ಬಾಹುಬಲಿ ವಿಗ್ರಹದಲ್ಲಿ ಒಂದಾದ ವೇಣೂರು ಬಾಹುಬಲಿ ಸ್ವಾಮಿಗೆ ಮಹಾ ಮಜ್ಜನಕ್ಕೆ ಆರಂಭವಾಗಿದೆ.

12 ವರ್ಷಗಳಿಗೊಮ್ಮೆ ನಡೆಯುವ ಈ ಮಹಾಮಸ್ತಕಭಿಷೇಕ್ಕೆ ವೇಣೂರು ಸಂಪೂರ್ಣ ಸಿದ್ದಗೊಂಡಿದೆ. ಬಾಹುಬಲಿ ಮೂರ್ತಿಗೆ ಮೊದಲ ನಾಲ್ಕು ದಿನ 108 ಕಲಶ, ಬಳಿಕ ಮೂರು ದಿನ 216 ಕಲಶ, ಎಂಟನೇ ದಿನ 504 ಕಲಶ ಬಳಿಕ 9 ದಿನ 1008 ಕಲಶಗಳ ಅಭಿಷೇಕ ನಡೆಯಲಿದೆ. ಇದರ ಜೊತೆಗೆ ಜಲ, ಸೀಯಾಳ, ಹಾಲು, ಇಕ್ಷುರಸ, ಕಲ್ಕರಸ, ಅರಿಶಿಣ ಹುಡಿ, ಕಷಾಯ, ಗಂಧ, ಕೇಸರಿ, ಚಂದನ, ಅಷ್ಟಗಂಧ, ಮೊದಲಾದ ದ್ರವ್ಯಗಳಿಂದ ಅಭಿಷೇಕ ನಡೆದು ಬಳಿಕ ಪುಷ್ಪವೃಷ್ಠಿಯಿಂದ ಅಭಿಷೇಕ ನಡೆಯಲಿದೆ..
35 ಅಡಿ ಎತ್ತರ ಏಕಶೀಲಾ ವಿಗ್ರಹದ ತ್ಯಾಗಮೂರ್ತಿಗೆ ಮಹಾಮಜ್ಜನಕ್ಕೆ ಸುಸಜ್ಜಿತವಾದ ಅಟ್ಟಳಿಗೆ ನಿರ್ಮಾಣವಾಗಿದ್ದು , 500ಕ್ಕೂ ಅಧಿಕ ಜನ ನಿಲ್ಲುವ ಸಾಮಾರ್ಥ್ಯವನ್ನು ಹೊಂದಿದೆ. ದೇಶದ ಮೂಲೆ ಮೂಲೆಯಿಂದ ಭಕ್ತಾಧಿಗಳು ಆಗಮಿಸುತ್ತಿದ್ದು, ವೇಣೂರು ನಗರಿ ಮಹಾಮಜ್ಜನಕ್ಕೆ ಸರ್ವಸನ್ನಧ್ದವಾಗಿದೆ.
ವೇಣೂರಿನ ಮಹಾವೈರಾಗಿಯ ಕಥೆಯೇನು..?
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರು ಎಂಬ ಗ್ರಾಮದ ಫಲ್ಗುಣಿ ನದಿ ತೀರದಲ್ಲಿ ಕ್ರಿ.ಶ. 1604ರಲ್ಲಿ ತುಳುನಾಡಿನ ರಾಜ ಪರಂಪರೆಯಲ್ಲಿ ಮಹತ್ವದ ಸ್ಥಾನ ಪಡೆದಿರುವ ವೇಣೂರಿನ ಅಜಿಲ ವಂಶದ ಅಳದಂಗಡಿ ಅರಮನೆಯ ಅಜಿಲ ಅರಸರಾದ ನಾಲ್ಕನೇ ತಿಮ್ಮಣ್ಣ ಅಜಿಲರಸರು ಪ್ರತಿಷ್ಠಾಪಿಸಿದ್ದರು.

ಭಗವಾನ್ ಬಾಹುಬಲಿಗೆ 12 ವರ್ಷಗಳಿಗೊಮ್ಮೆ ನಡೆವ ಮಹಾಮಸ್ತಕಾಭಿಷೇಕವು ಗುರುವಾರದಿಂದ ಮಾರ್ಚ್ ಒಂದರವರೆಗೆ ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ.ಪದ್ಮಪ್ರಸಾದ್ ಅಜಿಲ ಅವರ ಅಧ್ಯಕ್ಷತೆ, ಶ್ರೇಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಅವರ ಅಧ್ಯಕ್ಷತೆ ಹಾಗೂ ಮೂಡುಬಿದಿರೆ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಅದ್ಧೂರಿಯಾಗಿ ನಡೆಯಲಿದೆ.
ಮಹಾಮಸ್ತಕಾಭಿಷೇಕದ ಸಂಭ್ರಮದಲ್ಲಿ ವೇಣೂರಿಗೆ ವೇಣೂರೇ ಅಲಂಕೃತವಾಗಿದೆ. ಊಟ ವಸತಿ ಸಹಿತ ಮನೋರಂಜಾ ಕಾರ್ಯಕ್ರಮಗಳು ನಡೆಯುತ್ತಿದೆ.ಒಟ್ಟು ಒಂದುಸಾವಿರ ಜನ ಈ ಮಹಾಮಸ್ತಕಾಭಿಷೇಕದ ವೈಭವವನ್ನು ಕೂತು ನೋಡಿ ಸಂಭ್ರಮಿಸಲು ಅವಕಾಶ ಮಾಡಿಕೊಡಲಾಗಿದೆ.












Click it and Unblock the Notifications