ತಾಂತ್ರಿಕ ದೋಷ, ಪೈಲಟ್ ಸಮಸ್ಯೆ:ಏರ್ ಇಂಡಿಯಾ ಪ್ರಯಾಣಿಕರಿಗೆ ನಿಲ್ದಾಣವೇ ಗತಿಯಾಯ್ತು!
ಮಂಗಳೂರು, ಏಪ್ರಿಲ್ 03: ಏರ್ ಇಂಡಿಯಾ ಸಂಸ್ಥೆ ಎಡವಟ್ಟು ಮಾಡಿಕೊಂಡು ಪ್ರಯಾಣಿಕರಿಗೆ ತೊಂದರೆ ನೀಡಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ತಾಂತ್ರಿಕ ದೋಷ ಹಾಗೂ ಪೈಲಟ್ ಸಮಸ್ಯೆ ಎಂದು ಸಬೂಬು ನೀಡುತ್ತಾ ಏರ್ ಇಂಡಿಯಾ ಅಧಿಕಾರಿಗಳು ಕೊನೆ ಕ್ಷಣದಲ್ಲಿ ಮಂಗಳೂರು ವಿಮಾನ ನಿಲ್ದಾಣದಿಂದ ಮುಂಬಯಿಗೆ ತೆರಳಬೇಕಾಗಿದ್ದ ವಿಮಾನವನ್ನೇ ರದ್ದುಪಡಿಸಿದ ಘಟನೆ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ.
ವಿಮಾನ ಮಂಗಳೂರಿನಿಂದ ನಿನ್ನೆ ಮಧ್ಯಾಹ್ನ (ಏಪ್ರಿಲ್ 02) 12.40 ಕ್ಕೆ ಮುಂಬಯಿಗೆ ಟೇಕ್ಆಫ್ ಆಗಬೇಕಿತ್ತು. ಆದರೆ ವಿಮಾನದಲ್ಲಿ ತಾಂತ್ರಿಕ ದೋಷದ ಕಾರಣ ನೀಡಿ ಏರ್ ಇಂಡಿಯಾದ ಅಧಿಕಾರಿಗಳು ನಿಗದಿತ ಸಮಯವನ್ನು ಎರಡೆರಡು ಬಾರಿ ಮುಂದೂಡಿದರು. ನಂತರ ವಿಮಾನದ ಬಿಡಿಭಾಗ ಬರಬೇಕೆಂದು ಅಧಿಕಾರಿಗಳು ಪ್ರಯಾಣಿಕರಿಗೆ ತಿಳಿಸಿದ್ದಾರೆ.

ಆನಂತರ ಅಂದರೆ ಸಂಜೆ ವೇಳೆಗೆ ಪೈಲಟ್ ಇಲ್ಲ ಎಂಬ ಕಾರಣ ನೀಡಿ ಕೊನೆಯ ಕ್ಷಣದಲ್ಲಿ ವಿಮಾನವನ್ನೇ ರದ್ದು ಪಡಿಸಿದ್ದಾರೆ ಎಂದು ಪ್ರಯಾಣಿಕರು ದೂರಿದ್ದಾರೆ. ವಿಮಾನದಲ್ಲಿ ವಿದೇಶ ಹಾಗೂ ಹೊಸ ದಿಲ್ಲಿಗೆ ತೆರಳಬೇಕಿದ್ದ ಕೆಲವು ಪ್ರಯಾಣಿಕರು ಅನ್ಯಮಾರ್ಗವಿಲ್ಲದೆ ಇಂಡಿಗೋ ವಿಮಾನ ಏರಬೇಕಾಯಿತು ಎಂದು ಹೇಳಲಾಗಿದೆ.
ಮುಂಬಯಿಗೆ ತೆರಳಬೇಕಿದ್ದ ಪ್ಯಾಸೆಂಜರ್ ಗಳ ಪೈಕಿ ವಿದೇಶ ಹಾಗೂ ದಿಲ್ಲಿಗೆ ತೆರಳಬೇಕಿದ್ದ ಪ್ರಯಾಣಿಕರಿದ್ದು, ಏರ್ ಇಂಡಿಯಾ ಸಂಸ್ಥೆ ಬದಲಿ ವ್ಯವಸ್ಥೆ ಮಾಡದೆ ಇರುವ ಕಾರಣ ತೀವ್ರ ತೊಂದರೆ ಅನುಭವಿಸಿದರು ಎಂದು ದೂರಲಾಗಿದೆ.
ಮುಂಬಯಿ ಮೂಲಕ ಅಮೆರಿಕ, ಅಬುದಾಬಿ ಹಾಗೂ ಸಾನ್ಫ್ರ್ಯಾನ್ ಸಿಸ್ಕೊಗೆ ತೆರಳುವ ಪ್ರಯಾಣಿಕರು ಏರ್ ಇಂಡಿಯಾ ಅಧಿಕಾರಿಗಳ ಬೇಜವಾಬ್ದಾರಿಯಿಂದ ಕಷ್ಟ ಅನುಭವಿಸಬೇಕಾಯಿತು. ಅವರೆಲ್ಲ ರಾತ್ರಿ ಇಂಡಿಗೋ ವಿಮಾನದಲ್ಲಿ ಮುಂಬಯಿಗೆ ತೆರಳಿದ್ದಾರೆ.
ಇತ್ತೀಚೆಗಷ್ಟೇ ಏರ್ ಇಂಡಿಯಾ ಎಕ್ಸ್ ಪ್ರೆಸ್ ನ ಪೈಲಟ್ ಬಾರದ ಕಾರಣ ಪ್ರಯಾಣಿಕರು ರಾತ್ರಿ ಎಲ್ಲಾ ವಿಮಾನದಲ್ಲೇ ಕಳೆದ ಪ್ರಸಂಗ ಇತ್ತೀಚೆಗೆ ಬೆಳಕಿಗೆ ಬಂದಿತ್ತು.












Click it and Unblock the Notifications